ಕನ್ನಡ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಮಾವ ಬುಚ್ಚಿ ರೆಡ್ಡಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಂಸಾರಿಕ ಕಲಹವಲ್ಲ, ಖಿನ್ನತೆಯೇ ಸಾವಿಗೆ ಕಾರಣ ಎಂದು ಹೇಳಿದ್ದಾರೆ. ಶೋಭಿತಾ ಅವರನ್ನು ಮೊದಲ ಮಗುವಿನಂತೆ ನೋಡಿಕೊಂಡಿದ್ದಾಗಿ ತಿಳಿಸಿದ್ದಾರೆ.

ಹೈದರಾಬಾದ್‌ (ಡಿ.2): ಕನ್ನಡದ ಸಿನಿಮಾ ಹಾಗೂ ಸೀರಿಯಲ್‌ ನಟಿ ಶೋಭಿತಾ ಶಿವಣ್ಣ ಸಾವಿನ ಬಗ್ಗೆಯ ಆಕೆಯ ಮಾವ ಬುಚ್ಚಿ ರೆಡ್ಡಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಭಾನುವಾರ ಹೈದರಾಬಾದ್‌ನ ತಮ್ಮ ಮನೆಯಲ್ಲಿಯೇ ಶೋಭಿತಾ ಶಿವಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಆಕೆಯ ಪತಿ ಸುಧೀರ್‌ ರೆಡ್ಡಿ ಕುಟುಂಬಕ್ಕೂ ಆಘಾತ ತಂದಿದೆ. ಸಾಂಸಾರಿಕ ಸಮಸ್ಯೆಗಳಿಂದ ಆಕೆ ಸಾವು ಕಂಡಿರಬಹುದು ಎನ್ನುವ ಅನುಮಾನಗಳು ಮೊದಲಿಗೆ ಬಂದಿದ್ದವು. ಆದರೆ, ಆಕೆ ಖಿನ್ನತೆಯಿಂದ ಬಳಲುತ್ತಿದ್ದರು. ಹಾಗಾಗಿಯೇ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರ ರಾತ್ರಿಯೇ ಅವರ ಹುಟ್ಟೂರಾದ ಹಾಸನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

ಶೋಭಿತಾ ಸಾವಿನ ಬಳಿಕ ಹೈದರಾಬಾದ್‌ನ ಮಾಧ್ಯಮಗಳಿಗೆ ಮಾತನಾಡಿರುವ ಆಕೆಯ ಮಾವ ಬುಚ್ಚಿ ರೆಡ್ಡಿ, ನಾವು ಶೋಭಿತಾರನ್ನು ನಮ್ಮ ಮೊದಲ ಮಗುವಿನಂತೆ ನೋಡಿಕೊಂಡಿದ್ದೆವು. ನಮ್ಮೊಂದಿಗೂ ಕೂಡ ಶೋಭಿತಾ ಆತ್ಮೀಯವಾಗಿ ಬೆರೆಯುತ್ತಿದ್ದಳು ಎಂದು ಆಸ್ಪತ್ರೆಯಲ್ಲಿ ಬುಚ್ಚಿ ರೆಡ್ಡಿ ಮಾತನಾಡಿದ್ದಾರೆ. 'ಮದುವೆ ಆಗುವವರೆಗೂ ಆಕೆ ದೊಡ್ಡ ಸೆಲೆಬ್ರಿಟಿ ಅನ್ನೋದು ನಮಗೆ ಗೊತ್ತಿರಲಿಲ್ಲ. ನನ್ನ ಪುತ್ರ ಸುಧೀರ್‌ ರೆಡ್ಡಿ ಹಾಗೂ ಶೋಭಿತಾ ಶಿವಣ್ಣ ಇಬ್ಬರ ಒಪ್ಪಿಗೆಯೊಂದಿಗೆ ಮದುವೆ ಆಗಿದ್ದರು. ಅವರ ನಡುವೆ ಯಾವುದೇ ರೀತಿಯ ಗಲಾಟೆಗಳು ಕೂಡ ಆಗ್ತಾ ಇರ್ಲಿಲ್ಲ. ನನ್ನ ಪುತ್ರನ ಬಾಳಲ್ಲಿ ಈಗ ಶೋಕ ಆವರಿಸಿದೆ. ಆತನ ಬಾಳಿಗೆ ಹಾಗೂ ನಮ್ಮ ಕುಟುಂಬಕ್ಕೆ ದೊಡ್ಡ ನಷ್ಟ ಇದು. ಇತ್ತೀಚೆಗೆ ಗಂಡ-ಹೆಂಡತಿ ಇಬ್ಬರೂ ಗೋವಾಕ್ಕೆ ಖುಷಿಯಾಗಿಯೇ ಹೋಗಿ ಬಂದಿದ್ದರು. ತುಂಬಾ ಸಂತೋಷವಾಗಿ ಅವರ ಜೀವನವಿತ್ತು. ಆಕೆಯ ಆಯ್ಕೆಗಳ ಬಗ್ಗೆ ಆಕೆಯ ಕೆಲಸಗಳ ನನ್ನ ಪುತ್ರ ಬಹಳ ಮೆಚ್ಚಿಕೊಳ್ಳುತ್ತಿದ್ದ. ಯಾವುದೇ ಕಾರಣಕ್ಕೂ ಅವರ ನಿರ್ಧಾರವನ್ನು ನನ್ನ ಪುತ್ರ ಧಿಕ್ಕರಿಸುತ್ತಿರಲಿಲ್ಲ. ಹಾಗಾಗಿ ಈ ಸಾವಿನ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬೇಡಿ' ಎಂದು ಹೇಳಿದ್ದಾರೆ.

ಪೊಲೀಸರಿಗೆ ಸಿಕ್ತು ಶೋಭಿತಾ ಶಿವಣ್ಣ ಡೆತ್‌ ನೋಟ್‌, ಸ್ಫೋಟಕ ಮಾಹಿತಿ ಬಹಿರಂಗ..

ಆಕೆ ನಮ್ಮ ಮನೆಯ ಸೊಸೆ ಹಾಗಾಗಿ ತೆಲಂಗಾಣ ಸಂಪ್ರದಾಯದಂತೆ ಆಕೆಯ ಅಂತ್ಯಸಂಸ್ಕಾರ ನಡೆಸಬೇಕು ಎಂದು ನಾವು ಬಯಸಿದ್ದೆವು. ಈ ಬಗ್ಗೆ ಅವರ ಕುಟುಂಬದವರಿಗೂ ಕೇಳಿದ್ದೆವು. ಆದರೆ, ಆಕೆಯ ಅಂತ್ಯಸಂಸ್ಕಾರ ಕರ್ನಾಟಕದಲ್ಲಿರುವ ಆಕೆಯ ಹುಟ್ಟೂರಲ್ಲೇ ಆಗಬೇಕು ಅನ್ನೋದು ಅವಳ ಕೊನೆಯ ಆಸೆ ಆಗಿತ್ತಂತೆ. ನಾವು ಅವರ ನಿರ್ಧಾರವನ್ನು ಸ್ವಾಗತಿಸಿದೆವು. ಅವರಿಗೆ ನೋವು ಮಾಡೋದು ಕೂಡ ನಮಗೆ ಇಷ್ಟವಿದ್ದಿರಲಿಲ್ಲ. ನಮ್ಮ ಮೇಲೂ ಅವರೇನೂ ಕೂಗಾಟ ಮಾಡಲಿಲ್ಲ. ಅಂತ್ಯಸಂಸ್ಕಾರಕ್ಕೆ ಬರುವಂತೆ ಅವರು ನಮಗೆ ತಿಳಿಸಿದ್ದಾರೆ. ಈ ಬಗ್ಗೆ ನಾವು ಯೋಚಿಸಿ ನಿರ್ಧಾರ ಮಾಡಲಿದ್ದೇವೆ ಎಂದು ಬುಚ್ಚಿ ರೆಡ್ಡಿ ತಿಳಿಸಿದ್ದಾರೆ.

ಶೋಭಿತಾ ಶಿವಣ್ಣ ಮರಣೋತ್ತರ ಪರೀಕ್ಷೆ ಮುಕ್ತಾಯ, ವೈದ್ಯರು ಹೇಳಿದ್ದೇನು?

ಈ ನಡುವೆ ಶೋಭಿತಾ ಶಿವಣ್ಣ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ದೇಹದ ಮೇಲೆ ಯಾವುದೇ ಗಾಯದ ಗುರುತು ಆಗಿಲ್ಲ ಎನ್ನಲಾಗಿದೆ. ಅಲ್ಲದೆ, ವೈದ್ಯರು ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೃಢಪಡಿಸಿದ್ದಾರೆ. ಇನ್ನು ಶೋಭಿತಾ ಶಿವಣ್ಣ ಅವರು ಬರೆದಿದ್ದಾರೆ ಎನ್ನಲಾದ ಸೂಸೈಡ್‌ ನೋಟ್‌ ಕೂಡ ಪತ್ತೆಯಾಗಿದೆ. ಇದನ್ನು ಗಚ್ಚಿಬೌಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕೇವಲ ಒಂದೇ ಒಂದು ಲೈನ್‌ಅನ್ನು ಅವರು ಬರೆದಿದ್ದಾರೆ. ಆಕೆಯ ಡೆತ್‌ ನೋಟ್‌ನಲ್ಲಿ 'ಇಫ್‌ ಯು ವಾಂಟ್‌ ಟು ಕಮಿಟ್‌ ಸೂಸೈಡ್‌, ಯು ಕ್ಯಾನ್‌ ಡು ಇಟ್‌' ಎಂದು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಇದರರ್ಥ, ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು ಎನ್ನುವುದಾಗಿದೆ.