Asianet Suvarna News Asianet Suvarna News

ಭಾರತಕ್ಕೆ ಮಾದರಿಯಾಗಿ ಕನ್ನಡ ನಾಡು ಕಟ್ಟೋಣ: ರಾಜ್ಯೋತ್ಸವಕ್ಕೆ ಡಿ.ಕೆ.ಶಿವಕುಮಾರ್‌ ಲೇಖನ

ಎಲ್ಲ ಕ್ಷೇತ್ರಗಳಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಾ, ಆರ್ಥಿಕವಾಗಿ ಇಡೀ ದೇಶದಲ್ಲೇ 2ನೇ ಮುಂಚೂಣಿಯ ರಾಜ್ಯವಾಗಿ ಹೊಸ ಮೈಲುಗಲ್ಲುಗಳನ್ನು ನಿರ್ಮಿಸುತ್ತಿರುವ ಕರ್ನಾಟಕದ ಜನತೆಗೆ 68ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

special article by dcm dk shivakumar over kannada rajyotsava gvd
Author
First Published Nov 1, 2023, 6:23 AM IST

ಎಲ್ಲ ಕ್ಷೇತ್ರಗಳಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಾ, ಆರ್ಥಿಕವಾಗಿ ಇಡೀ ದೇಶದಲ್ಲೇ 2ನೇ ಮುಂಚೂಣಿಯ ರಾಜ್ಯವಾಗಿ ಹೊಸ ಮೈಲುಗಲ್ಲುಗಳನ್ನು ನಿರ್ಮಿಸುತ್ತಿರುವ ಕರ್ನಾಟಕದ ಜನತೆಗೆ 68ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಮಹಾತ್ಮ ಗಾಂಧಿ ಅವರು ಸೇರಿದಂತೆ ಅನೇಕ ಮಹನೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ತಮ್ಮ ಜೀವನವನ್ನು ಮುಡಿಪಾಗಿಟ್ಟಂತೆ, ಸ್ವತಂತ್ರ ಭಾರತದ ಈ ಸುಂದರ ಕನ್ನಡ ನಾಡು ಕಟ್ಟಲು ಅನೇಕ ಮಹನೀಯರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ನಾಡಿನ ಹಿರಿಯರ ಪರಿಶ್ರಮ, ದೂರದೃಷ್ಟಿಯ ಫಲವಾಗಿ ನಾವಿಂದು ಅಭಿವೃದ್ಧಿಯಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ. 

ರಾಜ್ಯವು ಸಾಕಷ್ಟು ಬೆಳವಣಿಗೆ ಸಾಧಿಸಿದ್ದರೂ, ಸಾಧಿಸಬೇಕಾಗಿರುವುದು ಬಹಳಷ್ಟು ಇದೆ. ನಾಡಿನ ಪ್ರತಿಯೊಬ್ಬ ಪ್ರಜೆಯ ಆರ್ಥಿಕ, ಸಾಮಾಜಿಕ ಸ್ಥಿತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಯಾವುದೇ ವ್ಯಕ್ತಿ ಮೂಲಸೌಕರ್ಯ, ಗೌರವಯುತ ಜೀವನದಿಂದ ವಂಚಿತನಾಗಬಾರದು ಎಂಬುದು ನನ್ನ ವೈಯಕ್ತಿಕ ಮತ್ತು ನಮ್ಮ ಪಕ್ಷದ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಎಲ್ಲ ರಂಗಗಳಲ್ಲೂ ಕರ್ನಾಟಕ ಮುಂಚೂಣಿ ರಾಜ್ಯವಾಗಿ ಹೊರ ಹೊಮ್ಮಬೇಕು. ನಾಡಿನ ಸಮಗ್ರ ಅಭಿವೃದ್ಧಿ, ಕನ್ನಡಿಗರ ಏಳ್ಗೆಯಾಗಬೇಕು ಎಂಬ ನಮ್ಮ ಕನಸಿಗೆ ರಾಜ್ಯದ ಜನತೆ ಆಶೀರ್ವಾದ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ.

ನನಗೆ ಮಾಡೋಕೆ ಬೇರೆ ಕೆಲ್ಸ ಇದೆ: ರಮೇಶ್‌ಗೆ ಡಿಕೆಶಿ ತಿರುಗೇಟು

ಸರ್ಕಾರ ರಚನೆಯಾದ ದಿನದಿಂದಲೇ ನಾಡಿನ ಜನರ ನಿರೀಕ್ಷೆಯಂತೆ ನಾವು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹ ಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ನುಡಿದಂತೆ ನಡೆದಿದ್ದೇವೆ. ಜನಕಲ್ಯಾಣ ಯೋಜನೆಗಳ ಅನುಷ್ಠಾನದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಉತ್ತೇಜನ ಸಿಕ್ಕಿದೆ. ಶಕ್ತಿ ಯೋಜನೆಯಿಂದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯಾಗಿ ಮಹಿಳೆಯರ ಸಬಲೀಕರಣದ ಕಡೆ ದಾಪುಗಾಲು ಇಡಲಾಗುತ್ತಿದೆ. ಸಮೂಹ ಸಾರಿಗೆ ಬಳಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಗೃಹಲಕ್ಷ್ಮೀ ಯೋಜನೆಯು ಮನೆಯೊಡತಿಗೆ ಉತ್ಸಾಹ ತುಂಬಿ, ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದೆ. ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಸರ್ಕಾರ ಬೀ‍ಳಿಸಲು ಬಿಜೆಪಿ ದೊಡ್ಡವರ ಷಡ್ಯಂತ್ರ: ಡಿ.ಕೆ.ಶಿವಕುಮಾರ್‌

ನಾಡಿನ ಕೊಟ್ಯಂತರ ಜನ, ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಾಡಿನ ಸಮಗ್ರ ಅಭಿವೃದ್ಧಿಯ ಕನಸಿನಲ್ಲಿ ಇದು ಆರಂಭ ಮಾತ್ರ. ಕೈಗಾರಿಕೆಗಳ ಸ್ಥಾಪನೆ, ಉದ್ಯೋಗಗಳ ಸೃಷ್ಟಿ, ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯ ಶಿಕ್ಷಣ ನೀತಿ ಅನುಷ್ಠಾನ, ಎಲ್ಲ ರೀತಿಯ ಸೌಲಭ್ಯಗಳ ಸಹಿತ ಮಾದರಿ ಶಾಲೆಗಳ ಅಭಿವೃದ್ಧಿ, ವಸತಿ ಯೋಜನೆಗಳು, ನೀರಾವರಿ ಯೋಜನೆಗಳ ಅನುಷ್ಠಾನ, ಜಾಗತಿಕ ನಗರವಾಗಿ ಬೆಂಗಳೂರು ನಗರವನ್ನು ಬೆಳೆಸಲು ಬ್ರ್ಯಾಂಡ್ ಬೆಂಗಳೂರು ಯೋಜನೆ, ಬೆಂಗಳೂರು ಹಾಗೂ ಸುತ್ತಮುತ್ತ ಬಂಡವಾಳ ಹೂಡಿಕೆ, ಟ್ರಾಫಿಕ್ ಜಾಮ್‌ಗೆ ಮುಕ್ತಿ ನೀಡುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ. ಕನ್ನಡ ನಾಡನ್ನು ಇಡೀ ದೇಶಕ್ಕೆ ಮಾದರಿಯಾಗುವಂತೆ, ನಾಡಿನ ಪ್ರತಿಯೊಬ್ಬ ವ್ಯಕ್ತಿಯ ಏಳಿಗೆಗೆ ಹೊಂದಿರುವ ಕನಸು ನನಸು ಮಾಡಲು ನಾಡಿನ ಜನ ಕೈಜೋಡಿಸುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನನ್ನದು. ಎಲ್ಲರಿಗೂ ಶುಭವಾಗಲಿ.

Follow Us:
Download App:
  • android
  • ios