ಗೋವಿಂದಾ ಎನ್ನಲು ಇದು ತಿರುಪತಿಯಲ್ಲ ವಿಧಾನಸಭೆ: ಸ್ಪೀಕರ್ ಗರಂ!
‘ಏನ್ರಪ್ಪಾ ಇವತ್ತು ವೈಕುಂಠ ಏಕಾದಶೀನಾ? ಗೋವಿಂದಾ..ಗೋವಿಂದ ಎಂದು ಹೇಳ್ತಾ ಇದ್ದೀರಾ?’| ಸ್ಪೀಕರ್ ರಮೇಶ್ ಕುಮಾರ್ ಗರಂ
‘ಏನ್ರಪ್ಪಾ ಇವತ್ತು ವೈಕುಂಠ ಏಕಾದಶೀನಾ? ಗೋವಿಂದಾ..ಗೋವಿಂದ ಎಂದು ಹೇಳ್ತಾ ಇದ್ದೀರಾ?’
ಮಂಗಳವಾರ ವಿಧಾನಸಭೆಯಲ್ಲಿ ಪೂರಕ ಬಜೆಟ್ ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡುವ ವೇಳೆ ಆಡಳಿತ ಪಕ್ಷದ ಸದಸ್ಯರು ಗೋವಿಂದಾ ಗೋವಿಂದ ಎಂದಿದ್ದಕ್ಕೆ ಸಭಾಧ್ಯಕ್ಷ ರಮೇಶ್ಕುಮಾರ್ ತುಸು ಗರಂ ಆಗಿ ಹೇಳಿದ್ದು ಹೀಗೆ.
ಸಭಾತ್ಯಾಗ ಮಾಡುವ ನಿರ್ಧಾರ ಪ್ರಕಟಿಸಿದ ನಂತರ ಬಿಜೆಪಿ ಸದಸ್ಯರು ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಬೇಕು ಎಂದು ಕೇಳಿದರು. ಆಗ ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದಾಗ ನಿಮಗೆ ಮತ್ತೇಕೆ ಉತ್ತರ ಕೊಡಬೇಕು ಎಂದು ಹೇಳುತ್ತಾ ಗೋವಿಂದಾ ಗೋವಿಂದ.. ಎಂದು ಕೂಗಲು ಆರಂಭಿಸಿದರು. ಅದಕ್ಕೆ ಸ್ಪೀಕರ್ ರಮೇಶಕುಮಾರ್ ಗರಂ ಆಗಿ ಮೇಲಿನಂತೆ ಹೇಳಿದರು.
ಇದು ವಿಧಾನಸಭೆ. ತಿರುಪತಿ ಅಲ್ಲ. ತಿರುಪತಿಯಾಗಿದ್ದರೆ ನನಗೂ ನಿಮಗೂ ಪುಣ್ಯ ಬರುತ್ತಿತ್ತು. ಪ್ರಜಾಪ್ರಭುತ್ವದಲ್ಲಿ ಗೋವಿಂದ ಗೋವಿಂದ ಎಂದರೆ ಮಾರಾಮಾರಿ ನಡೆಯುತ್ತೆ. ಎಲ್ಲರೂ ಸುಮ್ಮನೆ ಕುಳಿತುಕೊಳ್ಳಿ. ವಿಪಕ್ಷದವರು ಸಭಾತ್ಯಾಗ ಮಾಡಿದ್ದಾರೆ. ಅವರ ಸಂಖ್ಯೆ ದೊಡ್ಡದು. ಹೊರಗೆ ಹೋಗಲು ಬಿಡಿ ಎಂದು ಹೇಳಿದರು. ಆಗ ಎಲ್ಲ ಸದಸ್ಯರು ಸುಮ್ಮನೆ ಕುಳಿತರು.