ಯಕ್ಷಗಾನಕ್ಕೆ ಅವಮಾನ: ಕ್ಷಮೆ ಕೇಳಿದ ಜೀ ಕನ್ನಡ ವಾಹಿನಿ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಯಕ್ಷಗಾನಕ್ಕೆ ಅವಮಾನ ಆರೋಪ. ಕ್ಷಮೆ ಕೇಳಿ ಬೆಂಬಲ ಬೇಡಿದ ವಾಹಿನಿ...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಸೀಸನ್6ರಲ್ಲಿ ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ವಿಶೇಷ ಅತಿಥಿ. ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಮತ್ತು ಚಿನ್ನ ಪ್ರಕಾಶ್ ಮಾಸ್ಟರ್ ತೀರ್ಪುಗಾರಿಕೆಯಲ್ಲಿ ನಡೆಯುತ್ತಿರುವ ಈ ಶೋ ಕೋಟ್ಯಾಂತರ ಜನರ ಪ್ರೀತಿ ಗಳಿಸಿದೆ. ಪ್ರತಿ ವೀಕೆಂಡ್ನಲ್ಲೂ ವಿಭಿನ್ನ ಶೈಲಿಯ ನೃತ್ಯ ಪ್ರದರ್ಶನ ಕೊಟ್ಟು ಟಿಆರ್ಪಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ವೀಕೆಂಡ್ ನಡೆದ ಘಟನೆಯಿಂದ ವೀಕ್ಷಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ಹೌದು! ಇದೇ 23 ಮತ್ತು 24 ಜುಲೈ ಪ್ರಸಾರವಾದ ಎಪಿಸೋಡ್ನಲ್ಲಿ ತಂಡವೊಂದು ಯಕ್ಷಗಾನ ಕುರಿತು ಹಾಸ್ಯಮಯವಾಗಿ ನೃತ್ಯ ಪ್ರದರ್ಶನ ಮಾಡಿದ್ದಾರೆ. ಸೂಪರ್ ಡೂಪರ್ ನೃತ್ಯ ಎಂದು ಶಿವಣ್ಣ ಅವರಿಂದ ಸ್ಟ್ಯಾಂಡಿಂಗ್ ಒವೇಷನ್ ಮತ್ತು ಗೋಲ್ಡನ್ ಹ್ಯಾಟ್ ಆಂಡ್ ಫಯರ್ ಬ್ರ್ಯಾಂಡ್ ಪಡೆದುಕೊಂಡಿದ್ದಾರೆ. ನೃತ್ಯ- ಹಾಸ್ಯ- ಯಕ್ಷಗಾನ, ಈ ಮೂರನ್ನು ಒಂದರಲ್ಲಿ ತೋರಿಸಿರುವು ತಪ್ಪು ಯಕ್ಷಗಾನಕ್ಕೆ ಬೆಲೆ ಕೊಡ ಬೇಕು ವಾಹಿನಿ ಮತ್ತು ತಂಡ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಅಗ್ರಹಿಸಿದ್ದಾರೆ.
ಜೀ ಕನ್ನಡ ಪೋಸ್ಟ್:
'ಜೀ ಕನ್ನಡ ವಾಹಿನಿಯು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೂಲಕ ಅನೇಕ ಕಲಾ ಪ್ರಕಾರಗಳನ್ನು ಗೌರವಿಸುತ್ತ, ನಾಡಿನ ಜನತೆಗೆ ಪರಿಚಯಿಸುತ್ತಲೇ ಬಂದಿದೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ. ಆದರೆ ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲವೆಂದು ವಾಹಿನಿ ಸ್ಪಷ್ಟೀಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ. ನಮ್ಮ ಅತ್ಯತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ಸಹ ನಾವು ಸ್ವಾಗತಿಸುತ್ತೇವೆ. ಇಲ್ಲಿವರೆಗೂ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರಿಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ' ಎಂದು ಪತ್ರದ ಮೂಲಕ ಕ್ಷಮೆ ಕೇಳಿದ್ದಾರೆ.
ಕಾಶ್ಮೀರದಲ್ಲಿ ನಾಗಿಣಿ; 8 ದಿನಕ್ಕೆ 50 ಸಾವಿರ ಖರ್ಚು ಮಾಡಿದ ಕಿರುತೆರೆ ನಟಿ ನಮ್ರತಾ ಗೌಡ
'ನಮ್ಮ ಎಲ್ಲ ಕಾರ್ಯಕ್ರಮಗಳನ್ನು ಪ್ರೀತಿಯಿಂದ ಪ್ರೋತ್ಸಾಹಿಸಿದ್ದೀರಿ. ಉದ್ದೇಶಪೂರ್ವಕವಲ್ಲದ ಈ ಸಂಗತಿಯನ್ನು ಕ್ಷಮಿಸುತ್ತೀರೆಂಬ ನಂಬಿಕೆ ಇದೆ. ನಿಮ್ಮ ಪ್ರೀತಿ ಬೆಂಬಲವನ್ನು ಜೀ ಕನ್ನಡ ಸದಾ ಆಶಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರ ಆಕ್ರೋಶ:
'ಜೀ ಕನ್ನಡ ವಾಹಿನಿ ಯಕ್ಷಗಾನ ಕಲೆಯನ್ನು ವಿರೂಪಗೊಳ್ಳಿಸಿ, ಅದ್ಯಾವುದೋ ಕೋರಿಯಾಗ್ರಫರ್ ಅವರ ಹೆಸರು ನನಗೆ ಗೊತ್ತಿಲ್ಲ ಆದರೆ ಅವರಿಗೆ ಈ ಕಲೆ ಬಗ್ಗೆ ಇದರ ಮೌಲ್ಯದ ಗೊತ್ತಿಲ್ಲ. ಯಕ್ಷಗಾನದ ದಿರಿಸನ್ನು ಹಾಕಿದ ತಕ್ಷಣ ಜನರಿಂದ ಚಾನೆಲ್ ಟಿಆರ್ಪೆ ಗಳಿಸುತ್ತದೆ ಅನೋ ಕಾರಣ ಬಳಸಿಕೊಂಡಿರಬಹುದು. ಅವರು ಅಮಾಯಕರು ಆಗಿರಬಹುದು ಪಾಪದವರು ಆಗಿರಬಹುದು ಆದರೆ ಯಕ್ಷಗಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ. ಸಹಿಸಿಕೊಳ್ಳುವುದು ಅತಿಯಾದರೆ ಅದನ್ನು ದೌರ್ಬಲ್ಯ ಎಂದುಕೊಳ್ಳುತ್ತೀವಿ ಅದರಲ್ಲೂ ಕರಾವಳಿಯ ಮನಸ್ಸು ಸಹಿಸಿಕೊಳ್ಳುವುದಿಲ್ಲ. ಸಾಕಷ್ಟು ಕಲಾವಿದರು ಯಕ್ಷಗಾನಕ್ಕೆ ಸಂಬಂಧಿಸಿದ್ದವರು ಅವರೆಲ್ಲಾ ಏನು ಮಾಡುತ್ತಿದ್ದಾರೆ? ಬೆಂಗಳೂರಿನಲ್ಲಿ ಅನೇಕರು ಸಂಘ ಮಾಡಿಕೊಂಡು ಕಾರ್ಯಕ್ರಮ ಮಾಡುತ್ತಾರೆ ಅವರೆಲ್ಲಾ ಯಾಕೆ ದುರ್ಬಳಕೆ ಮಾಡಿಕೊಂಡಿಲ್ಲ?' ಎಂದು ವಸಂತ್ ಗಿಳಿಯಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.