ಬಿಗ್ಬಾಸ್ ಡ್ರೋನ್ ಪ್ರತಾಪ್ ಅತಿದೊಡ್ಡ ಸುಳ್ಳುಗಾರ: ಮಾನನಷ್ಟ ಕೇಸ್ ದಾಖಲಿಸಿದ ಬಿಬಿಎಂಪಿ ಅಧಿಕಾರಿ!
ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಕೋವಿಡ್ ಕ್ವಾರಂಟೈನ್ ಅವಧಿಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
![BBMP officer defamation case filed against Bigg Boss drone Prathap sat BBMP officer defamation case filed against Bigg Boss drone Prathap sat](https://static-ai.asianetnews.com/images/01hmdqj1f9xf42dhhp0b21wh7m/drone-prathap--1-_363x203xt.jpg)
ಬೆಂಗಳೂರು (ಜ.18): ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ಮಹಾಮಾರಿ ಬೆಂಗಳೂರಿನಲ್ಲಿಯೂ ಹೆಚ್ಚಾಗಿದ್ದಾಗ ಬಿಬಿಎಂಪಿ ಅಧಿಕಾರಿಗಳು ನನಗೆ ತಲೆಯ ಮೇಲೆ ಹೊಡೆದು, ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ನೋಡಲ್ ಅಧಿಕಾರಿ ಡ್ರೋನ್ ಪ್ರತಾಪ್ ಮಹಾ ಸುಳ್ಳುಗಾರ. ಅವನು ಹೇಳುತ್ತಿರುವುದೆಲ್ಲಾ ಶುದ್ಧ ಸುಳ್ಳು. ಆತ ಹೇಳಿದ್ದಕ್ಕೆ ಒಂದು ಸಾಕ್ಷಿ ಕೊಟ್ಟರೂ ನಾನು ಕೆಲಸ ಬಿಟ್ಟು ಹೋಗುತ್ತೇನೆ. ಸುಳ್ಳು ಹೇಳಿ ಮಾನಹಾನಿ ಮಾಡಿದ್ದಕ್ಕೆ ಡ್ರೋನ್ ಪ್ರತಾಪ್ ವಿರುದ್ಧ 50 ಲಕ್ಷ ರೂ. ಮೌಲ್ಯದ ಮಾನಹಾನಿ ಕೇಸ್ ದಾಖಲು ಮಾಡಿದ್ದಾಗಿ ತಿಳಿದುಬಂದಿದೆ.
ಬಿಗ್ಬಾಸ್ ಸೀಸನ್ 10ರ ಫೈನಲ್ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಕೇವಲ 8 ಮಂದಿ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅವರಲ್ಲಿ ಡ್ರೋನ್ ಪ್ರತಾಪ್ ಅವರೂ ಕೂಡ ಒಬ್ಬರಾಗಿದ್ದಾರೆ. ಆದರೆ, ತನ್ನ ಬಗ್ಗೆ ಹಲವು ನೋವಿನ ವಿಚಾರಗಳನ್ನು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುತ್ತಾನೆ ಎಂದು ಹೇಳಲಾಗುವ ಡ್ರೋನ್ ಪ್ರತಾಪ್ ಅವರು, ಕೋವಿಡ್ ವೇಳೆ ನಡೆದ ಘಟನೆಯ ಬಗ್ಗೆಯೂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೋವಿಡ್ ಬರುವುದಕ್ಕೂ ಮುನ್ನ ಮಾಧ್ಯಮಗಳಲ್ಲಿ ಡ್ರೋನ್ ಪ್ರತಾಪ್ ಸುಳ್ಳು ಹೇಳಿ ರಾಜ್ಯದ ಜನತೆಗೆ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇದರ ನಂತರ ಕೋವಿಡ್ ವೇಳೆ ಪ್ರತಾಪ್ ಕೂಡ ಕರೊನಾ ಸೋಂಕಿಗೆ ಒಳಗಾಗಿದ್ದನು.
ಡ್ರೋನ್ ಪ್ರತಾಪ್ಗೆ 'ಕಾಗೆ' ಅಂದು ಕನ್ನಡಿಗರ ಕೋಪಕ್ಕೆ ಗುರಿಯಾದ ಇಶಾನಿ
ಈ ವೇಳೆ ಡ್ರೋನ್ ಪ್ರತಾಪ್ ಅವರನ್ನು ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಿದ್ದ ಬಿಬಿಎಂಪಿ ನೋಡಲ್ ಅಧಿಕಾರಿಗಳು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್ಸ್ಟೇಬಲ್ ಅಂತಾ ಸಹಿ ಮಾಡುವಂತೆ ತಲೆತಲೆಗೆ ಹೊಡೆದಿದ್ದರು. ಹೋಟೆಲ್ನಿಂದ ಹೊರಗೆ ಬಂದ ನಂತರ ನನಗೆ ಬಿಬಿಎಂಪಿ ಅಧಿಕಾರಿಗಳು ಕೊಟ್ಟ ಕಿರುಕುಳದ ಬಗ್ಗೆ ಹೇಳಿದೆ. ಆಗ, ಇವನು ಹೇಳೋದು ಬರೀ ಸುಳ್ಳು.. ಇವನ ಮಾತನ್ನು ಯಾರೂ ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಅವರನ್ನು ಕಳುಹಿಸಿದರು. ಕ್ವಾರಂಟೈನ್ನಲ್ಲಿ ಮಾನಸಿಕ ಹಿಂಸೆ ಕೊಟ್ಟು, ನಾನು ಅರೆ ಹುಚ್ಚನೆಂದು ಪೇಪರ್ಗೆ ಸಹಿ ಹಾಕುವಂತೆ ಒತ್ತಾಯಿಸಿದರು ಎಂದು ಡ್ರೋನ್ ಪ್ರತಾಪ್ ಆರೋಪ ಮಾಡಿದ್ದರು. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಕೂಡ ತಿರುಗಿ ಬಿದ್ದಿದ್ದಾರೆ.
ಅಭಿಮಾನಿಗಳ ಸಾವಿನ ಶಾಕ್ನಿಂದ ಚೇತರಿಸಿಕೊಳ್ಳದ ಯಶ್; ಸಿನಿಮಾನೂ ಮಾಡ್ತಿಲ್ಲ, ಹೊರಗೂ ಹೋಗ್ತಿಲ್ಲ!
ಪ್ರತಾಪ್ ಅವರಿಗೆ ಕೋವಿಡ್ ಬಂದಾಗ ಕ್ವಾರಂಟೈನ್ನ ರೋಗಿಗಳನ್ನು ನೋಡಿಕೊಳ್ಳಲಿ ನಿಯೋಜನೆಗೊಂಡಿದ್ದ ಬಿಬಿಎಂಪಿ ನೋಡಲ್ ಅಧಿಕಾರಿ ಪ್ರಯಾಗ್ ಅವರು ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಮೂಲಗಳು ತಿಳಿದುಬಂದಿದೆ. ಪಾಲಿಕೆ ಅಧಿಕಾರಿ ಪ್ರಯಾಗ್ ರಾಜ್ 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವಿಚಾರಕ್ಕೆ ವಾದ – ಪ್ರತಿವಾದ ನಡೆದಿದ್ದು, ಇಂದು ಸಂಜೆಯೊಳಗೆ ಕೋರ್ಟ್ನಿಂದ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ವಕೀಲರು ತಿಳಿಸಿದ್ದಾರೆ.