ಮಧ್ಯಮ ವರ್ಗದವರ ಮಗಳ ಮದುವೆ ಕನಸು, ಸಂಬಂಧದ ಬಾಂಡಿಂಗ್‌ ವ್ಯಾಖ್ಯಾನಿಸಿದ ಅಮೃತಧಾರೆ ಧಾರಾವಾಹಿ. ಗೌತಮ್​ ಮಾತಿಗೆ ಭೇಷ್​ ಭೇಷ್​ ಅಂತಿದ್ದಾರೆ ನೆಟ್ಟಿಗರು.  

 ತಮ್ಮ ಮಗಳ ಮದುವೆಯನ್ನು ಹೀಗೆಯೇ ಮಾಡಬೇಕು, ಅವರ ಇಷ್ಟದಂತೆ ಮಾಡಬೇಕು ಎನ್ನುವ ಬಗ್ಗೆ ಪ್ರತಿಯೊಬ್ಬ ತಂದೆಯೂ ಕನಸು ಕಂಡಿರುತ್ತಾನೆ. ಆ ಹಕ್ಕು ಪ್ರತಿಯೊಬ್ಬ ತಂದೆಗೂ ಇದೆ. ಏಕೆಂದರೆ ಮಗಳ ಭವಿಷ್ಯದ ಬಗ್ಗೆ ಆತ ಕೆಲವು ಕನಸು ಕಂಡಿರುತ್ತಾನೆ, ಅದಕ್ಕಾಗಿ ಹಗಲು- ರಾತ್ರಿ ದುಡಿದಿರುತ್ತಾನೆ. ದೊಡ್ಡ ಶ್ರೀಮಂತ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮದುವೆ ಮಾಡಿದರೆ ಅದು ಅವನ ಅಂತಸ್ತಿಗೆ ತಕ್ಕ ಮದುವೆಯಾಗಿರುತ್ತದೆ, ಇಷ್ಟು ಹಣ ಖರ್ಚು ಮಾಡಿದರೂ ಆತನಿಗೆ ಅದೇನು ದೊಡ್ಡ ವಿಷಯವೇ ಆಗಿರುವುದಿಲ್ಲ. ಆದರೆ ಒಬ್ಬ ಮಧ್ಯಮ ವರ್ಗದ ಜನ ಸ್ವಲ್ಪ ಹಣ ಖರ್ಚು ಮಾಡಿ ಮದುವೆ ಮಾಡಿದ ಮಾತ್ರಕ್ಕೆ ಅದು ಸಣ್ಣ ವಿಷಯ ಆಗಿರುವುದಿಲ್ಲ. ಏಕೆಂದರೆ ಆತ ತನ್ನ ಜೀವಮಾನವಿಡೀ ದುಡಿದ ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿರಬಹುದು, ಈ ಮದುವೆಯಾದ ಮೇಲೆ ಆತನ ಕೈಯಲ್ಲಿ ಏನೂ ಉಳಿಯದೇ ಇರಬಹುದು. ಆದ್ದರಿಂದ ಮದುವೆಯ ವಿಷಯದಲ್ಲಿ ಅದು ಕಡಿಮೆಯಾಯಿತು, ಇದು ಸರಿಯಾಗಿಲ್ಲ, ಮದುವೆ ಚಿಕ್ಕ ರೀತಿಯಲ್ಲಿ ಆಯಿತು, ಮದುವೆ ಮನೆಯಲ್ಲಿ ಸೌಲಭ್ಯಗಳು ಇರಲಿಲ್ಲ ಎನ್ನುವ ಕ್ಷುಲ್ಲಕತನವನ್ನು ಬಿಟ್ಟು ಮದುಮಕ್ಕಳನ್ನು ಮನಸಾರೆ ಆಶೀರ್ವದಿಸುವ ಗುಣ ಇರಬೇಕು ಎನ್ನುವ ಅದ್ಭುತ ಸಂದೇಶವನ್ನು ನೀಡಿದೆ ಅಮೃತಧಾರೆ (Amrutadhare) ಧಾರಾವಾಹಿ.

Add Asianetnews Kannada as a Preferred SourcegooglePreferred

ಹೌದು. ಈ ಧಾರಾವಾಹಿಯಲ್ಲಿ ಅನೇಕ ಸಮಸ್ಯೆಗಳ ನಡುವೆಯೇ ಮಿಡ್ಲ್​ಕ್ಲಾಸ್​ ಭೂಮಿಕಾ (Bhumika) ಹಾಗೂ ಸಿರಿವಂತ ಬಿಜಿನೆಸ್​ ಮ್ಯಾನ್​ ಗೌತಮ್​ ಮದುವೆ ನಡೆಯುತ್ತಿದೆ. 35 ವರ್ಷವಾದರೂ ಮದುವೆಯಾಗದ ಹುಡುಗಿ ಭೂಮಿಕಾ ಆದರೆ, 45 ದಾಟಿದರೂ ಮದುವೆಯಾಗದ ನಾಯಕ ಗೌತಮ್​. ನಾನು ಹೇಗಿದ್ದೀನೋ ಹಾಗೆ ಸ್ವೀಕರಿಸುವ ಹುಡುಗ ನನ್ನ ಸಂಗಾತಿಯಾಗಿ ಬರಬೇಕು ಅಂತ ಭೂಮಿಕಾ ಬಯಸುತ್ತಿದ್ದಾಳೆ. ಅದೇ ಇನ್ನೊಂದೆಡೆ ಶ್ರೀಮಂತ ಗೌತಮ್. ದೊಡ್ಡ ಕಂಪೆನಿಯ ಓನರ್ ಆಗಿದ್ದು, ಸಿಕ್ಕಾಪಟ್ಟೆ ಹಣ ಇದ್ರೂ ಕೂಡ ಗೌತಮ್‌ಗೆ ಅವನನ್ನು ಸಾಮಾನ್ಯ ವ್ಯಕ್ತಿಯಾಗಿ ಪ್ರೀತಿಸುವ ಸಂಗಾತಿ ಇಲ್ಲ. ಇವರಿಬ್ಬರು ಹೇಗೆ ಒಂದಾಗುತ್ತಾರೆ ಎನ್ನೋದು ಈ ಧಾರಾವಾಹಿ ಕಥೆ. ಇದೀಗ ಇವರಿಬ್ಬರ ಮದುವೆಯವರೆಗೆ ಧಾರಾವಾಹಿ ಬಂದು ನಿಂತಿದೆ.

Chaya Singh: 'ಅಮೃತಧಾರೆ' ಭೂಮಿಕಾ ರಿಯಲ್​ ಲೈಫ್​ ಪತಿ ಯಾರ್​ ಗೊತ್ತಾ?

ಮಿಡ್ಲ್​ಕ್ಲಾಸ್​ (Middleclass) ಕುಟುಂಬದ ಭೂಮಿಕಾ ತಂದೆ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಖರ್ಚು ಮಾಡಿ ಈ ಮದುವೆ ಮಾಡುತ್ತಿದ್ದಾರೆ. ಆದರೆ ಆ ಛತ್ರದಲ್ಲಿ ಎ.ಸಿಯ ಕೊರತೆ. ಬಂದ ಗಂಡಿನ ಶ್ರೀಮಂತ ಕುಟುಂಬಸ್ಥರಿಗೆ ಇದೇ ಚರ್ಚೆಯ ವಿಷಯ. ವಿಪರೀತ ಸೆಖೆ ಆಗಿರುವ ಕಾರಣ, ಎಲ್ಲರೂ ಮದುವೆಯ ಬಗ್ಗೆ ಚುಚ್ಚು ಮಾತುಗಳನ್ನಾಡುತ್ತಿದ್ದಾರೆ. ಇದನ್ನು ಕೇಳಿ ಮನನೊಂದ ಭೂಮಿಕಾ ತಂದೆ ಎಲ್ಲರ ಎದುರು ಕ್ಷಮೆ ಕೋರುತ್ತಾರೆ. ಅವರು ಕೈಮುಗಿದು ದನನೀಯ ಸ್ಥಿತಿಯಲ್ಲಿ ಇರುವುದನ್ನು ಸ್ವಾಭಿಮಾನಿ ಭೂಮಿಕಾಳಿಗೆ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಏನೂ ಮಾಡದ ಅಸಹಾಯಕ ಸ್ಥಿತಿ ಆಕೆಯದ್ದು. ಆಗಲೇ ಮದುವೆ ಎನ್ನುವ ಪವಿತ್ರ ಬಂಧನ, ಸಂಬಂಧದ ಕುರಿತು ಗೌತಮ್​ ಮಾತನಾಡುತ್ತಾನೆ. ನಾಯಕನ ಈ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದೊಂದು ಧಾರಾವಾಹಿ ಆಗಿದ್ದರೂ ಸಂಬಂಧದ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾತಿದು ಎನ್ನುತ್ತಿದ್ದಾರೆ ನೆಟ್ಟಿಗರು. 

ಗೌತಮ್​ (Gowtam) ಹೇಳುವುದು ಏನೆಂದರೆ, ನಾನೊಬ್ಬ ಬಿಜಿನೆಸ್​ ಮ್ಯಾನ್​ ಎನ್ನೋದು ನಿಜನೇ. ಕೋಟಿಗಟ್ಟಲೆ ಖರ್ಚು ಮಾಡಿ ತಂಗಿಯ ಮದ್ವೆಯನ್ನೂ ಮಾಡಿದ್ದೇನೆ. ಭೂಮಿಕಾ ತಂದೆಯೂ ಅಷ್ಟೇ. ಅವರು ದುಡಿದಿರೋ ದುಡ್ಡಿನಲ್ಲಿ ಮಗಳ ಮದುವೆ ಮಾಡುತ್ತಿದ್ದಾರೆ. ನನ್ನ ಕನಸು ಎಷ್ಟು ದೊಡ್ಡದೋ, ಅವರ ಕನಸು ಕೂಡ ಅಷ್ಟೇ ದೊಡ್ಡದು. ಅದನ್ನು ಹಣದಿಂದಾಗಲೀ ಅಥವಾ ಮಾಡುವ ಖರ್ಚಿನಿಂದಾಗಲೀ ಅಳಿಯೋದು ತಪ್ಪಾಗತ್ತೆ ಎನ್ನುವುದು. ನನಗೂ ಮದುವೆಯ ಬಗ್ಗೆ ವಿಶೇಷ ನಿರೀಕ್ಷೆಯಾಗಲೀ, ಕನಸಾಗಲೀ ಇರಲಿಲ್ಲ. ಒಬ್ಬ ತಂದೆಯ ಕನಸನ್ನು ನನಸು ಮಾಡುವುದಕ್ಕಾಗಿ ಈ ಜಾಗದಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿದೆ ಎನ್ನುವ ಡೈಲಾಗ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಅಮೃತಧಾರೆ-ಸೀತಾರಾಮ ಸಮ್ಮಿಲನ: ಗೌತಮ್‌, ಭೂಮಿಕಾ ಮದ್ವೆಗೆ ಎಂಟ್ರಿ ಕೊಟ್ಟ ಸೀತಾ, ಸಿಹಿ!