ಪ್ರತ್ಯೇಕ ಅಪಘಾತ:8 ಮಂದಿ ದುರ್ಮರಣ
ತುಮಕೂರಿನ ಕುಣಿಗಲ್ನಲ್ಲಿ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಕಲ್ಲಳ್ಳಿ ಬಳಿ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ತುಮಕೂರು(ಅ.25): ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ಶಿರಾ ತಾಲೂಕುಗಳಲ್ಲಿ ಗುರುವಾರ ನಡೆದಿದೆ.
ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಕಲ್ಲಳ್ಳಿ ಬಳಿ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 5 ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದು, ಒಬ್ಬನಿಗೆ ತೀವ್ರ ಗಾಯಗೊಂಡು ಬೆಂಗಳೂರು ಆಸ್ಪತ್ರೆ ಸೇರಿದ್ದಾನೆ.
ಬೆಂಗಳೂರು : ರೈಲಿಗೆ ತಲೆಕೊಟ್ಟು ಟಾಪರ್ ವಿದ್ಯಾರ್ಥಿ ಸಾವು - ಕಾಲೇಜಲ್ಲಿ ರ್ಯಾಗಿಂಗ್?
ಬೆಂಗಳೂರು ನಿವಾಸಿ ಚಾಲಕ ಕಿರಣ್, ರಾಜಣ್ಣ, ಮೋಹನ್, ಮಧು, ರಂಗಸ್ವಾಮಿ ಎಂಬುವವರೇ ಮೃತ ದುರ್ದೈವಿಗಳು. ಮೃತರಲ್ಲರು ಕಲ್ಲಳ್ಳಿ ಗ್ರಾಮದ ಮೂಲದವರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಅಡುಗೆ ಕೆಲಸ, ಗಾರೆ ಕೆಲಸ , ಸೇರಿದಂತೆ ಇತರ ಸಣ್ಣಪುಟ್ಟಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ತಮ್ಮ ಸ್ವಗ್ರಾಮ ಕಲ್ಲಳ್ಳಿಗೆ ಬಂದಿದ್ದರು.
ಘಟನೆ ವಿವರ:
ತಾಲೂಕಿನ ಹೊಸಕೆರೆ ಕಡೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ಪರಿಣಾಮ ಅಪಘಾತ ತೀವ್ರತೆಗೆ ಕಾರು ಜಖಂಗೊಂಡಿದ್ದು ಶವಗಳನ್ನು ಹೊರತೆಗೆಯಲು ಪೊಲೀಸರು ಜೆಸಿಬಿ ಯಂತ್ರಗಳನ್ನು ಬಳಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಂಧುಗಳ ರೋಧನ:
ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದ ಮಕ್ಕಳು ಗ್ರಾಮಕ್ಕೆ ಬಂಧು ಹೆಣವಾದ ದುರಂತವನ್ನು ಕಣ್ಣಾರೆ ಕಂಡ ಕುಟುಂಬದ ಸದಸ್ಯರು ರೋದಿಸುತ್ತಿದ್ದು ಮುಗಿಲುಮುಟ್ಟಿತ್ತು. ಕಿರಣ್, ಮೋಹನ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಗ್ರಾಮಕ್ಕೆ ಬಂದ ಹಿನ್ನೆಲೆಯಲ್ಲಿ ವೆಂಕಟೇಶ ಮಧು ಸೇರಿದಂತೆ ಇತರರೊಂದಿಗೆ ಸೇರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಶಿರಾ ಬಳಿ ಮೂವರ ಸಾವು:
ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸೇರಿ ಮೂವರು ಸಾವನ್ನಪ್ಪಿರುವ ದುರ್ಘಟನೆ ಶಿರಾ ತಾಲೂಕಿನ ದೊಡ್ಡ ಆಲದ ಮರದ ಬಳಿ ನಡೆದಿದೆ.
ಲಾರಿಯ ಚಾಲಕ ಷಣ್ಮುಗಂ(40), ಕೆಟ್ಟು ನಿಂತಿದ್ದ ಲಾರಿಯ ಕ್ಲೀನರ್ ಮಾದಯ್ಯನ್(42) ಮತ್ತು ಟೋವಿಂಗ್ ವಾಹನದ ಕ್ಲೀನರ್ ಗುಣಶೇಖರನ್(42) ಎಂಬುವರೇ ಮೃತ ದುರ್ದೈವಿಗಳು.
ತುಮಕೂರು: ಮರಳು ದಂಧೆಗೆ ಬ್ರೇಕ್ ಹಾಕ್ತಾರಾ ಸಚಿವ ಮಾಧುಸ್ವಾಮಿ ..?
ದೊಡ್ಡ ಆಲದ ಮರದ ಬಳಿ ಒಂದು ಲಾರಿ ಹಾಳಾಗಿ ರಿಪೇರಿಗಾಗಿ ನಿಂತಿತ್ತು. ಆ ಲಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರೆಲ್ಲರೂ ತಮಿಳುನಾಡು ಮೂಲದವರೆಂದು ತಿಳಿದುಬಂದಿದೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.