‘ನನಗೆ ಕೊಟ್ಟಿರುವ ರೂಮ್‌ನಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಶೌಚಾಲಯ ಸ್ವಚ್ಛವಾಗಿಲ್ಲ. ಹಿಂಸೆ ಆಗುತ್ತಿದೆ’ ಎಂದು ನ್ಯಾಯಾಲಯದ ಮುಂದೆ ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಲವತ್ತುಕೊಂಡರು.

ಬೆಂಗಳೂರು (ಜೂ.1): ‘ನನಗೆ ಕೊಟ್ಟಿರುವ ರೂಮ್‌ನಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಶೌಚಾಲಯ ಸ್ವಚ್ಛವಾಗಿಲ್ಲ. ಹಿಂಸೆ ಆಗುತ್ತಿದೆ’ ಎಂದು ನ್ಯಾಯಾಲಯದ ಮುಂದೆ ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಲವತ್ತುಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತ್ಯಾಚಾರ ಪ್ರಕರಣದಲ್ಲಿ ಬಂಧನ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಪ್ರಜ್ವಲ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಆಗ ನ್ಯಾಯಾಧೀಶರು, ನಿಮಗೆ ಎಸ್‌ಐಟಿ ಅಧಿಕಾರಿಗಳು ಏನಾದರೂ ಹಿಂಸೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು. ಆ ವೇಳೆ ತಮ್ಮ ಸಮಸ್ಯೆಗಳನ್ನು ನ್ಯಾಯಾಲಯದ ಮುಂದೆ ಪ್ರಜ್ವಲ್ ಆರುಹಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಗೆ ಹಿಂಸೆ ನೀಡದಂತೆ ಎಸ್‌ಐಟಿ ಅಧಿಕಾರಿಗಳಿಗೆ ಸೂಚಿಸಿದರು.

35 ದಿನಗಳ ಬಳಿಕ ಬೆಂಗಳೂರಿನತ್ತ ಪ್ರಜ್ವಲ್ ರೇವಣ್ಣ..ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆದ ಎಸ್‌ಐಟಿ!

ನನ್ನನ್ನು ಏರ್‌ಪೋರ್ಟ್‌ನಲ್ಲಿ ರಾತ್ರಿ 12.40ರಲ್ಲಿ ಅರೆಸ್ಟ್ ಮಾಡಿದರು. ಬಳಿಕ ಸಿಐಡಿ ಕಚೇರಿಯಲ್ಲಿ ನನಗೆ ಕೊಟ್ಟಿರುವ ರೂಂ ಸರಿಯಿಲ್ಲ. ಕೆಟ್ಟ ವಾಸನೆ ಬರುತ್ತದೆ. ಶೌಚಾಲಯ ಸ್ವಚ್ಛವಾಗಿಲ್ಲ. ಅಲ್ಲಿ ಇರೋದಕ್ಕೆ ನನಗೆ ಆಗ್ತಾ ಇಲ್ಲ. ನನಗೆ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರಜ್ವಲ್‌ ಗೋಳು ತೋಡಿಕೊಂಡರು.

ನನ್ನನ್ನು ಕ್ರಿಮಿನಲ್ ರೀತಿ ಮಾಧ್ಯಮಗಳು ಬಿಂಬಿಸಿವೆ:

ಪ್ರತಿ ದಿನ ನನ್ನನ್ನು ಮಾಧ್ಯಮಗಳು ಕ್ರಿಮಿನಲ್‌ ರೀತಿ ಬಿಂಬಿಸುತ್ತಿವೆ. ಹೀಗಾಗಿ ಮೀಡಿಯಾ ಟ್ರಯಲ್‌ ನಿರ್ಬಂಧಿಸುವಂತೆ ಪ್ರಜ್ವಲ್‌ ಮನವಿ ಮಾಡಿದರು. ಈ ಕೋರಿಕೆಗೆ ಸ್ಪಂದಿಸಿದ ನ್ಯಾಯಾಲಯವು, ಈ ಬಗ್ಗೆ ನಿಮ್ಮ ವಕೀಲರು ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಸೂಚಿಸಿತು.

ಪ್ರಜ್ವಲ್ ರೇವಣ್ಣ ಬಂಧನ ಆಯ್ತು, ಮುಂದೇನು? ಸ್ಟೆಪ್‌-ಬೈ-ಸ್ಟೆಪ್‌ ಮಾಹಿತಿ ಇಲ್ಲಿದೆ!

ಕಟಕಟೆಯಲ್ಲಿ ತಲೆ ತಗ್ಗಿಸಿ, ಕಳಾಹೀನರಾದ ಪ್ರಜ್ವಲ್

ಅತ್ಯಾಚಾರ ಪ್ರಕರಣದ ಆರೋಪಿಯಾಗಿ ನ್ಯಾಯಾಲಯಕ್ಕೆ ಬಂದ ಸಂಸದ ಪ್ರಜ್ವಲ್‌, ನ್ಯಾಯಾಧೀಶರ ಮುಂದೆ ಕಟಕಟೆಯಲ್ಲಿ ತಲೆ ಬಗ್ಗಿಸಿ ನಿಂತಿದ್ದರು. ತಮ್ಮ ವಿರುದ್ಧ ಎಸ್‌ಪಿಪಿ ತೀವ್ರವಾಗಿ ವಾದ ಮಂಡನೆ ವೇಳೆ ಅವರ ಮುಖ ಕಳಾಹೀನವಾಗಿತ್ತು.

ಲೋಕಸಭೆ ಫಲಿತಾಂಶ ನೋಡಲು ಅವಕಾಶ ಕೊಡಿ’

ಜೂ.4ರಂದು ಲೋಕಸಭಾ ಚುನಾವಣಾ ಫಲಿತಾಂಶವನ್ನು ವೀಕ್ಷಿಸಲು ತಮಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಪ್ರಜ್ವಲ್ ಕೋರಿದರು. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ನ್ಯಾಯಾಲಯ ಸೂಚಿಸಿತು.