ಹವಾಮಾನ ಇಲಾಖೆಯು ಕರ್ನಾಟಕದ ಐದು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿ 'ಎಲ್ಲೋ ಅಲರ್ಟ್' ಘೋಷಿಸಿದೆ. ಈ ಮಳೆಯು ಬಿಸಿಲಿನಿಂದ ತಾತ್ಕಾಲಿಕ ಉಪಶಮನ ನೀಡಲಿದ್ದರೂ, ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಬೆಂಗಳೂರು (ಫೆ.23): ರಾಜ್ಯಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಿರುವಾಗಲೇ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 'ಎಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ.

ಯಾವ ಜಿಲ್ಲೆಗಳಿಗೆ ಮಳೆ ಅಲರ್ಟ್?

ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವರುಣನ ಸಿಂಚನವಾಗಲಿದೆ. ಮುಖ್ಯವಾಗಿ ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಕೇವಲ ಮಳೆಯಷ್ಟೇ ಅಲ್ಲದೆ, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ತಾಪಮಾನ ಏರಿಕೆಯ ಆತಂಕ

ಮಳೆಯ ಮುನ್ಸೂಚನೆಯ ನಡುವೆಯೇ ಈ ಬಾರಿಯ ಬೇಸಿಗೆಯ ಕರಾಳತೆಯ ಬಗ್ಗೆಯೂ ಹವಾಮಾನ ಇಲಾಖೆ ಎಚ್ಚರಿಸಿದೆ. ಈ ವರ್ಷ ರಾಜ್ಯಾದ್ಯಂತ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗುವ ಲಕ್ಷಣಗಳಿವೆ. ಸರಾಸರಿ ಉಷ್ಣಾಂಶವು ವಾಡಿಕೆಗಿಂತ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಲಿದ್ದು, ಜನಸಾಮಾನ್ಯರು ಬಿಸಿಲಿನ ಬೇಗೆಯಿಂದ ಹೈರಾಣಾಗಲಿದ್ದಾರೆ.

ಕಳೆದ ಕೆಲವು ದಿನಗಳಿಂದ ಒಣಹವೆ ಮುಂದುವರಿದಿದ್ದರಿಂದ ಭೂಮಿ ಕಾದ ಕೆಂಡದಂತಾಗಿತ್ತು. ಈಗ ದಿಢೀರ್ ಮಳೆ ಆರಂಭವಾಗುತ್ತಿರುವುದು ರೈತರು ಹಾಗೂ ಬಿಸಿಲಿನಿಂದ ತತ್ತರಿಸಿದ ಜನರಿಗೆ ತಾತ್ಕಾಲಿಕವಾಗಿ ತಂಪಿನ ಅನುಭವ ನೀಡಲಿದೆ. ಆದರೂ, ಬಿರುಗಾಳಿ ಸಹಿತ ಮಳೆ ಇರುವುದರಿಂದ ಕೃಷಿ ಚಟುವಟಿಕೆಗಳು ಹಾಗೂ ತೆರೆದ ಪ್ರದೇಶಗಳಲ್ಲಿ ಇರುವವರು ಜಾಗರೂಕರಾಗಿರುವಂತೆ ತಿಳಿಸಲಾಗಿದೆ.