ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಆಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್‌ಗೆ ಅನುಮತಿಗೆ ಮನವಿ ಮಾಡಲಿದ್ದಾರೆ. 

ಗಿರೀಶ್ ಮಾದೇನಹಳ್ಳಿ 

ಬೆಂಗಳೂರು(ಜ.17): ಜೆಡಿಎಸ್ ವರಿಷ್ಠ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಭಿಯೋಜನೆ (ಪ್ರಾಸಿಕ್ಯೂಷನ್) ಸಂಬಂಧ ಮತ್ತೆ ರಾಜ್ಯ ಪಾಲರ ಅನುಮತಿಗೆ ಸಾವಿರಾರು ಪುಟಗಳ ಭಾಷಾಂತರದ ವರದಿ ಮೂಲಕ ಕೋರಿಕೆ ಸಲ್ಲಿಸಲು ಲೋಕಾಯುಕ್ತ ವಿಭಾಗದ ಪೊಲೀಸರು ಸಿದ್ಧತೆ ನಡೆಸಿದ್ದಾರೆ. 

ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತದ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್‌ಗೆ ಅನುಮತಿಗೆ ಮನವಿ ಮಾಡಲಿದ್ದಾರೆ. 

ಬಿಎಸ್‌ವೈ, ಶ್ರೀರಾಮುಲು ವಿರುದ್ಧ ಕೊರೋನಾ ಕೇಸ್‌ಗೆ ಸಿದ್ಧತೆ: ಶಿಫಾರಸಲ್ಲೇನಿದೆ?

ಕೆಲವೇ ದಿನಗಳಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ನೀಡಿಕೆ ವಿವಾದದ ಚೆಂಡು ರಾಜಭವನ ಅಂಗಳಕ್ಕೆ ಮತ್ತೆ ಬೀಳಲಿದ್ದು, ಇದು ಕೂಡ ಆಡಳಿತ ಆಡಳಿತ-ವಿಪಕ್ಷಗಳ ಮಧ್ಯೆ ರಾಜಕೀಯ ಸಮರಕ್ಕೂ ಕಾರಣವಾಗಲಿದೆಯೇ ಎಂಬ ಕುತೂಹಲ ಮೂಡಿದೆ. 

ಆರು ತಿಂಗಳ ಹಿಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಭಾಷಾಸಮಸ್ಯೆ ಮುಂದಿಟ್ಟು ಲೋಕಾಯುಕ್ತ ಹಾಗೂ ಎಸ್‌ಐಟಿಗೆ ಕಡತಗಳನ್ನು ರಾಜ್ಯಪಾಲ ಥಾವ‌ರಚಂದ್ ಗೆಹಲೋತ್ ಮರಳಿಸಿದ್ದರು. ಈಗ ಕುಮಾರಸ್ವಾಮಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣಗಳ ಆರೋಪಪಟ್ಟಿಯನ್ನು ಕನ್ನಡದಿಂದ ಇಂಗ್ಲೀಷ್ಗೆ ಪೊಲೀಸರು ಭಾಷಾಂತರಿಸಿದ್ದಾರೆ. 

ರೆಡ್ಡಿ ವಿರುದ್ಧ 5,500 ಪುಟಗಳ ವರದಿ: 

10 ವರ್ಷಗಳ ಹಿಂದೆ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು, ಆರೋಪಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ 2024ರ ಮೇ 31ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. 

ಈ ಕೋರಿಕೆ ಸ್ವೀಕರಿಸಿದ್ದ ರಾಜ್ಯಪಾಲರು, ಆನಂತರ ಕಡತಗಳನ್ನು ಕನ್ನಡದಿಂದ ಇಂಗ್ಲೀಷ್‌ ಗೆ ತರ್ಜುಮೆ ಮಾಡಿ ಸಲ್ಲಿಸುವಂತೆ ಸೂಚಿಸಿ ಲೋಕಾಯುಕ್ತ ಪೊಲೀಸರಿಗೆ ಮರಳಿಸಿದ್ದರು. ಕೊನೆಗೆ ಲೋಕಾಯುಕ್ತ ಪೊಲೀಸರು, ದೋಷಾ ರೋಪ ಪಟ್ಟಿಯನ್ನು ತರ್ಜುಮೆ ಮಾಡಿಸಿ 5,500 ಪುಟಗಳ ವರದಿಯನ್ನು ಸಿದ್ಧಪಡಿಸಿದ್ದಾರೆ. ಈಗ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಹಸಿರು ನಿಶಾನೆ ತೋರಿದ ಕೂಡಲೇ ರಾಜ್ಯ ಭವನಕ್ಕೆ ಪ್ರಾಸಿಕ್ಯೂಷನ್‌ಗೆ ಕೋರಿಕೆ ಪತ್ರದೊಂದಿಗೆ ರೆಡ್ಡಿ ವಿರುದ್ಧ ಭಾಷಾಂತರದ ಆರೋಪ ಪಟ್ಟಿ ಸಹ ರವಾನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಕರಡು ತಿದ್ದುತ್ತಿರುವ ಭಾಷಾ ತಜ್ಞರು: 

ಅದೇ ರೀತಿ 2007ರಲ್ಲಿ ಅಂದು ಸಿಎಂ ಆಗಿದ್ದಾಗ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಅಕ್ರಮ ಗಣಿ ಗುತ್ತಿಗೆ ಮಂಜೂರಾತಿ ಅಕ್ರಮ ಪ್ರಕರಣ ಸಂಬಾರ ಕುಮಾರಸ್ವಾಮಿ ವಿರುದ್ಧ ತನಿಖೆ ಮುಕ್ತಾಯಗೊಳಿಸಿದ್ದ ಎಸ್‌ಐಟಿ ಪೊಲೀಸರು, 2023ರ ನವೆಂಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು. ಆದರೆ, ಈ ಪ್ರಕರಣದಲ್ಲಿ ಸಹ 2 ಬಾರಿ ಸ್ಪಷ್ಟಿಕರಣ ಕೇಳಿದ ರಾಜ್ಯಪಾಲರು, ರೆಡ್ಡಿ ಬಳಿಕ ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಭಾಷಾ ತೊಡಕಿನ ತಾಂತ್ರಿಕ ಕಾರಣಮುಂದಿಟ್ಟಿದ್ದರು. 

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗೌರ್ನರ್‌ ಲೋಕಾಯುಕ್ತ ತನಿಖೆ ದಾಳ: ಸಂಘರ್ಷ ಇನ್ನಷ್ಟು ತೀವ್ರ..!

ಅಂತೆಯೇ ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಕನ್ನಡದಿಂದ ಇಂಗ್ಲೀಷ್‌ಗೆ ಸರ್ಕಾರದ ಅಧಿಕೃತ ಭಾಷಾಂತರ ಪರಿಣಿತರ ಮೂಲಕ ತರ್ಜುಮೆಯನ್ನು ಎಸ್‌ಐಟ ಅಧಿಕಾರಿಗಳು ಮಾಡಿಸಿದ್ದರು. ಆದರೆ ಭಾಷಾಂತರದಲ್ಲಿ ಬಹಳ ತಪ್ಪುಗಳು ಕಂಡು ಬಂದ ಕಾರಣಕ್ಕೆ ಆ ವರದಿಯನ್ನು ಮತ್ತೊಮ್ಮೆ ಕಳುಹಿಸಿ ಕಾಗುಣಿತ ದೋಷ್ ಭಾಷಾಂತರಕಾರರಿಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. 

ಅದರನ್ವಯ ಕರಡು ತಿದ್ದುಪಡಿಯಲ್ಲಿ ಭಾಷಾಂತರಕಾರರು ಮಗ್ನರಾಗಿದ್ದು, ಕೆಲವೇ ದಿನಗಳಲ್ಲಿ ವರದಿಗೆ ಅಂತಿಮ ರೂಪ ನೀಡಲಿದ್ದಾರೆ ಎಂದು ಉನ್ನತ ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ.