Asianet Suvarna News Asianet Suvarna News

Dharmasthala Sowjanya Case: ಸಂತೋಷ್ ದೋಷಿಯಲ್ಲವೆಂದು 10ವರ್ಷದಿಂದ ಹೇಳಿದ್ದೇವೆ: ಸೌಜನ್ಯ ತಾಯಿ

ಸೌಜನ್ಯ ಪ್ರಕರಣದಲ್ಲಿ  ಸಂತೋಷ್ ರಾವ್ ಆರೋಪಿ ಅಲ್ಲ ಅಂತ ನಾವು ಹತ್ತು ವರ್ಷದಿಂದ ಹೇಳಿಕೊಂಡು ಬಂದಿದ್ದೇವೆ. ಅದರ ಜೊತೆಗೆ ಮೂರ್ನಾಲ್ಕು ಜನರ ಹೆಸರು ಕೊಟ್ಟಿದ್ದೆವು, ಅವರ ತನಿಖೆ ಆಗಬೇಕು ಎಂದು ಸೌಜನ್ಯ ತಾಯಿ ಹೇಳಿದ್ದಾರೆ.

Sowjanya mother reaction after   santosh rao acquitted from Sowjanya murder case kannada news gow
Author
First Published Jun 17, 2023, 12:22 AM IST

ಬೆಳ್ತಂಗಡಿ (ಜೂ.17): ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಗೆ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಸೌಜನ್ಯ ತಾಯಿ ಕುಸುಮಾವತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಂತೋಷ್ ರಾವ್ ದೋಷಮುಕ್ತ ಎಂದು ಇವತ್ತು ತೀರ್ಪು ಬಂದಿದೆ. ಈ ಮೂಲಕ ಇದರಲ್ಲಿ ‌ನಮಗೆ  ಒಂದು ಜಯ ಸಿಕ್ಕಿದೆ. ಆದರೆ ಸಿಬಿಐ ಮತ್ತೆ ಆರೋಪಿಗಳು ಯಾರು ಅಂತ ತನಿಖೆ ಮಾಡಿ ನ್ಯಾಯ ಕೊಡಲಿ. ಸಿಬಿಐ ತನಿಖೆಯಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಮುಂದೆಯೂ‌ ನಾವು ಈ ನಿಟ್ಟಿನಲ್ಲಿ ಹೋರಾಟ ಮಾಡ್ತೇವೆ. ಸಂತೋಷ್ ರಾವ್ ಆರೋಪಿ ಅಲ್ಲ ಅಂತ ನಾವು ಹತ್ತು ವರ್ಷದಿಂದ ಹೇಳಿಕೊಂಡು ಬಂದಿದ್ದೇವೆ. ಅದರ ಜೊತೆಗೆ ಮೂರ್ನಾಲ್ಕು ಜನರ ಹೆಸರು ಕೊಟ್ಟಿದ್ದೆವು, ಅವರ ತನಿಖೆ ಆಗಬೇಕು. ಅವರು ತನಿಖೆಗೆ ತಡೆ ತಂದಿದ್ದಾರೆ, ಈ ಪ್ರಕರಣದಲ್ಲಿ ಅವರು ಇಲ್ಲದಿದ್ರೆ ತಡೆಯಾಜ್ಞೆ ಯಾಕೆ ತಂದಿದ್ದು? ಅವರ ತನಿಖೆ ಆಗಬೇಕು, ನಮಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಪರೀಕ್ಷೆ ಅಂತ ಹೋದ ಮಗಳು ಮನೆಗೆ ವಾಪಾಸ್ ಬರಲೇ‌ ಇಲ್ಲ. ಆವತ್ತೇ ಹುಡುಕಾಡಿದ್ರೂ ಮಗಳು ಸಿಗಲೇ ಇಲ್ಲ. ಆದರೆ ಮರುದಿನ ಅವಳ ‌ಮೃತದೇಹ ನಮಗೆ ಸಿಕ್ಕಿದೆ. ಒಳ ಉಡುಪು ಮನೆಯಿಂದಲೇ ತೆಗೆದುಕೊಂಡು ಹೋಗಿ ಸ್ಥಳದಲ್ಲಿ ಪೊಲೀಸರೇ ಹಾಕಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ನಮಗೆ ನ್ಯಾಯ ಕೊಡಿಸಲು ಬೆನ್ನ ಹಿಂದೆ ನಿಂತಿದ್ದರು. ನಮಗೆ ಸಿಬಿಐ ನ್ಯಾಯ ಕೊಡಬೇಕು, ಮತ್ತೆ ಹೋರಾಟ ಮಾಡ್ತೇವೆ ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿಕೆ ನೀಡಿದ್ದಾರೆ.

ಸೌಜನ್ಯ ಪ್ರಕರಣ, ಧರ್ಮಸ್ಥಳದವರು ಇಂತವರು ಅಂತ ಹೇಳಿದ್ರೆ ಅವರೇ ಆರೋಪಿ: ಮಹೇಶ್ ಶೆಟ್ಟಿ ತಿಮರೋಡಿ

ಸಂತೋಷ್ ರಾವ್ ದೋಷಮುಕ್ತ ತೀರ್ಪು:
ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದ್ದು, ಆರೋಪಿ ಸಂತೋಷ್‌ ರಾವ್‌ರನ್ನು ಖುಲಾಸೆ ಮಾಡಿದೆ. ಅವರ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಾಧಾರಗಳಲ್ಲಿ ಕೊರತೆ ಇದೆ ಎನ್ನುವ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತ ಮಾಡಿರುವುದಾಗಿ ನ್ಯಾಯಮೂರ್ತಿ ಸಿಬಿ ಸಂತೋಷ್‌ ತಿಳಿಸಿದ್ದಾರೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ವಿದ್ಯಾರ್ಥಿನಿ ಆಗಿದ್ದ ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳ ಬಳಿಕ ತೀರ್ಪು ನೀಡಿದೆ.

ಘಟನೆ ಹಿನ್ನೆಲೆ:  ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್‌ 10 ರಂದು ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ‌ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ.

ಸೌಜನ್ಯ ರೇಪ್‌ & ಮರ್ಡರ್: ಸಂತೋಷ್‌ ರಾವ್‌ ನಿರ್ದೋಷಿ, ಸಿಬಿಐ ಕೋರ್ಟ್‌ ತೀರ್ಪು

ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ ನಿಗೂಢ ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಂತಾಗಿದೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲು ಮಾಡಿತ್ತು. 

Follow Us:
Download App:
  • android
  • ios