ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು ದಾಖಲು
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು! ಹೆಗಡೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತೆ!
ಬೆಂಗಳೂರು, [ಫೆ.01]: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ರಾಜಕೀಯವಾಗಿ ಟೀಕಿಸುವ ವೇಳೆ ಅವರ ಪತ್ನಿ ಟಬೂ ಗುಂಡೂರಾವ್ ಅವರ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ವಕೀಲರೂ ಹಾಗೂ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಭವ್ಯ ಅನು ಎಚ್.ವಿ ಎಂಬವರು ಇಂದು [ಶುಕ್ರವಾರ] ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
‘ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು'
“ಹಿಂದು ಹೆಣ್ಣುಮಕ್ಕಳನ್ನು ಮುಟ್ಟುವ ಕೈಗಳನ್ನು ಕಡಿಯಬೇಕು,” ಎಂಬ ಅನಂತ್ಕುಮಾರ್ ಅವರ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿ ಟೀಕಿಸಿದ್ದರು. ”
ಮಂತ್ರಿಯಾದ ಮೇಲೆ ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ” ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಗಡೆ ಅವರು, ” ಮುಸ್ಲಿಂ ಮಹಿಳೆಯ ಹಿಂದೆ ಓಡಿದವ” ಎಂದು ದಿನೇಶ್ ಗುಂಡೂರಾವ್ ಅವರಿಗೆ ಟಾಂಗ್ ಕೊಟ್ಟಿದ್ದರು.
ಈ ರಾಜಕೀಯ ಕೆಸರೆರಚಾಟದಲ್ಲಿ ವಿನಾಕಾರಣ ಮಹಿಳೆಯೊಬ್ಬರನ್ನು ಮತ್ತು ಅವರ ಧರ್ಮವನ್ನು ಎಳೆದುತಂದ ಕಾರಣಕ್ಕೆ ಹೆಗಡೆ ವಿರುದ್ಧ ದೂರು ದಾಖಲಿಸಿದ್ದಾರೆ.