ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಸಂಬಂಧ ನಿರ್ಮಾಪಕ, ಸಂಘದ ನಿರ್ದೇಶಕರೂ ಆಗಿರುವ ಉಮಾಪತಿ ಶ್ರೀನಿವಾಸಗೌಡ ಮತ್ತೆ ಗಂಭೀರ ಆರೋಪ ಮಾಡಿದ್ದು, ಎಲ್ಲ ಹಗರಣಗಳ ದಾಖಲೆ ನನ್ನ ಬಳಿ ಇವೆ. ಇಂಚಿಂಚು ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಏನಿದು ಹಗರಣ?
- ಹಗರಣಗಳ ಇಂಚಿಂಚೂ ಬಹಿರಂಗಪಡಿಸುತ್ತೇನೆ
- 4 ಗೋಡೆ ಮಧ್ಯೆ ಬಗೆಹರಿಸೋಣ ಅಂದ್ರೂ ಸರಿ
ಬೆಂಗಳೂರು (ಜೂ.30): ರಾಜ್ಯ ಒಕ್ಕಲಿಗರ ಸಂಘದಲ್ಲಿ ಕೆಲ ಪದಾಧಿಕಾರಿಗಳು ನಡೆಸಿರುವ ಎಲ್ಲ ಹಗರಣಗಳ ದಾಖಲೆಗಳು ನನ್ನ ಬಳಿ ಇವೆ. ಹೋರಾಟ ಮುಂದುವರೆಸೋಣ ಎಂದರೆ ಅದಕ್ಕೆ ನಾನು ಸಿದ್ಧವಾಗಿದ್ದೇನೆ ಎಂದು ನಿರ್ಮಾಪಕರೂ ಆಗಿರುವ ಸಂಘದ ನಿರ್ದೇಶಕ ಉಮಾಪತಿ ಶ್ರೀನಿವಾಸಗೌಡ ಸವಾಲು ಹಾಕಿದರು.
4 ಗೋಡೆ ಮಧ್ಯೆ ಬಗೆಹರಿಸೋಣ ಅಂದ್ರೂ ಸರಿ
ಸುದ್ದಿಗಾರರೊಂದಿಗೆ ಮಾತನಾಡಿ, ಸಂಘದಲ್ಲಿ ನಡೆದಿರುವ ಹಗರಣಗಳನ್ನು ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳೋಣ ಎಂದರೆ ಅದಕ್ಕೆ ತಲೆ ಬಾಗುತ್ತೇನೆ. ಎಲ್ಲ ಹಗರಣಗಳ ದಾಖಲೆಗಳು ನನ್ನ ಬಳಿ ಇವೆ. ಹೋರಾಟ ಮುಂದುವರಿಸೋಣ ಎಂದರೆ ಅದಕ್ಕೆ ನಾನು ಸಿದ್ಧವಾಗಿದ್ದೇನೆ. ಅವರು ನಡೆಸಿರುವ ಹಗರಣಗಳನ್ನು ಇಂಚಿಂಚೂ ಮಾಧ್ಯಮದ ಮುಂದೆ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಶ್ರೀನಿವಾಸ್ ಅವರು ಒಳ್ಳೆಯ ಮನುಷ್ಯ. ಆದರೆ ಅವರಿಗೆ ಕೆಲಸ ನಿರ್ವಹಿಸಲು ಸ್ವಾತಂತ್ರ್ಯ ಸಿಗುತ್ತಿಲ್ಲ. ಸಂಘದ ಪದಾಧಿಕಾರಿ ಶ್ರೀನಿವಾಸ್ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಶ್ರೀಧರ್ ಕಥೆ ಏನು ಎಂದು ಮೈಸೂರಿನವರಿಗೆ, ಸಂಘದವರಿಗೆ ಚೆನ್ನಾಗಿ ತಿಳಿದಿದೆ. ಮೂರ್ನಾಲ್ಕು ಪರ್ಸೆಂಟ್ ಇಲ್ಲದೆ ಯಾವುದಕ್ಕೂ ಸಹಿ ಹಾಕುವುದಿಲ್ಲ. ನಮ್ಮ ತಂಡದಲ್ಲಿ ಉಳಿದುಕೊಳ್ಳಲು ಸ್ವತಃ ನನ್ನ ಬಳಿಯೇ 12.5 ಲಕ್ಷ ರು. ತೆಗೆದುಕೊಂಡ ಮಹಾನುಭಾವ ಇವರು ಎಂದು ಆರೋಪಿಸಿದರು.
ಆಸ್ತಿ ದಾಖಲೆ ಕೊಟ್ಟಿದ್ದೇನೆ:
ಒಕ್ಕಲಿಗರ ಸಂಘದ ಅಭಿವೃದ್ಧಿಗೆ 3 ಕೋಟಿ ರು. ಬೆಲೆ ಬಾಳುವ ಆಸ್ತಿಯನ್ನು ನಾವು ದಾನ ಮಾಡಿದ್ದೇವೆ. ಇದಕ್ಕೆ ದಾಖಲೆ ಕೊಡಿ ಎಂದು ಶ್ರೀಧರ್ ಕೇಳಿದ್ದಾರೆ. ಸಂಘದ ಅಧ್ಯಕ್ಷರು, ಎಲ್ಲ ನಿರ್ದೇಶಕರಿಗೆ ನಾನು ನೀಡಿರುವ ಮೂರು ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದೇನೆ. ಒಕ್ಕಲಿಗರ ಸಂಘದ ಅಭಿವೃದ್ಧಿಗೆ 2017 ರಲ್ಲಿ ನಾವು ಈ ದಾನ ನೀಡಿದ್ದೇವೆ ಎಂದು ತಿರುಗೇಟು ನೀಡಿದರು.
ನನಗೆ ಮಾನಸಿಕ ತೊಂದರೆ ಎಂದರೆ ಆಸ್ಪತ್ರೆಗೆ ನೀವೂ ಬನ್ನಿ
ನನಗೆ ಮಾನಸಿಕ ತೊಂದರೆ ಇದೆ ಎಂದು ಶ್ರೀಧರ್ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಆಸ್ಪತ್ರೆಗೆ ನೀವೂ ಬನ್ನಿ ಎಂದು ಪಂಥಾಹ್ವಾನ ನೀಡಿದ ಶ್ರೀನಿವಾಸ್, ಡೆಂಟಲ್ ಕಾಲೇಜಿನ ಲಂಚದ ವಿಷಯಕ್ಕೆ ಸಂಬಂಧಿಸಿದ ಆರೋಪ ಸಾಬೀತುಪಡಿಸಿದರೆ ಅವರು ಹೇಳಿದಂತೆ ಕೇಳುತ್ತೇನೆ. ನನಗೆ ಸಂಘದ ಅಧ್ಯಕ್ಷ ಆಗಬೇಕು ಎಂಬ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.


