ಅಶ್ವತ್ಥದ ಎಲೆಯಲ್ಲಿ ಸಚಿನ್ ತೆಂಡುಲ್ಕರ್ ಚಿತ್ರ ರಚಿಸುವ ಮೂಲಕ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಗಮನಸೆಳೆದಿದ್ದರು. ಇದೀಗ ಈ ಚಿತ್ರವನ್ನು ಸಚಿನ್ ತೆಂಡುಲ್ಕರ್ ಕೂಡ ಗಮನಿಸಿದ್ದು, ಮೆಚ್ಚುಗೆಯ ಪತ್ರದೊಂದಿಗೆ ತಮ್ಮ ಎರಡು ಅಮೂಲ್ಯ ಚಿತ್ರವನ್ನು ಕಳುಹಿಸಿಕೊಟ್ಟಿದ್ದಾರೆ.

ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜೂನ್ 15): ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡುಲ್ಕರ್ (Sachin Tendulkar), ಉಡುಪಿಯ (Udupi) ಅಪರೂಪದ ಕಲಾವಿದನೊಬ್ಬನ ಬೆನ್ನುತಟ್ಟಿದ್ದಾರೆ. ತೆಂಡುಲ್ಕರ್ ಅವರನ್ನೇ ವಿಷಯವಾಗಿ ಇಟ್ಟುಕೊಂಡು ಉಡುಪಿ ಮರ್ಣೆಯ ಅದ್ಭುತ ಕಲಾವಿದ ಮಹೇಶ್ , ಒಂದು ಕಲಾಕೃತಿ ರಚಿಸಿದ್ದರು. ಈ ಕಲಾಕೃತಿಗೆ ವ್ಯಾಪಕ ಮನ್ನಣೆ ದೊರಕಿದ ಹಿನ್ನೆಲೆಯಲ್ಲಿ ಸಚಿನ್ ತೆಂಡುಲ್ಕರ್ ಕಲಾವಿದನಿಗೆ ಪ್ರಶಂಸಾ ಪತ್ರ ಕಳುಹಿಸಿದ್ದಾರೆ.

ಅಶ್ವತ್ಥದ ಎಲೆಯಲ್ಲಿ ಮೂಡಿದ ತೆಂಡುಲ್ಕರ್: ಕಲಾವಿದ ಮಹೇಶ್ ಮರ್ಣೆ (Mahesh Marne) ಅಶ್ವತ್ಥದ ಎಲೆಯಲ್ಲಿ ಸಚಿನ್ ತೆಂಡುಲ್ಕರ್ ಅವರ ಭಾವಚಿತ್ರವನ್ನು ರಚಿಸುವ ಮೂಲಕ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ. ಅಶ್ವತ್ಥ ಎಲೆಯಲ್ಲಿ ಭಾವಚಿತ್ರಗಳನ್ನು ಮೂಡಿಸುವಲ್ಲಿ ಮಹೇಶ್ ಸಿದ್ಧಹಸ್ತ ಕಲಾವಿದ. 2015ರಲ್ಲಿ ಐಸ್ ಕ್ರೀಮ್ ಕಡ್ಡಿಗಳು ಮತ್ತು ಬೆಂಕಿ ಕಡ್ಡಿಗಳಿಂದ ರಚಿಸಿದ ಗಣಪತಿಯ ಕಲಾಕೃತಿಯ ಮೂಲಕ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಕೂಡಾ ಸೇರ್ಪಡೆಯಾಗಿದ್ದರು. 

ಅತ್ಯಂತ ಸೂಕ್ಷ್ಮವಾಗಿ ಅಶ್ವತ್ಥದ ಎಲೆಯಲ್ಲಿ ವಿವಿಧ ಮುಖಗಳ ಪಡಿಯಚ್ಚು ಮೂಡಿಸುವುದರಲ್ಲಿ ಮಹೇಶ್ ನೈಪುಣ್ಯತೆ ಸಾಧಿಸಿದ್ದಾರೆ. ಕೇವಲ ಏಳು ನಿಮಿಷಗಳಲ್ಲಿ ಸಚಿನ್ ತೆಂಡುಲ್ಕರ್ ಅವರ ಭಾವಚಿತ್ರವನ್ನು ರಚಿಸುವ ಮೂಲಕ ಇವರ ಈ ಕಲಾಕೃತಿ ಎಕ್ಸ್ ಕ್ಲೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿತ್ತು. ಉತ್ತರಪ್ರದೇಶದ ಬರೇಲಿಯ (Uttar Pradesh Baraily) ಲಾಟ ಪ್ರತಿಷ್ಠಾನಕ್ಕೆ ಅಶ್ವತ್ಥ ಎಲೆಯ ಮೂಲಕ ರಚಿಸಿದ ಸಚಿನ್ ತೆಂಡುಲ್ಕರ್ ಅವರ ಭಾವಚಿತ್ರದ ವಿಡಿಯೋವನ್ನು ಕಳುಹಿಸಲಾಗಿತ್ತು. ಈ ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಸ್ಥೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಮರ್ಣೆ ಅವರ ಹೆಸರನ್ನು ಸೇರ್ಪಡೆಗೊಳಿಸಿತ್ತು. 

ಮಹೇಶ್ ಮರ್ಣೆ ಗೆ ಅಮೂಲ್ಯ ಗಿಫ್ಟ್ ಕಳುಹಿಸಿದ ಸಚಿನ್ ತೆಂಡುಲ್ಕರ್: ಈ ದಾಖಲೆಯ ಬಗ್ಗೆ ಮಾಹಿತಿ ಪಡೆದು ಕೊಂಡಿರುವ ಸಚಿನ್ ತೆಂಡುಲ್ಕರ್, ಮಹೇಶ್ ಮರ್ಣೆ ಅವರಿಗೆ ಪ್ರಶಂಸಾಪತ್ರವನ್ನು ಕಳುಹಿಸಿದ್ದಾರೆ. " ನನ್ನ ಮೇಲೆ ಪ್ರೀತಿ ಇಟ್ಟು ನೀವು ರಚಿಸಿರುವ ಕಲಾಕೃತಿ ಕಂಡು ನಾನು ಬೆರಗಾಗಿದ್ದೇನೆ. ನೀವು ನನ್ನ ಮೇಲೆ ತೋರಿಸಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಸಂಗ್ರಹದಲ್ಲಿರುವ ಎರಡು ಅಮೂಲ್ಯ ಫೋಟೋಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ನನ್ನ ಎರಡನೇ ಇನ್ನಿಂಗ್ಸ್‌ಗೂ ಕೂಡಾ ನೀವು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲ ನನಗೆ ಪ್ರೇರಣೆಯಾಗಿದೆ" ಎಂದು ಬರೆದು, ಹಸ್ತಾಕ್ಷರ ಮಾಡಿದ ಪತ್ರವನ್ನು ಕಳುಹಿಸಿದ್ದಾರೆ.

Karachi Test ಸಚಿನ್ ಗಾಯಗೊಳಿಸುವುದೇ ನನ್ನ ಗುರಿಯಾಗಿತ್ತು, ಶಾಕಿಂಗ್ ಮಾಹಿತಿ ಬಹಿರಂಗ ಪಡಿಸಿದ ಅಕ್ತರ್

Add Asianetnews Kannada as a Preferred SourcegooglePreferred

ತನ್ನ ವೃತ್ತಿಜೀವನದಲ್ಲಿ 100ನೇ ಸೆಂಚುರಿ ಬಾರಿಸಿರುವ ಕ್ಷಣದ ಅಮೂಲ್ಯ ಭಾವಚಿತ್ರದ ಜೊತೆಗೆ ವರ್ಲ್ಡ್ ಕಪ್ ಎತ್ತಿರುವ ಮತ್ತೊಂದು ಚಿತ್ರವನ್ನು ಕೂಡ ಪತ್ರದ ಜೊತೆ ಲಗತ್ತಿಸಿ ಕಳುಹಿಸಿದ್ದಾರೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶವಾಗಿರುವ ಮರ್ಣೆ ಎಂಬಲ್ಲಿ ಇದ್ದುಕೊಂಡು, ಮಹೇಶ್ ಅಪರೂಪದ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ನೂರಾರು ಸೆಲೆಬ್ರಿಟಿಗಳ ಚಿತ್ರವನ್ನು ಅಶ್ವತ್ಥದ ಎಲೆಯಲ್ಲಿ ಮೂಡಿಸುವ ಮೂಲಕ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಬಿ-ಟೌನ್‌ ಲೋಕಕ್ಕೆ ಎಂಟ್ರಿ ಕೊಡ್ತಾರಾ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ?

ಅಪ್ಪು ಇಹಲೋಕ ತ್ಯಜಿಸಿದಾಗ, ಮಹೇಶ್ ಮರ್ಣೆ ಬಿಡಿಸಿದ ಚಿತ್ರ ತುಂಬಾ ವೈರಲ್ ಆಗಿತ್ತು. ಕಾಲ ಕಾಲಕ್ಕೆ ಹೊಂದಿಕೊಳ್ಳುವಂತೆ, ವಿವಿಧ ಸೆಲೆಬ್ರಿಟಿಗಳ ಚಿತ್ರವನ್ನ ಮೂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಮಹೇಶ್ ಮರ್ಣೆ ಪಾತ್ರರಾಗುತ್ತಾ ಬಂದಿದ್ದಾರೆ.