Asianet Suvarna News Asianet Suvarna News

ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಪಿಎಫ್‌ಐ ಸಂಘಟನೆ: ಆರೋಪ

Union Minister Shobha Karandlaje React on PFI Raid grg
Author
First Published Sep 24, 2022, 12:55 PM IST

ಚಿಕ್ಕಮಗಳೂರು(ಸೆ.24): ಪಾಫ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಿಮಿ ಸಂಘಟನೆಯ ಇನ್ನೊಂದು ಮುಖ. ಸದ್ಯ ಲಭ್ಯವಾಗಿರುವ ದಾಖಲೆಗಳ ಆಧಾರದ ಮೇಲೆ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಮೂಡಿಗೆರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆ ದೇಶದ್ರೋಹದ ಕೆಲಸದಲ್ಲಿ ತೊಡಗಿವೆ ಎಂದು ಬಹಳ ವರ್ಷದಿಂದ ಹೇಳುತ್ತಾ ಬಂದಿದ್ದೇವೆ. ಕರ್ನಾಟಕದಲ್ಲಿ ಆಗಿರುವ ಹಲವು ಕೊಲೆಗಳ ಹಿಂದೆ ಎಸ್‌ಡಿಪಿಐ ಕೈವಾಡ ಇದೆ. ದೇಶಾದ್ಯಂತ ಪಿಎಫ್‌ಐ ಸಂಘಟನೆಯವರು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ತನಿಖೆಯ ವೇಳೆಯಲ್ಲಿ ಗೊತ್ತಾಗಿದೆ ಎಂದರು.

ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!

ಜನಾಂಗದ ಧಾರ್ಮಿಕ ಮುಖಂಡರು ಹಾಗೂ ಹಲವು ಜನರಾಜಕಾರಣಿಗಳು, ಸಂಘಟನೆ ಪ್ರಮುಖರು ಮತ್ತು ಬಹಳ ದೊಡ್ಡ ಪ್ರಮಾಣದ ಹಣ ಬೇರೆ ಭಾಗಗಳಿಂದ ಅವರ ಎನ್‌ಜಿಓಗಳಿಗೆ ಬರುತ್ತಿರುವುದು ಸಾಬೀತಾಗಿದೆ. ಕೇರಳದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಎಲ್ಲೆಲ್ಲಿ ದಾಳಿಯನ್ನು ನಡೆಸಿದಿಯೋ, ಅಲ್ಲಲ್ಲಿ ದಾಳಿಯನ್ನು ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಕೇರಳದಲ್ಲಿ ಪಿಎಫ್‌ಐ ಬಂದ್‌ಗೆ ಕರೆ ನೀಡಿದೆ. ಪೊಲೀಸ್‌ ವಾಹನಗಳ ಮೇಲೆ, ಮಾಧ್ಯಮದವರ ಮೇಲೆ ದಾಳಿ ನಡೆಸಿದ್ದಾರೆ. ಮೈಸೂರಿನಲ್ಲೂ ಆ ಭಾಗದ ಕೆಲವರು ಪ್ರತಿಭಟನೆಗೆ ಮುಂದಾಗಿದ್ದರು. ಪಿಎಫ್‌ಐ ಬ್ಯಾನ್‌ ಮಾಡಲು ಸಾಕಷ್ಟು ಸಾಕ್ಷಿ ಬೇಕೆಂದು ಹೇಳಿದ್ದರು. ಸಾಕ್ಷಿಯನ್ನು ಕಲೆ ಹಾಕುವ ಕೆಲಸ ಎನ್‌ಐಎ ಮಾಡುತ್ತಿದೆ. ನನಗೆ ವಿಶ್ವಾಸ ಇದೆ. ಎಲ್ಲ ಸಾಕ್ಷಿಗಳನ್ನು ಆಧರಿಸಿ ಪಿಎಫ್‌ಐ ನಿಷೇಧ ಮಾಡಬೇಕು ಎಂದ ಅವರು, ಇಂತಹ ಸಂದರ್ಭದಲ್ಲಿ ನಮ್ಮ ರಾಜ್ಯದ ಪೂಲೀಸರು ಎನ್‌ಐಎಗೆ ರಕ್ಷಣೆ ನೀಡಬೇಕು ಎಂದರು.

ED NIA raid PFI; ಶಿರಸಿಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿದ್ದ ಎಸ್‌ಡಿಪಿಐ ಮುಖಂಡನ ಬಂಧನ

‘ಭಾರತ್‌ ಜೋಡೋ ಹೆಸರಲ್ಲಿ ಭಾರತ್‌ ಥೋಡೋ ಯಾತ್ರೆ’

ಭಾರತ್‌ ಜೋಡೋ ಹೆಸರಲ್ಲಿ ಭಾರತ್‌ ಥೋಡೋ ಯಾತ್ರೆ ನಡೆಯುತ್ತಿದೆ. ಇದು ಭಾರತದ ಒಗ್ಗಟ್ಟನ್ನ ಮುರಿಯುವ ತುಕಡೆ ಗ್ಯಾಂಗಿನ ಯಾತ್ರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು. ನಾನು ರಾಹುಲ್‌ ಗಾಂಧಿಗೆ ಕೇಳೋದೋ ಒಂದೇ ಪ್ರಶ್ನೆ. ಭಾರತವನ್ನು ವಿಭಜನೆ ಮಾಡಿದವರು ಯಾರು? ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಯಾರು ಹೊಣೆ? ಯಾರ ಕಾಲದಲ್ಲಿ ಆಗಿದ್ದು ಎಂದು ಪ್ರಶ್ನಿಸಿದರು.

ಭಾರತ್‌ ಜೋಡೋ ಯಾತ್ರೆಯನ್ನು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಮಾಡಬೇಕು. ಭಾರತ ಒಂದಾಗಿದೆ, ಒಗ್ಗಟ್ಟಾಗಿದೆ, ಜೋಡಣೆಯಾಗಿದೆ, ನೀವು ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದ್ದೀರಾ ಎಂದರು. ಪ್ರವಾಸದಲ್ಲಿ ಒಂದು ಧರ್ಮದ ಜನರ ಓಲೈಕೆ ನಡೆಯುತ್ತಿದೆ. ಒಂದು ಸಮುದಾಯದ ಜನರು ಮಾತ್ರ ಅವರು ಜೋಡಣೆ ಆಗಿದ್ದಾರೆ. ಕೇರಳ ಯಾತ್ರೆ ಬಳಿಕ ನಾನು ಮೂರು ದಿನ ಪ್ರವಾಸ ಮಾಡಿದ್ದೆ, ಅಲ್ಲಿ ಅಂಗಡಿ ಲೂಟಿ ಮಾಡಿದ್ದಾರೆ. ಹಣ ನೀಡದವರಿಗೆ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿದರು.
 

Follow Us:
Download App:
  • android
  • ios