ಕುರಿಗಾಹಿಗಳಿಗೆ 21 ಕುರಿ ನೀಡಲು ಸಂಪುಟ ಒಪ್ಪಿಗೆ
ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಬಲಗೊಳ್ಳಲು 354.50 ಕೋಟಿ ರು. ವೆಚ್ಚದಲ್ಲಿ ಜಾರಿಗೊಳಿಸಿರುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಆಡಳಿತಾತ್ಮಕ ಆದೇಶಕ್ಕೆ ಸಚಿವ ಸಂಪುಟ ಸಭೆಯು ಘಟನೋತ್ತರ ಅನುಮೋದನೆ ನೀಡಿದೆ.
ಬೆಂಗಳೂರು (ಡಿ.09): ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಬಲಗೊಳ್ಳಲು 354.50 ಕೋಟಿ ರು. ವೆಚ್ಚದಲ್ಲಿ ಜಾರಿಗೊಳಿಸಿರುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಆಡಳಿತಾತ್ಮಕ ಆದೇಶಕ್ಕೆ ಸಚಿವ ಸಂಪುಟ ಸಭೆಯು ಘಟನೋತ್ತರ ಅನುಮೋದನೆ ನೀಡಿದೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆಯನ್ನು (ಹೋತ) ನೀಡಲಾಗುತ್ತದೆ.
ಪ್ರತಿ ಕುರಿಗಾಹಿ ಘಟಕಗಳನ್ನು ನಿರ್ಮಿಸಲು 1.75 ಲಕ್ಷ ರು.ನಂತೆ 20 ಸಾವಿರ ಘಟಕಗಳಿಗೆ ಅನುದಾನ ನೀಡಲಾಗುವುದು. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಒಟ್ಟು 354.50 ಕೋಟಿ ರು. ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರವು ಶೇ.50ರಷ್ಟುಮತ್ತು ರಾಜ್ಯ ಸರ್ಕಾರವು ಶೇ.25ರಷ್ಟುಆರ್ಥಿಕ ನೆರವು ನೀಡಲಿದ್ದು, ಉಳಿದ ಶೇ.25ರಷ್ಟುಮೊತ್ತವನ್ನು ಫಲಾನುಭವಿಗಳು ಭರಿಸಬೇಕು. ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 20 ಸಾವಿರ ಸದಸ್ಯರು ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದರು.
ಎತ್ತಿನಹೊಳೆ ವೆಚ್ಚ ಡಬಲ್: ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ
ಸಾರಿಗೆ ಸಂಸ್ಥೆ ಅಧಿಕಾರಿಗಳ ಹಂಚಿಕೆ: ನಾಲ್ಕು ಸಾರಿಗೆ ಸಂಸ್ಥೆಗಳ ದರ್ಜೆ-3ರ ಮೇಲ್ವಿಚಾರಕ ಸಿಬ್ಬಂದಿ, ದರ್ಜೆ-2 ಮತ್ತು ದರ್ಜೆ-1 (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಆಯಾ ಸಾರಿಗೆ ಸಂಸ್ಥೆಗಳಿಗೆ ಶಾಶ್ವತ ಹಂಚಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ. ದರ್ಜೆ-1 (ಹಿರಿಯ ಶ್ರೇಣಿ) ಮತ್ತು ಮೇಲ್ಪಟ್ಟವೃಂದಗಳ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ. ಇನ್ನು, ಕೇಂದ್ರದ ಫೇಮ್-2 ಯೋಜನೆಯಡಿ 921 ಹವಾನಿಯಂತ್ರಣ ರಹಿತ ಎಲೆಕ್ಟ್ರಿಕಲ್ ಬಸ್ಗಳನ್ನು ಖರೀದಿಸಲು ಸಹಮತ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಧನಸಹಾಯದೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಸಂಪುಟ ಸಭೆಯ ಇತರೆ ಪ್ರಮುಖ ತೀರ್ಮಾನಗಳು
* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಆವರಣ ಮತ್ತು ಕೇಂದ್ರ ಸ್ಥಾನವನ್ನು ಶಿವಮೊಗ್ಗದ ಇರುವಕ್ಕಿಯಲ್ಲಿ ಸ್ಥಾಪಿಸಿ ಅಭಿವೃದ್ಧಿಪಡಿಸುವ ಕಾಮಗಾರಿಯ ಪರಿಷ್ಕೃತ ಯೋಜನಾ ಮೊತ್ತ 169.47 ಕೋಟಿ ರು.ಗೆ ಆಡಳಿತಾತ್ಮಕ ಅನುಮೋದನೆ
* ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಗ್ರಾಮದಲ್ಲಿ ಒಂದು ಎಕರೆ ಜಮೀನನ್ನು ಅಯ್ಯಪ್ಪ ಸ್ವಾಮಿ ದೇವಾಲಯ ಮತ್ತು ಭಜನಾ ಮಂದಿರ ನಿರ್ಮಿಸಲು ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ಗೆ ಮಂಜೂರು.
* ಚಿಕ್ಕಮಗಳೂರು ಜಿಲ್ಲೆ ಹಿರೇಮಗಳೂರು ಗ್ರಾಮದಲ್ಲಿ ಆರು ಎಕರೆ ಜಮೀನು ಮತ್ತು ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ಹುಲಿಮಂಗಲ ಗ್ರಾಮದಲ್ಲಿ 1.36 ಎಕರೆ ಜಮೀನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟೊ್ರೕತ್ಥಾನ ಪರಿಷತ್ಗೆ ಮಂಜೂರು
* ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬೋರಬಂಡಾ ಗ್ರಾಮದಲ್ಲಿ 8.30 ಎಕರೆ ಜಮೀನನ್ನು ಶ್ರೀಲಕ್ಷ್ಮಿ ತಿಮ್ಮಪ್ಪ ದೇವಾಲಯ ಸೇವಾ ಸಂಘಕ್ಕೆ ನೀಡಲು ಒಪ್ಪಿಗೆ
* ಕರ್ನಾಟಕ ಗೃಹ ಮಂಡಳಿಯು ಹಾವೇರಿ ಜಿಲ್ಲೆಯ ದೇವಗಿರಿಯಲ್ಲಾಪುರ ಗ್ರಾಮದಲ್ಲಿ ವಸತಿ ಯೋಜನೆಗಾಗಿ ಭೂಸ್ವಾಧೀನಪಡಿಸಿರುವ 99.07 ಎಕರೆ ಜಮೀನು ಪರಿಹಾರದ ಬದಲಿಗೆ ಭೂ ಮಾಲೀಕರಿಗೆ 50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿ ನಿವೇಶನ ನೀಡಲು ತೀರ್ಮಾನ. ಧಾರವಾಡ ಜಿಲ್ಲೆಯ ಸತ್ತೂರು ಗ್ರಾಮದಲ್ಲಿ 258.09 ಎಕರೆ ಜಮೀನಿನ ಪೈಕಿ 50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಒಪ್ಪಿಗೆ
ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆಗೆ ಮಾರ್ಚ್ವರೆಗೆ ಅವಕಾಶ
* ರಾಯಚೂರು ತಾಲೂಕಿನ ನಾರಾಯಣಪುರ ಬಲದಂಡೆ ನಾಲೆಯ ಉಪಕಾಲುವೆಯ ಭಾದಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 253.94 ಕೋಟಿ ರು. ಅಂದಾಜು ಮೊತ್ತದ ಆರು ಏತ ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ.
* ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮೈಸೂರು-ಹದಿನಾರು ಮತ್ತು ಶಿರಾ-ನಂಜನಗೂಡು ರಸ್ತೆ ಸಂಪರ್ಕಿಸಲು ಹದಿನಾರು ಮತ್ತು ಸರಗೂರು ರಸ್ತೆಯ ಮಾರ್ಗವಾಗಿ ಕಬಿನಿ ನದಿಗೆ ಅಡ್ಡಲಾಗಿ 27 ಕೋಟಿ ರು. ಅಂದಾಜು ಮೊತ್ತದಲ್ಲಿ ಸೇತುವೆ ನಿರ್ಮಾಣದ ಕಾಮಗಾರಿಗೆ ಅಡಳಿತಾತ್ಮಕ ಅನುಮೋದನೆ.