Asianet Suvarna News Asianet Suvarna News

ಶತ್ರುವಿನ ಗುಂಡಿಗೆ ಅಲ್ಲ, ರಸ್ತೆ ಗುಂಡಿಗೆ ಬಲಿಯಾದ ಯೋಧ!

ರಾಜ್ಯದಲ್ಲಿ ಬೆಂಗಳೂರು ಬಳಿಕ ಮಂಡ್ಯಕ್ಕೂ ರಸ್ತೆ ಗುಂಡಿಗೆ ಕಂಟಕ ಕಾಲಿಟ್ಟಿದೆ. ಇಷ್ಟು ದಿನ ವಾಹನ ಸವಾರರನ್ನು ಗಾಯಾಳುಗಳನ್ನಾಗಿ ಮಾಡುತ್ತಿದ್ದ ಯಮರೂಪದ ಗುಂಡಿಗಳು ಕಡೆಗೂ ಕಾರೀಮನೆ ಗೇಟ್ ಬಳಿ ನಿವೃತ್ತ ಯೋಧನನ್ನು ಬಲಿ ಪಡೆದುಕೊಂಡಿವೆ.

Soldier died road Pothole not an enemy bullet Sat
Author
First Published Nov 14, 2022, 11:02 AM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ (ನ.14) : ರಾಜ್ಯದಲ್ಲಿ ಬೆಂಗಳೂರು ಬಳಿಕ ಮಂಡ್ಯಕ್ಕೂ ರಸ್ತೆ ಗುಂಡಿಗೆ ಕಂಟಕ ಕಾಲಿಟ್ಟಿದೆ. ಇಷ್ಟು ದಿನ ವಾಹನ ಸವಾರರನ್ನು ಗಾಯಾಳುಗಳನ್ನಾಗಿ ಮಾಡುತ್ತಿದ್ದ ಯಮರೂಪದ ಗುಂಡಿಗಳು ಕಡೆಗೂ ಒಂದು ಬಲಿ ತೆಗೆದುಕೊಂಡಿದೆ. ಮಂಡ್ಯ ನಗರದ ಕಾರೀಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿವೃತ್ತ ಯೋಧ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಘಟನೆ ಬೆನ್ನಲ್ಲೇ ಜನಾಕ್ರೋಶ ಹೆಚ್ಚಾಗಿದ್ದು, ಗುಂಡಿ ಮುಚ್ಚಿಸದ ಬೇಜವಬ್ದಾರಿ ಜನಪ್ರತಿಗಳು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾತನೂರು ಗ್ರಾಮದ ನಿವೃತ್ತ ಯೋಧ (Soldier)ಎನ್‌.ಎಸ್. ಕುಮಾರ್ (39) ರಸ್ತೆ ಗುಂಡಿಗೆ ಬಲಿಯಾದವರು. ಭಾನುವಾರ  ಮಧ್ಯಾಹ್ನ ತಂದೆಯ ಜೊತೆ ಕುಮಾರ್ (Kumar) ಬೈಕ್‌ನಲ್ಲಿ ತೆರಳುತ್ತಿದ್ದರು. ಕಾರೆಮನೆ ಗೇಟ್ (Karimane Gate) ಬಳಿ ಹೋಗುತ್ತಿದ್ದಾಗ ರಸ್ತೆಯಲ್ಲಿದ್ದ ದೊಡ್ಡ ಗುಂಡಿ (pothole) ತಪ್ಪಿಸಲು ಬೈಕನ್ನ ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಢಿಕ್ಕಿ (Accident) ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ಆದರೆ, ಹಿಂಬದಿಯಿಂದ ಬರುತ್ತಿದ್ದ ಲಾರಿ (Truck) ಕುಮಾರ್ ಅವರ ತಲೆ ಮೇಲೆ ಹರಿದಿದೆ. ತಲೆಗೆ ಹೆಲ್ಮೆಟ್‌ ಧರಿಸಿದ್ದರೂ ಲಾರಿ ಹರಿದ ಪರಿಣಾಮ ತಲೆ ಛಿದ್ರವಾಗಿ ಮೆದುಳು ಹೊರಬಂದಿದೆ. ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಕುಮಾರ್ ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.

ಹಾಸನದಲ್ಲಿ ಎರಡನೇ ಮದುವೆ ರಾದ್ದಾಂತ, ಆತ್ಮಹತ್ಯೆಗೂ ಮುನ್ನ ಫೋಟೋ ಆಡಿಯೋ ಕಳಿಸಿದ್ದ ಯೋಧ

ನಿವೃತ್ತಿ ನಂತರ ಪೊಲೀಸ್‌ ಆಗಿ ಸೇವೆ:
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃದ್ಧಿ ಹೊಂದಿ ಮಂಡ್ಯಕ್ಕೆ ಆಗಮಿಸಿದ್ದ ಕುಮಾರ್‍‌ ಅವರನ್ನು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು. ಇತ್ತೀಚೆಗೆ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ (PSI Exam) ಬರೆದು ಉತ್ತೀರ್ಣರಾಗಿದ್ದರು. ಆದರೆ ಪಿಎಸ್‌ಐ ಪರೀಕ್ಷೆ ವಿವಾದವಾದ ಹಿನ್ನೆಲೆ ಮತ್ತೆ ಪರೀಕ್ಷೆ ಬರದು ಕಾನ್ಸ್‌‌ಸ್ಟೇಬಲ್ (Constable) ಆಗಿ ಆಯ್ಕೆಯಾಗಿದ್ದರು. ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದ ಅವರು ನಿನ್ನೆ ಸ್ವಗ್ರಾಮ ಸಾತನೂರಿಗೆ (Sathanuru)ಬಂದಿದ್ದರು. ಕಾರ್ಯ ನಿಮಿತ್ತ ತಂದೆಯೊಂದಿಗೆ ಬೈಕ್‌ನಲ್ಲಿ ತೆರಳುವಾಗ ದುರ್ಘಟನೆ ಸಂಭವಿಸಿದೆ.

ಗುಂಡಿಮಯವಾದ ಮಂಡ್ಯದ ರಸ್ತೆಗಳು
ಮಂಡ್ಯ ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿದೆ. ಹೊಸಹಳ್ಳಿ- ಕಾರಸವಾಡಿ (Hosahalli-Karasawadi) ರಸ್ತೆ, ಗುತ್ತಲು, ಕಾರೆಮನೆ ಗೇಟ್ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಂದಕಗಳೇ (Trenches) ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಉಸಿರುಗಟ್ಟಿಸುವ ಧೂಳು, ಆಳವಾದ ಗುಂಡಿಗಳು ಜನರನ್ನು ಹೈರಾಣಾಗಿಸುತ್ತಿದೆ. ರಸ್ತೆ ಗುಂಡಿಗೆ (Road Potholes) ಬಿದ್ದು ಗಾಯಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ರಸ್ತೆ ಗುಂಡಿ ಒಂದು ಬಲಿ ಕೂಡ ಪಡೆದಿದ್ದು, ಗುಂಡಿ ದುರಸ್ತಿ ಮಾಡಲು ಇನ್ನೆಷ್ಟು ಬಲಿಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.

ಮಂಡ್ಯದಿಂದ ಕಳುವಾಗಿದ್ದ ಬಾಲಾಜಿ ವಿಗ್ರಹ ತಮಿಳ್ನಾಡಲ್ಲಿ ವಶ

ಸ್ಥಳೀಯರ ನಿರಂತರ ಪ್ರತಿಭಟನೆ: 
ಕಳೆದ ಮೂರು ತಿಂಗಳ ಹಿಂದೆಯೂ ನಗರದಲ್ಲಿ ಉಂಟಾಗಿದ್ದ ರಸ್ತೆ ಗುಂಡಿಗಳಿಂದ ಜನರು ಬಿದ್ದು ಗಾಯಗೊಳ್ಳುತ್ತಿದ್ದರು. ಈ ಕುರಿತು ನಗರಸಭೆ (Nagarasabhe) ಕಾರ್ಯಾಲಯದ ಮುಂದೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಸೇರಿಕೊಂಡು ತೀವ್ರ ಪ್ರತಿಭಟನೆ (Protest) ಮಾಡಿದ್ದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರಿದ್ಧ ಆಕ್ರೋಶ ವ್ಯಕ್ತಪಡಿಸಿ ರಾಜೀನಾಮೆಗೆ ಒತ್ತಾಯಿಸಿದ್ದರು. ಮುಂದುವರೆದು ಜಿಲ್ಲಾಧಿಕಾರಿ ಕಚೇರಿಗೂ ತೆರಳಿದ್ದ ಪ್ರತಿಭಟನಾಕಾರರು ಈ ಬಗ್ಗೆ ಕ್ರಮವಹಿಸುವಂತೆ ಒತ್ತಾಯ ಮಾಡಿದ್ದರು. ಈ ವೇಳೆ ನಗರಸಭೆ ಕಾರ್ಯಾಲಯದ ಎದುರಿನ ರಸ್ತೆ ಮತ್ತು ಅಕ್ಕಪಕ್ಕದ ಕೆಲ ರಸ್ತೆಗಳನ್ನು ಮಾತ್ರ ಮುಚ್ಚಲಾಗಿತ್ತು. ಇತರೆ ಭಾಗಗಳಲ್ಲಿದ್ದ ಗುಂಡಿಗಳಿಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Follow Us:
Download App:
  • android
  • ios