ಧರ್ಮಸ್ಥಳ ಪಾರ್ಕ್ಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ, ದೇವ್ರ ದಿಂಡ್ರೂ ನಾನು ನಂಬಲ್ಲ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಹೇಳಿದ್ದಾರೆ. ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.
ಬೆಂಗಳೂರು (ಜ.26) ಬಿಗ್ ಬಾಸ್ 12ರಲ್ಲಿ ಸ್ಪರ್ಧಿಯಾಗಿ ಮನೆ ಸೇರಿಕೊಂಡ ಡಾಗ್ ಸತೀಶ್ ಅಷ್ಟೇ ಬೇಗದಲ್ಲಿ ಹೊರಬಂದು ರಂಗು ರಂಗಿನ ಹೇಳಿಕೆ ಮೂಲಕ ಜನಪ್ರಿಯರಾಗಿದ್ದಾರೆ. ಇದೀಗ ನಟ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಸಮರ್ಥನೆ ಮಾಡುವ ಭರದಲ್ಲಿ ಧರ್ಮಸ್ಥಳ ಭಕ್ತರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ದೇವ್ರು ದಿಂಡ್ರೂ ನಾನು ನಂಬೋದಿಲ್ಲ. ಯಾರು ಬೇಕಾದರೂ ಮಾಂಸಾಹಾರ ತಿನ್ನ ಬಹುದು ಎಂದಿರುವ ಡಾಗ್ ಸತೀಶ್, ತಾನು ಧರ್ಮಸ್ಥಳ ದೇವಸ್ಥಾನ ಬಳಿ ಇರುವ ಪಾರ್ಕ್ನಲ್ಲಿ ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಿಂದಿದ್ದೇನೆ ಎಂದಿದ್ದಾರೆ. ಈ ಹೇಳಿಕೆಯಿಂದ ಆಕ್ರೋಶಗಳು ಭುಗಿಲೆದ್ದಿದೆ.
ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಹೇಳಿಕೆ ನೀಡಿದ ಡಾಗ್ ಸತೀಶ್, ಯಾರು, ಯಾವ ದಿನ ಬೇಕಾದರು ಮಾಂಸಾಹಾರ ತಿನ್ನಬಹುದು. ನಾನು ವರ್ಷದ 365 ದಿನ ನಾನ್ ವೆಜ್ ತಿನ್ನುತ್ತೇನೆ. ಸೋಮವಾರನೂ ತಿನ್ನುತ್ತೇನೆ, ಇತರ ದಿನವೂ ತಿನ್ನುತ್ತೇನೆ. ಗಣೇಶ ಹಬ್ಬ, ಗೌರಿ ಹಬ್ಬ ಸೇರಿದಂತೆ ಸಸ್ಯಾಹಾರ ಸೇವನೆ ಹಬ್ಬಗಳ ದಿನದಲ್ಲೂ ನಾನು ಮಾಂಸಾಹಾರ ತಿನ್ನುತ್ತೇನೆ ಎಂದು ಡಾಗ್ ಸತೀಶ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಾನ್ ವೆಜ್ ತಿಂದೆ
ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮತ್ತೆ ರಂಗು ರಂಗಿನ ಮಾತುಗಳನ್ನಾಡಿದ ಡಾಗ್ ಸತೀಶ್ ಈ ಬಾರಿ ಎಲ್ಲಾ ಲಿಮಿಟ್ ಮೀರಿ ಮಾತನಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಾನು ಕಾಲೇಜು ದಿನಗಳಲ್ಲಿರುವಾಗ ಗೆಳೆಯರ ಒತ್ತಾಯಕ್ಕೆ ಧರ್ಮಸ್ಥಳಕ್ಕೆ ತೆರಳಿದ್ದೆ. ನಾನು ದೇವರು ದಿಂಡ್ರೂ ನಂಬೋದಿಲ್ಲ. ಆದರೆ ಗೆಳೆಯರ ಜೊತೆಗೆ ಧರ್ಮಸ್ಥಳಕ್ಕೆ ಹೋದಾಗ, ಧರ್ಮಸ್ಥಳದ ಪಾರ್ಕ್ನಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ ಎಂದಿದ್ದಾರೆ.
ಡಾಗ್ ಸತೀಶ್ ವಿರುದ್ಧ ಆಕ್ರೋಶ
ಡಾಗ್ ಸತೀಶ್ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಡಾಗ್ ಸತೀಶ್ ದೇವರನ್ನು ನಂಬಬೇಕು ಎಂದು ಯಾರು ಹೇಳಿಲ್ಲ, ಯಾರೂ ಒತ್ತಾಯಿಸಿಲ್ಲ. ಆದರೆ ದೇವರನ್ನು ನಂಬುವ ಭಕ್ತರ ನಂಬಿಕೆಗೆ ಘಾಸಿ ಮಾಡಿದ್ದೀರಿ. ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವ ಪ್ರಯತ್ನ ಮಾಡಿದ್ದೀರಿ. ಇದಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಭಕ್ತರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಡಾಗ್ ಸತೀಶ ದೇವರನ್ನು ನಂಬಲ್ಲ, ಜನ ಡಾಗ್ ಸತೀಶನ ನಂಬಲ್ಲ ಇಷ್ಟೇ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಿಗ್ ಬಾಸ್ ಮನೆ ಒಳಗೆ ಹಾಗೂ ಮನೆಯಿಂದ ಹೊರಬಂದ ಬಳಿಕ ಡಾಗ್ ಸತೀಶ್ ನೀಡುತ್ತಿರುವ ಹೇಳಿಕೆಗೆ ನಗೆಪಾಟಲೀಗೀಡಾಗುತ್ತಿದೆ. ಡಾಗ್ ಸತೀಶ್ ಹೇಳುವುದೆಲ್ಲಾ ಸುಳ್ಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದರ ನಡುವೆ ಭಕ್ತರ ನಂಬಿಕೆ, ಆಚರಣೆಗೆ ವಿರುದ್ಧವಾಗಿ ನಡೆದುಕೊಂಡ ಡಾಗ್ ಸತೀಶ್ ವಿರುದ್ಧ ಕೆಲವರು ಕ್ರಮಕ್ಕೆ ಆಗ್ರಹಿಸಿದ್ದರೆ. ಧರ್ಮಸ್ಥಳಕ್ಕೆ ದ್ರೋಹ ಬಗೆದವರು ಉಳಿದಿಲ್ಲ ಎಂದು ಭಕ್ತರು ಎಚ್ಚರಿಕೆ ನೀಡಿದ್ದಾರೆ.


