ದೇಶದ ಪ್ರಶ್ನೆ ಬಂದಾಗ ರಾಜಕೀಯ ಬದಿಗಿಟ್ಟು ಕೇಂದ್ರದ ಜೊತೆ ನಿಲ್ಲಬೇಕು: ಯುಟಿ ಖಾದರ್

Synopsis
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಅವರ ಕುಟುಂಬಕ್ಕೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದ ಪರಿಹಾರ ಕಡಿಮೆ ಇದ್ದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಸ್ಥಳೀಯರ ಸಹಾಯವನ್ನು ಶ್ಲಾಘಿಸಿದರು.
ಶಿವಮೊಗ್ಗ (ಏ.25): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ niv ಅವರ ಕುಟುಂಬಕ್ಕೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಂಜುನಾಥ್ ಅವರ ಪತ್ನಿ ಪಲ್ಲವಿ, ತಾಯಿ ಸುಮತಿ, ಮತ್ತು ಪುತ್ರ ಅಭಿಜಯ್ ಅವರೊಂದಿಗೆ ಮಾತನಾಡಿದ ಖಾದರ್, ಕುಟುಂಬಸ್ಥರಿಗೆ ಮಾನಸಿಕ ಧೈರ್ಯ ತುಂಬಿದರು.
ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸ್ಪೀಕರ್ ಯುಟಿ ಖಾದರ್, 'ಮಂಜುನಾಥ್ ಅವರ ಕುಟುಂಬಸ್ಥರಾದ ಪಲ್ಲವಿ, ಸುಮತಿ, ಮತ್ತು ಅಭಿಜಯ್ ಅವರೊಂದಿಗೆ ಸಂವಾದ ನಡೆಸಿದ್ದೇನೆ. ಈ ದುರ್ಘಟನೆಯ ಸಂದರ್ಭದಲ್ಲಿ ಪಲ್ಲವಿ ಅವರು ಧೈರ್ಯವಾಗಿ ಎದುರಿಸುತ್ತಿದ್ದಾರೆ. ಮೊದಲಿಗೆ ಕುಟುಂಬಕ್ಕೆ ಸಾಂತ್ವನದ ಮೂಲಕ ಮಾನಸಿಕ ಬೆಂಬಲ ನೀಡಬೇಕಿದೆ. ಸರ್ಕಾರ ಘೋಷಿಸಿರುವ ಪರಿಹಾರದ ಕುರಿತು ಕಡಿಮೆ ಇದೆ ಎಂಬ ಬಗ್ಗೆ ನಂತರ ಚರ್ಚಿಸುತ್ತೇವೆ. ಈ ವಿಷಯವನ್ನು ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಜೊತೆ ಮಾತನಾಡುತ್ತೇನೆ' ಎಂದರು.
ಇದನ್ನೂ ಓದಿ: ಸೌಹಾರ್ದತೆ ನೆಲೆಸಲು ಯಾವ ಹಂತಕ್ಕೂ ಹೋಗಲು ನಾನು ಸಿದ್ಧ: ಯು.ಟಿ. ಖಾದರ್
ದೇಶದ ವಿಚಾರ ಬಂದಾಗ ಒಗ್ಗಟ್ಟಾಗಬೇಕು:
ಇಂಥ ಘಟನೆಗಳು ನಡೆಯಬಾರದೆಂದು ಕುಟುಂಬಸ್ಥರು ಹೇಳಿದ್ದಾರೆ. ಇಡೀ ದೇಶ ಮತ್ತು ಜನರು ಕೇಂದ್ರ ಸರ್ಕಾರದ ಜೊತೆ ಇದ್ದೇವೆ. ಇದು ಇಡೀ ದೇಶದ ಪ್ರಶ್ನೆ ರಾಜಕೀಯ ಬದಿಗಿಟ್ಟು ಕೇಂದ್ರದ ಜೊತೆ ಇರಬೇಕು. ಕೃತ್ಯ ಮಾಡಿದವರಿಗೆ ಮಾತ್ರವಲ್ಲ ಅವರನ್ನು ಬೆಂಬಲಿಸಿದವರಿಗೂ ಕ್ರಮ ಕೈಗೊಳ್ಳಬೇಕಿದೆ ಎಂದರು. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರ ಸೇವಕ ಎಂದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಚಾಟಿ!
ಸ್ಥಳೀಯರ ಸಹಾಯ ಶ್ಲಾಘಿಸಿದ ಖಾದರ್:
ಸ್ಥಳೀಯರ ಸಹಾಯವನ್ನು ಶ್ಲಾಘಿಸಿದ ಖಾದರ್, 'ಕಠಿಣ ಪರಿಸ್ಥಿತಿಯಲ್ಲೂ ಪ್ರವಾಸಿಗರಿಗೆ ಸಹಾಯ ಮಾಡಿದ ಸ್ಥಳೀಯರು ಮಾನವೀಯತೆ ಮತ್ತು ಮನುಷ್ಯತ್ವದ ಧರ್ಮವನ್ನು ತೋರಿದ್ದಾರೆ. ಇದು ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.