ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ಮುಂಬಡ್ತಿ ಪರೀಕ್ಷೆಗೆ ಕನ್ನಡವನ್ನು ಕಡೆಗಣಿಸಿ, ಕೇವಲ ಆಂಗ್ಲ ಹಿಂದಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹಿಂದೆ ಇದೇ ಕಾರಣಕ್ಕೆ ಪ್ರತಿಭಟನೆ ನಡೆದು ಪರೀಕ್ಷೆ ರದ್ದಾಗಿದ್ದ ಹಿನ್ನೆಲೆ, ಇದೀಗ ಹೊಸ ಅಧಿಸೂಚನೆ ರೈಲ್ವೆ ಇಲಾಖೆ ತಡೆ ಹಿಡಿದಿದೆ.

 ಹುಬ್ಬಳ್ಳಿ (ಏ.1): ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಮುಂಬಡ್ತಿ ಪರೀಕ್ಷೆಗಾಗಿ ಮತ್ತೆ ಕನ್ನಡ ಬಿಟ್ಟು ಅಧಿಸೂಚನೆ ಹೊರಡಿಸಿದ್ದ ರೈಲ್ವೆ ಇಲಾಖೆ, ನಾಲ್ಕೇ ದಿನದಲ್ಲಿ ಅಧಿಸೂಚನೆಯನ್ನು ತಡೆ ಹಿಡಿದಿದೆ.

ಹುಬ್ಬಳ್ಳಿ ವಿಭಾಗದಲ್ಲಿ Chief commercial cum Ticket supervisor Level 6 against 10% LDCE Quota of commercial department ಹುದ್ದೆಗಾಗಿ ಯುಆರ್‌-07, ಎಸ್‌ಸಿ-1, ಎಸ್‌ಟಿ-1 ಸೇರಿ ಒಟ್ಟು 9 ಹುದ್ದೆಗಳ ನೇಮಕಾತಿಗೆ ಆಂಗ್ಲ ಮತ್ತು ಹಿಂದಿಯಲ್ಲಿ ಪರೀಕ್ಷೆ ನಡೆಸುವುದಾಗಿ ಮಾ.27ರಂದು ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಕೆಗೆ ಏ.27 ಕೊನೆಯ ದಿನ ನಿಗದಿಗೊಳಿಸಲಾಗಿತ್ತು. ಆದರೆ, ಈ ಆದೇಶವನ್ನು ಈಗ ವಲಯದ ಹಿರಿಯ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಇಲಾಖೆಯ ಸಲಹೆ ಬರುವವರೆಗೂ ತಡೆ ಹಿಡಿಯಲಾಗಿದೆ ಎಂದು ತಿಳಿಸಲಾಗಿದೆ.

ಈ ಹಿಂದೆ, ಮಾರ್ಚ್‌ 17ರಂದು ನೈಋತ್ಯ ರೈಲ್ವೆ ವಿಭಾಗದಲ್ಲಿರುವ ಗೂಡ್ಸ್‌ ಟ್ರೈನ್‌ ಮ್ಯಾನೇಜರ್‌ ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ (ಲಿಮಿಟೆಡ್‌ ಡಿಪಾರ್ಟ್‌ ಮೆಂಟಲ್‌ ಕಾಂಪಿಟಿಟೀವ್‌ ಎಕ್ಸಾಮಿನೇಷನ್‌) ಮುಂಬಡ್ತಿ ಹುದ್ದೆಗಳಿಗೆ ನಡೆಸಲಾದ ಪರೀಕ್ಷೆ ವೇಳೆ ಕೂಡ ಕನ್ನಡವನ್ನು ಕಡೆಗಣಿಸಲಾಗಿತ್ತು. ಕೊನೆ ಕ್ಷಣದಲ್ಲಿ ಕನ್ನಡ ಬಿಟ್ಟು ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದ ಕುರಿತು ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. ಆಗ ಕರವೇ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದು ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.