Asianet Suvarna News Asianet Suvarna News

ಕಪ್ಪಗಿರೋದು ಅಂದ್ರೆ ಕುರೂಪನ? ರೇಸಿಸಂ ಮಾಡ್ತಿದ್ದೀರ? ದೃಷ್ಟಿಬೊಟ್ಟು ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ

 ಮುಖಕ್ಕೆ ಕಪ್ಪು ಬಣ್ಣ ಹಚ್ಚಿ ಮಗಳನ್ನು ಕಾಪಾಡುವ ದೃಷ್ಟಿಬೊಟ್ಟು ಸೀರಿಯಲ್ ಕಥೆ ಕೇಳಿ ವೀಕ್ಷಕರು ಸಿಟ್ಟೆಗೆದ್ದಿದ್ದಾರೆ. ಇದು ರೇಸಿಸಂ ಅನ್ನೋ ಕೂಗು ಕೇಳಿ ಬರ್ತಾ ಇದೆ.

colors kannada drishtibottu serial viewers commenting against beauty concept revealing in serial
Author
First Published Sep 25, 2024, 11:48 AM IST | Last Updated Sep 25, 2024, 12:04 PM IST

ಕಲರ್ಸ್ ಕನ್ನಡದಲ್ಲಿ ದೃಷ್ಟಿಬೊಟ್ಟು ಅನ್ನೋ ಸೀರಿಯಲ್ ಪ್ರಸಾರವಾಗುತ್ತಿದೆ. ಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಕುತೂಹಲಕರ ಕಥಾನಕವನ್ನು ‘ದೃಷ್ಟಿಬೊಟ್ಟು’ ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ. ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ಕಥಾನಾಯಕ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ದುರುಳ ಪೋಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುತ್ತಾಳೆ.

ಇಂಥಾ ಕಥಾಹಂದರ ಈ ಸೀರಿಯಲ್‌ನದು. ಆದರೆ ಇದೀಗ ಈ ಕಥೆಯ ಎಳೆ ಯಾಕೋ ಈ ಸೀರಿಯಲ್‌ಗೆ ಕೊಂಚ ಸಮಸ್ಯೆ ತಂದೊಡ್ಡುವಂತೆ ಕಾಣುತ್ತಿದೆ. ಕಪ್ಪು ಅಂದರೆ ಕುರೂಪ ಅಂತ ತೋರಿಸೋ ಪ್ರಯತ್ನ ಈ ಸೀರಿಯಲ್‌ನಲ್ಲಿ ಆಗಿದೆ ಅಂತ ನೆಟ್ಟಿಗರು ಕಾಮೆಂಟ್ ಮೇಲೆ ಕಾಮೆಂಟ್ ಹಾಕ್ತಿದ್ದಾರೆ. ಇದು ರೇಸಿಸಂ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.

ವೀಕ್ಷಕರ ಕಮೆಂಟ್ ಗೆ ಹೆದರಿದ್ರಾ ಡೈರೆಕ್ಟರ್, ಚೇಂಜ್ ಆಯ್ತು ಶ್ರೀರಸ್ತು ಶುಭಮಸ್ತು ಕಥೆ

ಕಲರ್ಸ್ ಕನ್ನಡದಲ್ಲಿ ದೃಷ್ಟಿಬೊಟ್ಟು ಅನ್ನೋ ಸೀರಿಯಲ್ ಬಂದಾಗ ಜನ ಎಲ್ಲ 'ಬ್ರಹ್ಮಗಂಟು' ಅನ್ನೋ ಜೀ ಕನ್ನಡದ ಸೀರಿಯಲ್ ಜೊತೆ ಲಿಂಕ್ ಮಾಡಲು ಶುರು ಮಾಡಿದರು. ಏಕೆಂದರೆ ಅದರಲ್ಲೂ ನಾಯಕಿಗೆ ಸೋ ಕಾಲ್ಡ್ ಅಂದ ಚೆಂದ ಇಲ್ಲ. ಆದರೆ ಈ ಸೀರಿಯಲ್‌ನಲ್ಲಿ ನಾಯಕಿಯನ್ನು ಕುರೂಪಿ ಅಂತ ಬಿಂಬಿಸಿದರೂ ಆಕೆ ಪರಿಸ್ಥಿತಿಯ ಅನಿವಾರ್ಯತೆಗೆ ಸಿಕ್ಕಿ ಕುರೂಪಿಯಾಗಿರ್ತಾಳೆ. ಒರಿಜಿನಲೀ ಆಕೆ ನೋಡೋಕೆ ಚೆನ್ನಾಗಿರುವ ಹುಡುಗಿ ಅನ್ನೋದಿತ್ತು. ಈಕೆ ಕುರೂಪಿಯಾಗಿಯೇ ಈ ಸೀರಿಯಲ್‌ನ ಅರ್ಧ ಭಾಗದವರೆಗೆ ಆದರೂ ಕಾಣಿಸಿಕೊಳ್ಳಬಹುದು ಅಂತ ವೀಕ್ಷಕರು ಗೆಸ್ ಮಾಡಿದ್ದರು. ಆದರೆ ಅದಾಗಲಿಲ್ಲ. ದೃಷ್ಟಿಗೆ ಹಣದ ಅವಶ್ಯಕತೆ ಇತ್ತು. ಅಮ್ಮನನ್ನು ಕಾಪಾಡಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ ಎಂದು ಒಪ್ಪಿಕೊಂಡು ಬಿಟ್ಟಳು. ಆಗ ಪೊಲೀಸ್ ಅಧಿಕಾರಿ ಕರೆದುಕೊಂಡು ಹೋಗಿ ಜನರ ಮುಂದೆ ಕೂರಿಸಿದ. ಎಲ್ಲರು ಕಲ್ಲು ಹೊಡೆದರು, ಬೆಂಕಿ ಹೊತ್ತಿಸುವಷ್ಟರಲ್ಲಿ ಮಳೆ ಬಂತು. ಮಳೆರಾಯನಿಂದ ದೃಷ್ಟಿಯ ನಿಜ ಬಣ್ಣ ಬಯಲಾಯ್ತು. ಕಪ್ಪು ಬಣ್ಣ ಕರಗಿ ಹೋಯ್ತು. ಯಾರು ಕೂರೂಪಿ ಎನ್ನುತ್ತಿದ್ದರೋ ಅವರೆಲ್ಲ ಸ್ಪುರದ್ರೂಪಿ ಎನ್ನುವ ಹಾಗೆ ಆಯ್ತು.

ಆ ಬಳಿಕ ದೃಷ್ಟಿಯ ತಾಯಿಯೇ ಪೊಲೀಸ್ ಎದುರು ತನ್ನ ಮಗಳು ಕುರೂಪಿ ಅಲ್ಲ, ನೋಡೋದಕ್ಕೆ ಚೆನ್ನಾಗಿಯೇ ಇದ್ದಾಳೆ. ಅವಳನ್ನು ಕಾಪಾಡಲೋಸ್ಕರ ತಾನೇ ಅವಳ ಮುಖಕ್ಕೆ ಮಸಿ ಬಳಿಯುತ್ತಿದ್ದೆ ಅಂದುಬಿಟ್ಟಿದ್ದಾಳೆ. ಇದರ ಜೊತೆಗೆ ದೃಷ್ಟಿ ಬಾಲ್ಯದ ಎಪಿಸೋಡ್ ಒಂದು ರಿವೀಲ್ ಆಗಿದೆ. ಅದರಲ್ಲಿ ತಾಯಿ ದೃಷ್ಟಿಗೆ ಅವಳ ಸೌಂದರ್ಯವೇ ಶತ್ರು ಆಗುತ್ತೆ ಎಂಬ ಆತಂಕದಲ್ಲಿ ಎಳೆ ಹುಡುಗಿಗೆ ಕಪ್ಪು ಬಣ್ಣ ಬಳಿಯುವ ದೃಶ್ಯ ಇದೆ.

ತೆರೆ ಮೇಲೆ ಕೀರ್ತಿಗಾಗಿ ಲಕ್ಷ್ಮೀ ಹೋರಾಟ, ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ -ಲಕ್ಷ್ಮಿ ಫ್ಯಾನ್ಸ್ ಗುದ್ದಾಟ!

ಇದು ಹಲವರಿಗೆ ಸಿಟ್ಟು ತರಿಸಿದೆ. ಬಿಳಿ ಬಣ್ಣ ಸೌಂದರ್ಯದ ಸಂಕೇತವಾ, ಕಪ್ಪು ಬಣ್ಣ ಕುರೂಪವಾ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ತನ್ನ ರೂಪ ರಿವೀಲ್ ಆದ ಆಮೇಲೆ ದೃಷ್ಟಿ ಅಮ್ಮನೆದುರು ಬಂದು ಕಪ್ಪು ಬಣ್ಣು ಕೊಟ್ಟು, ಇದನ್ನು ಹಚ್ಚಮ್ಮಾ ಅಂತಿದ್ದಾಳೆ. ಅಂದರೆ ಕಪ್ಪು ಬಣ್ಣ ಅಂದರೆ ಕುರೂಪವಾ? ಕಪ್ಪು ಬಣ್ಣದಲ್ಲಿರುವವರೆಲ್ಲ ಕುರೂಪಿಗಳಾ? ಇದು ರೇಸಿಸಂ ಅಲ್ವಾ ಅಂತೆಲ್ಲ ನೆಟ್ಟಿಗರು ಗರಂ ಆಗಿ ಕಾಮೆಂಟ್ ಮಾಡ್ತಿದ್ದಾರೆ.

ಇಂಥಾ ಸೂಕ್ಷ್ಮ ವಿಚಾರಗಳನ್ನು ಸರಿಯಾಗಿ ಹ್ಯಾಂಡಲ್ ಮಾಡದಿದ್ದರೆ ಈ ವಿಚಾರಗಳೇ ಈ ಸೀರಿಯಲ್‌ಗೆ ಸಮಸ್ಯೆ ಆಗುವ ಸಾಧ್ಯತೆ ಇದೆ.

Latest Videos
Follow Us:
Download App:
  • android
  • ios