ಬಿಗ್​ಬಾಸ್​ ಡ್ರೋನ್​ ಪ್ರತಾಪ್​ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಡ್ರೋನ್​ ನೀಡುವುದಾಗಿ ಹೇಳಿ ವಂಚನೆ ಮಾಡಿರುವುದಾಗಿ ಗಂಭೀರ ಆರೋಪ ಮಾಡಲಾಗಿದೆ. 

ಬಿಗ್​ಬಾಸ್​ ಸೀಸನ್​ 10 ಫಿನಾಲೆಗೆ ಕ್ಷಣಗಣನೆಗೆ ಆರಂಭವಾಗಿದೆ. ಮನೆಯಲ್ಲಿ ಆರು ಮಂದಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಪ್ರಬಲ ಸ್ಪರ್ಧಿ ಎನಿಸಿಕೊಂಡವರು ಡ್ರೋನ್​ ಪ್ರತಾಪ್​. ಬಿಗ್​ಬಾಸ್​ಗೂ ಮುನ್ನ ಡ್ರೋನ್​ ಪ್ರತಾಪ್​ ಯುವಕರ ಐಕಾನ್​ ಆಗಿದ್ದವರು. ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಬಿಗ್​ಬಾಸ್​​ನಲ್ಲಿ ಕಾಣಿಸಿಕೊಂಡಿದ್ದು ಫಿನಾಲೆ ತಲುಪಿದ್ದಾರೆ ಪ್ರತಾಪ್​.

Add Asianetnews Kannada as a Preferred SourcegooglePreferred

ಇವರ ವಿರುದ್ಧ ಇದಾಗಲೇ ಬಿಬಿಎಂಪಿ ಅಧಿಕಾರಿಗಳು ಮಾನನಷ್ಟ ಮೊಕದ್ದಮೆ ಕೇಸ್​ ದಾಖಲು ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಈ ಸಂದರ್ಭದಲ್ಲಿ ಅವರು ದುಃಖಕರ ವಿಷಯವೊಂದನ್ನು ಹಂಚಿಕೊಂಡಿದ್ದು, ಅದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದ ಪ್ರತಾಪ್​, ಕೋವಿಡ್​ ಸಮಯದಲ್ಲಿ ತಮಗೆ ಅಧಿಕಾರಿಗಳು ಹಿಂಸೆ ಕೊಟ್ಟಿರುವುದಾಗಿ ಹೇಳಿದ್ದರು. ಕೋವಿಡ್ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ಆದರೆ ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಯ್ತು. ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಚಿತ್ರಹಿಂಸೆ ಕೊಟ್ಟರು. ತಲೆ-ತಲೆಗೆ ಹೊಡೆದರು, ಕೆಟ್ಟದಾಗಿ ಮಾತನಾಡಿದರು ಎಂದು ಪ್ರತಾಪ್​ ಹೇಳಿದ್ದರು. ಅದೇ ಸಮಯದಲ್ಲಿ ಅಪ್ಪ-ಅಮ್ಮನ ಬಳಿ ನನ್ನ ಬಗ್ಗೆ ಇಲ್ಲ-ಸಲ್ಲದ ದೂರುಗಳನ್ನು ಹೇಳಿದರು. ವಿಷವಿಟ್ಟು ಸಾಯಿಸಿ ಎಂದೆಲ್ಲ ಐಡಿಯಾ ಕೊಟ್ಟರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವೆಲ್ಲಾ ಸುಳ್ಳು ಎಂದು ಬಿಬಿಎಂಪಿ ಅಧಿಕಾರಿಗಳು ಕೇಸ್​ ದಾಖಲಿಸಿದ್ದಾರೆ.

ಮಾನನಷ್ಟ ಮೊಕದ್ದಮೆ ಕೇಸ್​ ಬೆನ್ನಲ್ಲೇ, ಬಿಗ್ ಬಾಸ್ ಜೈಲು ಪಾಲಾದ ಡ್ರೋನ್​ ಪ್ರತಾಪ್​! ಫ್ಯಾನ್ಸ್​ ಶಾಕ್​...

ಇದರ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್​ ಎದುರಾಗಿದೆ. ಇದಾಗಲೇ ಕೆಲವರು ಡ್ರೋನ್​ ವಿಷಯದಲ್ಲಿ ಪ್ರತಾಪ್​ ಕಾಗೆ ಹಾರಿಸಿದ್ದ ಎಂದು ಗಂಭೀರ ಆರೋಪ ಮಾಡಿದ್ದಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಮೂಲದ ಸಾರಂಗ್ ಮಾನೆ ಎನ್ನುವವರು ಇದೀಗ ಇನ್ನೊಂದು ಆರೋಪ ಮಾಡಿದ್ದಾರೆ. 9 ಡ್ರೋನ್ ಕೊಡೋದಾಗಿ ಹೇಳಿದ್ದ ಪ್ರತಾಪ್ ತಮಗೆ ವಂಚಿಸಿರುವುದಾಗಿ ಅವರು ಹೇಳಿದ್ದಾರೆ. ಮುಂಗಡ ಹಣವಾಗಿ 35 ಲಕ್ಷದ 75 ಸಾವಿರ ರೂಪಾಯಿ ನೀಡಲಾಗಿತ್ತು. ಆದರೆ ನಾನು ಹೇಳಿದಂತೆ ಡ್ರೋನ್​ ನಿಡಲಿಲ್ಲ. ತಾವು ದುಡ್ಡು ವಾಪಸ್​ ನೀಡುವಂತೆ ಇ-ಮೇಲ್​ ಮೂಲಕ ವಾರ್ನ್​ ಕೂಡ ಮಾಡಿದ್ದರೂ ದುಡ್ಡು ಕೊಟ್ಟಿಲ್ಲ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಎಕ್ಸಿಬಿಶನ್ ಸಂದರ್ಭದಲ್ಲಿ ಪ್ರತಾಪ್ ಪರಿಚಯವಾಗಿತ್ತು. ಕೃಷಿ ಜಮೀನಿಗೆ ಔಷಧಿ ಸಿಂಪಡಿಸುವ ಸಲುವಾಗಿ ಡ್ರೋನ್ ಕೇಳಿದ್ದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಮ್ಮಿಬ್ಬರ ನಡುವೆ ಒಪ್ಪಂದ ಕೂಡ ಆಗಿದೆ. 38 ಲಕ್ಷ ರೂಪಾಯಿ ಹಣ ಕಳಿಸಿದ್ದರ ಬಗ್ಗೆ ದಾಖಲೆ ಇದೆ. ಆದರೆ ಡ್ರೋನ್ ನೀಡಲೂ ಇಲ್ಲ, ಹಣನೂ ವಾಪಸ್​ ಮಾಡಿಲ್ಲ ಎಂದಿದ್ದಾರೆ.

ಆದರೆ, ​ಡ್ರೋನ್ ಪ್ರತಾಪ್ ಕಂಪೆನಿಯ ನಿರ್ದೇಶಕರಾಗಿರುವ ಮಾಧವ್ ಕಿರಣ್ ಮೋಸ ಮಾಡಿರುವ ವಿಷಯವನ್ನು ಅಲ್ಲಗಳೆದಿದ್ದಾರೆ. ಒಪ್ಪಂದ ಮಾಡಿಕೊಂಡಿದ್ದು ನಿಜ. ಪ್ರತಾಪ್​ಗೆ ಡ್ರೋನ್ ವಿಚಾರಕ್ಕೆ ಸುಮಾರು ಬೇಡಿಕೆ ಬಂತು. ಅದಕ್ಕೆ ಕೊಡಲು ಆಗಿರಲಿಲ್ಲ. ಸಾರಂಗ್​ ಅವರಿಗೆ ಪ್ರತಾಪ್​ ಹಣ ಕೊಡಬೇಕು ಎನ್ನುವುದು ಸುಳ್ಳು. ಅವರು ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಾರೆ.

ಹೇಳಿಕೆ ತಿರುಚಲಾಗುತ್ತಿದೆ ಎನ್ನುತ್ತಲೇ ಗುಡ್‌ ನ್ಯೂಸ್‌ ಕೊಟ್ಟ ಬಿಗ್‌ಬಾಸ್‌ ಬುಲೆಟ್‌ ರಕ್ಷಕ್‌