- ಐವರು ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ- ವಂದಿತಾ ವರ್ಮಾ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನಿರ್ಧಾರ- ಮೂವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ 

ಬೆಂಗಳೂರು(ಜೂ.01): ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮೂವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಹಾಗೂ ಐವರು ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿ ಸರ್ಕಾರ ಆದೇಶಿಸಿದೆ.

ಕೆ.ನಿತೀಶ್‌ ಅವರನ್ನು ಹಣಕಾಸು ಇಲಾಖೆ ಉಪ ಕಾರ್ಯದರ್ಶಿ (3) ಹುದ್ದೆಯಿಂದ ಅದೇ ಇಲಾಖೆಯ ಉಪ ಕಾರ್ಯದರ್ಶಿ (ಆಯವ್ಯಯ ಮತ್ತು ಸಂಪನ್ಮೂಲ) ಹುದ್ದೆಗೆ ವರ್ಗಾಯಿಸಿ, ನಿತೀಶ್‌ ಅವರಿಂದ ತೆರವಾದ ಸ್ಥಾನಕ್ಕೆ ರಾಮನಗರ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ಇಕ್ರಮುಲ್ಲಾ ಶರೀಫ್‌ ಅವರನ್ನು ನೇಮಿಸಲಾಗಿದೆ. ತಿಪಟೂರು ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿದ್ದ ದಿಗ್ವಿಜಯ್‌ ಬೋಡ್ಕೆ ಅವರನ್ನು ರಾಮನಗರ ಜಿಲ್ಲಾ ಪಂಚಾಯತ್‌ ಸಿಇಒ ಆಗಿ ವರ್ಗಾವಣೆ ಮಾಡಿದೆ.

ಪ್ರವಾಹಪೀಡಿತ ಅಸ್ಸಾಂನಲ್ಲಿ ತಾವೇ ದೋಣಿ ಏರಿ ಜನರ ರಕ್ಷಣೆಗೆ ಬಂದ ಮಹಿಳಾ ಐಎಎಸ್‌ ಅಧಿಕಾರಿ!

ಅದೇ ರೀತಿ ಜವಳಿ ಇಲಾಖೆ ಆಯುಕ್ತ ಮತ್ತು ಕೈಮಗ್ಗ ಮತ್ತು ಜವಳಿ ನಿರ್ದೇಶಕ ಟಿಎಂಎಸ್‌ ಕುಮಾರ್‌ ಅವರಿಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಹುದ್ದೆಯನ್ನು, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಅವರಿಗೆ ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹುದ್ದೆ, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ್‌ ಅವರಿಗೆ ಸಹಕಾರ ಇಲಾಖೆ ಕಾರ್ಯದರ್ಶಿ ಹುದ್ದೆ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎಸ್‌.ವಿ. ಪ್ರಸಾದ್‌ ಅವರಿಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಹುದ್ದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಡಿ.ಎಸ್‌.ರಮೇಶ್‌ ಅವರಿಗೆ ಕರ್ನಾಟಕ ವಸತಿ ನಿಗಮದ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಕ್ಯಾಪ್ಟನ್‌ ಡಾ.ರಾಜೇಂದ್ರ ಅವರನ್ನು ಕೆಪಿಎಸ್‌ಸಿ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿದ್ದನ್ನು ಮಾರ್ಪಡಿಸಿ ಆ ಹುದ್ದೆಯನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ರಿಚರ್‌್ಡ ವಿನ್ಸೆಂಟ್‌ ಡಿಸೋಜಾ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಸಿಎಸ್‌ ವಂದಿತಾ ಶರ್ಮ ಪದಗ್ರಹಣ, ವಿಧಾನಸೌಧದಲ್ಲೀಗ ಲೇಡೀಸ್‌ ಪವರ್‌!
ನಿರ್ಗಮಿತ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರ ನಿವೃತ್ತಿಯಿಂದಾಗಿ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986ನೇ ಸಾಲಿನ ತಂಡದ ವಂದಿತಾ ಶರ್ಮಾ ಅವರನ್ನು ಸರ್ಕಾರ ಉತ್ತರಾಧಿಕಾರಿಯಾಗಿ ನೇಮಕ ಮಾಡಿತ್ತು. ಅದರಂತೆ ರಾಜ್ಯ ಸರ್ಕಾರದ 39ನೇ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರು ಅಧಿಕಾರ ಸ್ವೀಕರಿಸುವುದರೊಂದಿಗೆ ಕಾರ್ಯಾಂಗದ ಅತ್ಯುನ್ನತ ಹುದ್ದೆ ಅಲಂಕರಿಸಿದ ನಾಲ್ಕನೇ ಮಹಿಳೆಯಾಗಿದ್ದಾರೆ. ಅವರ ಅಧಿಕಾರಾವಧಿ 2023ರ ನವೆಂಬರ್‌ 30ಕ್ಕೆ ಮುಕ್ತಾಯಗೊಳ್ಳಲಿದೆ.

ಸ್ಟೇಡಿಯಂನಲ್ಲಿ ನಾಯಿ ಜೊತೆ ವಾಕಿಂಗ್ ಮಾಡಿದ ಅಧಿಕಾರಿ ಬೆನ್ನಲ್ಲೇ ವೈರಲ್ ಆಗ್ತಿದೆ ಈ ಮಹಿಳಾ IAS ಫೋಟೋ!

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ, 2006ರಲ್ಲಿ ಮಾಲತಿ ದಾಸ್‌ ಹಾಗೂ 2017ರಲ್ಲಿ ಕೆ.ರತ್ನ ಪ್ರಭ ಅವರು ನಿರ್ವಹಿಸಿದ್ದರು. ರತ್ನಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್‌ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್‌. ರಾಜು ಅಲಂಕರಿಸಿದ್ದರು. ಆಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ ಎಂಬುದು ಗಮನಾರ್ಹ ಅಂಶವಾಗಿತ್ತು.

ಅದೇ ರೀತಿ ಈಗ ವಂದಿತಾ ಶರ್ಮಾ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹಾಗೂ ವಿಧಾನ ಪರಿಷತ್‌ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮಿ ಶಕ್ತಿ ಕೇಂದ್ರದ ಶಕ್ತಿಯಾಗಿ ಹೊಸ ದಾಖಲೆ ಸ್ಥಾಪಿಸಲಿದ್ದಾರೆ.