ಬಿಗ್ ಬಾಸ್ ಬೆನ್ನಲ್ಲೇ ಕಾಮಿಡಿ ಕಿಲಾಡಿಗಳಿಗೂ ಸಂಕಷ್ಟ, ಹಾಸ್ಯ ಶೋ-ವಾಹಿನಿ ವಿರುದ್ಧ ದೂರು ದಾಖಲು, ಈಗಾಗಲೇ ಬಿಗ್ ಬಾಸ್ ಶೋ ವಿರುದ್ದ ಹಲವು ಕಾರಣಗಳಿಂದ ದೂರು ದಾಖಲಾಗಿದೆ. ಇದೀಗ ಕಾಮಿಡಿ ಕಿಲಾಡಿ ಶೋ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ (ನ.22) ಖಾಸಗಿ ವಾಹನಿಗಳ ರಿಯಾಲಿಟಿ ಶೋಗಳ ವಿರುದ್ದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಒಂದೆಡೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಹಿಳೆಯರ ಅವಹೇಳನ ಸೇರಿದಂತೆ ಕೆಲ ಕಾರಣಗಳಿಂದ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಖಾಸಗಿ ವಾಹಿನಿಯ ಕಾಮಿಡಿ ಶೋ ವಿರುದ್ಧ ದೂರು ದಾಖಲಾಗಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಹಿಂದೂ ಧರ್ಮ, ದೇವರು, ಮಹಾಭಾರತ, ರಾಮಾಯಣಕ್ಕೂ ಅಪಮಾನ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಕೆಂಡಾಮಂಡಲವಾಗಿದೆ. ಭಜರಂಗದಳ, ವಿಶ್ವ ಹಿಂದೂಪರಿಷತ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡಸಿ, ದೂರು ದಾಖಲಿಸಿದೆ.
ಹಾಸ್ಯ ಕಲಾವಿದರಿಂದ ಹಿಂದೂ ಧರ್ಮಕ್ಕೆ ಅಪಮಾನ
ಕಾಮಿಡಿ ಕಿಲಾಡಿಗಳು ಕಾಮಿಡಿ ಶೋದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಬಗ್ಗೆ ಅವಹೇಳನಕಾರಿಯಾಗಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಎಂಬ ಶೋ ಮೂಲಕ ಹಾಸ್ಯ ಕಲಾವಿದರಿಂದ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಮಹಾಭಾರತ, ರಾಮಾಯಣ ಸೇರಿದಂತೆ ಹಲವು ವೇಷಧಾರಿ ಮೂಲಕ ಹಿಂದೂ ದೇವಾನು ದೇವತೆಗಳಿಗೆ ಅಪಮಾನ ಮಾಡಿದ್ದಾರೆ. ರಾಮಾಯಣ , ಮಹಾಭಾರತದ ಇತಿಹಾಸವನ್ನ ತಿರುಚಿ ಅಪಮಾನ ಮಾಡಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಹಿಂದೂ ಸಂಘಟನೆ ಕಾರ್ಯಕರ್ತರು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ. ಧರ್ಮಕ್ಕೆ ಅಪಮಾನ ಮಾಡಿದ್ದಾರೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಕಾಮಿಡಿ ಕಿಲಾಡಿಯ ಹಾಸ್ಯ ನಟರು ಹಾಗೂ ಖಾಸಗಿ ವಾಹಿನಿ ವಿರುದ್ಧ ದೂರು ದಾಖಲಾಗಿದೆ. ವಾಹಿನಿ ಹಾಗೂ ಹಾಸ್ಯ ಕಲಾವಿದರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಿಯಾಲಿಟಿ ಶೋಗಳ ವಿರುದ್ಧ ಇದೀಗ ಹಲವು ಸಂಘಟನೆಗಳು ತಮ್ಮ ಆಕ್ರೋಶ ಹೊರಹಾಕುತ್ತಿದೆ. ಬಿಗ್ ಬಾಸ್ ವಿವಾದ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ಕಾಮಿಡಿ ಕಿಲಾಡಿ ಶೋಗೂ ಸಂಕಷ್ಟ ಎದುರಾಗಿದೆ. ಕಠಿಣ ಕ್ರಮ ಕೈಗೊಳ್ಳಲಿದ್ದರೂ ಕಾಮಿಡಿ ಕಿಲಾಡಿ ಶೋ ಹಾಗೂ ಹಾಸ್ಯ ನಟರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಹಿಂದೂ ಸಂಘಟನೆ ಕಾರ್ಯಕರ್ತರ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣವನ್ನು ಹಿಂದೂ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿದೆ.


