‘ಆಪರೇಷನ್‌ ಸಿಂದೂರ’ ಕಾರ್ಯಾಚರಣೆ ಮೂಲಕ ಭಾರತ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ಇದೇ ರೀತಿ ಅಡಗಿರುವ ಇನ್ನಷ್ಟು ಉಗ್ರರನ್ನು ಹೊಡೆಯಬೇಕು ಎಂದು ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಮತ್ತಿಕೆರೆಯ ಭರತ್‌ ಭೂಷಣ್‌ ಅವರ ತಂದೆ ಚನ್ನವೀರಪ್ಪ ಹೇಳಿದರು. 

ಬೆಂಗಳೂರು (ಮೇ.08): ‘ಆಪರೇಷನ್‌ ಸಿಂದೂರ’ ಕಾರ್ಯಾಚರಣೆ ಮೂಲಕ ಭಾರತ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ಇದೇ ರೀತಿ ಅಡಗಿರುವ ಇನ್ನಷ್ಟು ಉಗ್ರರನ್ನು ಹೊಡೆಯಬೇಕು ಎಂದು ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಮತ್ತಿಕೆರೆಯ ಭರತ್‌ ಭೂಷಣ್‌ ಅವರ ತಂದೆ ಚನ್ನವೀರಪ್ಪ ಹೇಳಿದರು. ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಳ್ಳೆಯ ಕ್ರಮ ತೆಗೆದುಕೊಂಡಿದೆ. ಉಗ್ರರನ್ನು ಬೇಟೆಯಾಡುವ ಕಾರ್ಯಾಚರಣೆಗೆ ಇಟ್ಟ ಆಪರೇಷನ್ ಸಿಂದೂರ ಎನ್ನುವ ಹೆಸರು ಕೂಡ ತುಂಬಾ ಸೂಕ್ತವಾಗಿದೆ. 

Add Asianetnews Kannada as a Preferred SourcegooglePreferred

ಅಡಗಿದ್ದ ಹಲವು ಭಯೋತ್ಪಾದಕರನ್ನು ಹೊಡೆದಿದ್ದಾರೆ. ಇನ್ನೂ ಉಳಿದುಕೊಂಡಿರುವವರನ್ನೂ ಹೊಡೆಯಬೇಕು. ಈ ಕೆಲಸ ಮುಂಚೆಯೇ ಆಗಿದ್ದರೆ 26 ಮಂದಿ ಜೀವ ಉಳಿಯುತ್ತಿತ್ತು ಎಂದರು. ಭರತ್‌ ಭೂಷಣ್‌ ಅವರ ಸಹೋದರ ಪ್ರೀತಂ ಮಾತನಾಡಿ, ‘ನನ್ನ ತಮ್ಮ ಭರತ್‌ ಭೂಷಣ್‌ ಅಂತೂ ವಾಪಸ್ ಬರುವುದಿಲ್ಲ. ಮುಂದಿನ ಹಂತಗಳಲ್ಲಾದರೂ ಭಾರತ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಭರವಸೆ ಇದೆ. ಭರತ್‌ನ ಮೂರುವರೆ ವರ್ಷದ ಮಗ ಹವೀಶ್‌ಗೆ ಇದರ ಬಗ್ಗೆ ಪರಿವೆಯೇ ಇಲ್ಲ. ಅಪ್ಪ ಯಾವಾಗ ಬರುತ್ತಾರೆ ಎಂದು ಪ್ರಶ್ನಿಸುತ್ತಾನೆ’ ಎಂದು ಭಾವುಕರಾದರು.

ಮಾಜಿ ಸೈನಿಕರಿಗೆ ತಿಲಕವಿಟ್ಟು ಸಂಭ್ರಮಾಚರಣೆ: ಆಪರೇಶನ್‌ ಸಿಂದೂರ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ತ್ರಿವರ್ಣ ಧ್ವಜ, ವಿವಿಧ ಬ್ಯಾನರ್ ಹಿಡಿದು, ಕೇಂದ್ರ ಸರ್ಕಾರ ಮತ್ತು ಸೈನಿಕರ ಪರವಾಗಿ ಘೋಷಣೆ ಕೂಗಿದರು. ಮೂವರು ಮಾಜಿ ಸೈನಿಕರಿಗೆ ಸಿಂದೂರ ಹಚ್ಚುವ ಮೂಲಕ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಖುಷಿ ವ್ಯಕ್ತಪಡಿಸಿದರು.

ಉಗ್ರನ ಮುಂದೆ ಅಂಗಲಾಚಿದೆ, ಭೂಷಣ್‌ ತಲೆಗೆ ಗುಂಡು ಹಾರಿಸಿ ಹೋಗಿಬಿಟ್ಟ: ಸುಜಾತಾ ಕಣ್ಣೀರು

ಈ ವೇಳೆ ಮಾತನಾಡಿದ ಮುತಾಲಿಕ್, ನರೇಂದ್ರ ಮೋದಿ ನೇತೃತ್ವದಲ್ಲಿ ಆಪರೇಶನ್‌ ಸಿಂದೂರ ಮೂಲಕ ಯುದ್ಧ ಪ್ರಾರಂಭ ಮಾಡಿದ್ದಾರೆ. ರಾತ್ರಿ ವೇಳೆ ಪಾಕಿಸ್ತಾನ ಜನ, ಸೈನಿಕರು ಮಲಗಿದ ವೇಳೆ ಸೈನ್ಯ ಸರಿಯಾಗಿ ಉತ್ತರ ಕೊಟ್ಟಿದೆ. ಇತ್ತೀಚಿಗೆ 26 ಮಹಿಳೆಯರ ಸಿಂಧೂರ ಅಳಿಸಿದ್ದರು. ಅದಕ್ಕಿಂತ ಮೊದಲು ಅಂದರೆ ಕಳೆದ 3-4 ದಶಕಗಳಿಂದ ಲಕ್ಷಾಂತರ ಮಹಿಳೆಯರು ಸಿಂದೂರ ಅಳಿಸಿದ್ದಾರೆ. ಇವರೆಲ್ಲರ ಪ್ರತಿಕಾರವೆಂಬಂತೆ ಪ್ರಧಾನಿ ಮೋದಿ ಅವರು ಆಪರೇಷನ್‌ ಸಿಂದೂರ್ ಮೂಲಕ ಉತ್ತರ ನೀಡಿದ್ದಾರೆ. ಇಷ್ಟಕ್ಕೆ ನಿಲ್ಲಿಸದೇ ಐಎಸ್ಐ, ಪಾಕಿಸ್ತಾನದ ಸೈನಿಕರ ಕೇಂದ್ರ ಮತ್ತು ಆಯುಧ ಹೊಂದಿದ ಕೇಂದ್ರಗಳನ್ನು ಧ್ವಂಸಗೊಳಿಸಲು ಆಗ್ರಹಿಸಿದರು.