ಹಬ್ಬದ ದಿನ ಅಡುಗೆ ಮಾಡದೆ ಹಾಗೂ ಮಕ್ಕಳಿಗೆ ಊಟ ಕೊಡದೆ ಪಾನಮತ್ತಳಾಗಿ ಮಲಗಿದ್ದ ಪತ್ನಿಯನ್ನು ಆವೇಶದಿಂದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪತಿಯ ಕೃತ್ಯವನ್ನು ‘ಉದ್ದೇಪೂರ್ವಕವಲ್ಲದ ನರಹತ್ಯೆ’ ಎಂದು ಪರಿಗಣಿಸಿರುವ ಹೈಕೋರ್ಟ್‌, ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿದೆ. 

ಬೆಂಗಳೂರು (ಅ.19): ಹಬ್ಬದ ದಿನ ಅಡುಗೆ ಮಾಡದೆ ಹಾಗೂ ಮಕ್ಕಳಿಗೆ ಊಟ ಕೊಡದೆ ಪಾನಮತ್ತಳಾಗಿ ಮಲಗಿದ್ದ ಪತ್ನಿಯನ್ನು ಆವೇಶದಿಂದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪತಿಯ ಕೃತ್ಯವನ್ನು ‘ಉದ್ದೇಪೂರ್ವಕವಲ್ಲದ ನರಹತ್ಯೆ’ ಎಂದು ಪರಿಗಣಿಸಿರುವ ಹೈಕೋರ್ಟ್‌, ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿದೆ. 

Add Asianetnews Kannada as a Preferred SourcegooglePreferred

ಪತ್ನಿ ರಾಧಾಳನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಸದ್ಯ ಜೈಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸುರೇಶ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಪತ್ನಿಯನ್ನು ಕೊಲೆ ಮಾಡುವ ಉದ್ದೇಶ ಸುರೇಶ್‌ಗೆ ಇರಲಿಲ್ಲ. ಗಣೇಶ ಹಬ್ಬದ ದಿನ ಅಡುಗೆ ಮಾಡಿಲ್ಲ. ಮಕ್ಕಳಿಗೆ ಊಟ ಕೊಟ್ಟಿಲ್ಲ. ಮದ್ಯಪಾನ ಮಾಡಿ ಮಲಗಿದ್ದಾಳೆ ಎಂಬ ಕಾರಣದಿಂದ ಕೋಪಗೊಂಡ ಸುರೇಶ್‌, ಪತ್ನಿಗೆ ಆವೇಶದಿಂದ ದೊಣ್ಣೆಯಿಂದ ಹೊಡೆದ ಪರಿಣಾಮ ಆಕೆಯ ಸಾವು ಸಂಭವಿಸಿದೆ. ಮೃತ ಮಹಿಳೆ ಮದ್ಯ ವ್ಯಸನಿಯಾಗಿದ್ದಳು ಎಂಬುದನ್ನೂ ಸಾಕ್ಷಿಗಳು ದೃಢಪಡಿಸುತ್ತಿವೆ.

ಕೊಂಬೆ ಬಿದ್ದು ಚಾಲಕ ಮೃತಪಟ್ಟರೂ ವಿಮೆ ಹಣ ಕೊಡ್ಬೇಕು: ಹೈಕೋರ್ಟ್‌

ಹಾಗಾಗಿ, ಆತ ಮಾಡಿದ್ದು ಕೊಲೆಯೆಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ ಉದ್ದೇಶಪೂರ್ವಕವಲ್ಲದ ನರಹತ್ಯೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯವು ಸುರೇಶ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದ ನ್ಯಾಯಪೀಠ, ಈಗಾಗಲೇ ಆರೋಪಿ 6 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಆನುಭವಿಸಿದ್ದಾನೆ,ಅಲ್ಲದೇ ಆತನ ಮೇಲೆ ಬೇರೆ ಯಾವುದೇ ಪ್ರಕರಣ ಇಲ್ಲದಿರುವ ಹಿನ್ನೆಲೆಯಲ್ಲಿ ತಕ್ಷಣ ಜೈಲಿನಿಂದ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಿದೆ.

26 ವರ್ಷದ ಬಳಿಕ ರಾಜ್ಯ ಹೈಕೋರ್ಟ್‌ಗೆ ಕನ್ನಡಿಗ ಸಿಜೆ!

ಪ್ರಕರಣದ ವಿವರ: ಸುರೇಶ ತನ್ನ ಮೊದಲ ಪತ್ನಿ ಮೀನಾಕ್ಷಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇದೇ ವೇಳೆ ರಾಧ ಸಹ ತನ್ನ ಮೊದಲ ಪತಿಯನ್ನು ತೊರೆದಿದ್ದರು. ನಂತರ ಸುರೇಶ ಮತ್ತು ರಾಧಾ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. 2016ರಲ್ಲಿ ಗಣೇಶ ಹಬ್ಬದ ದಿನ ಸುರೇಶ ಮನೆಗೆ ಬಂದಾಗ ಪತ್ನಿಯು ಹಬ್ಬ ಆಚರಿಸದೆ, ಅಡುಗೆ ಮಾಡಿ ಮಕ್ಕಳಿಗೂ ಊಟ ಕೊಡದೆ ಕುಡಿದು ಮಲಗಿದ್ದಳು. ಇದರಿಂದ ಕೋಪಗೊಂಡ ಸುರೇಶ ದೊಣ್ಣೆಯಿಂದ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. 2017ರಲ್ಲಿ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸುರೇಶ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.