Asianet Suvarna News Asianet Suvarna News

ನಾಗರ ಪಂಚಮಿ ಸಂಭ್ರಮಕ್ಕೆ ಅಡ್ಡಿಯಾದ ಮಹಾಮಾರಿ ಕೊರೋನಾ

ಕೋವಿಡ್‌-19 ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ ಜನತೆ| ಕೊರೋನಾ ಕಂಟಕದ ಮಧ್ಯೆಯೂ ಶುಕ್ರವಾರ ಕೆಲವರು ಆಚರಿಸಿದ್ದು, ಇಂದು ಹೆಚ್ಚಿನ ಮಂದಿ ಹಬ್ಬ ಮಾಡಲಿದ್ದಾರೆ| ನಗರದ ನಾನಾ ಬಡಾವಣೆಗಳಲ್ಲಿರುವ ಸುಬ್ರಹ್ಮಣ್ಯ ಮತ್ತು ನಾಗ ದೇವರ ದೇವಾಲಯಗಳು, ಅಶ್ವತ್ಥಕಟ್ಟೆಗಳು ಅಲಂಕೃತಗೊಂಡಿವೆ|

Simply Celebrating the Nagara Panchami Festival in Bengaluru
Author
Bengaluru, First Published Jul 25, 2020, 8:38 AM IST

ಬೆಂಗಳೂರು(ಜು.25):  ಕೊರೋನಾ ಸೋಂಕು ಭೀತಿಯ ನಡುವೆಯೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಆಚರಣೆಗೆ ಸಿದ್ಧತೆ ನಡೆದಿದೆ. ಕೆಲವರು ಶುಕ್ರವಾರವೇ ನಾಗರ ಪಂಚಮಿ ಮಾಡಿದರೆ, ಬಹುತೇಕರು ಇಂದು(ಶನಿವಾರ) ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಲು ಸಜ್ಜಾಗಿದ್ದಾರೆ.

ನಾಗರ ಪಂಚಮಿಯಂದು ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ದವು. ಭಕ್ತರು ಸುಬ್ರಹ್ಮಣ್ಯ, ಶಿವ, ವಿಷ್ಣು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಅಲ್ಲದೆ ನಾಗರ ಕಲ್ಲುಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದರು. ಆದರೆ, ಈ ಬಾರಿ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಕೊರೋನಾ ಕಂಟಕದ ಮಧ್ಯೆಯೂ ಶುಕ್ರವಾರ ಕೆಲವರು ಆಚರಿಸಿದ್ದು, ಶನಿವಾರ ಹೆಚ್ಚಿನ ಮಂದಿ ಹಬ್ಬ ಮಾಡಲಿದ್ದಾರೆ. ನಗರದ ನಾನಾ ಬಡಾವಣೆಗಳಲ್ಲಿರುವ ಸುಬ್ರಹ್ಮಣ್ಯ ಮತ್ತು ನಾಗ ದೇವರ ದೇವಾಲಯಗಳು, ಅಶ್ವತ್ಥಕಟ್ಟೆಗಳು ಅಲಂಕೃತಗೊಂಡಿವೆ. ಸೋಂಕಿನ ಹಿನ್ನೆಲೆ ಜನ ಒಟ್ಟಾಗಿ ಸೇರಲು ಅವಕಾಶವಿಲ್ಲದೆ ಇರುವುದರಿಂದ ಸಾಮಾಜಿಕ ಅಂತರ ಕಾಯ್ದು ಕೊಂಡು ಪೂಜೆ ಸಲ್ಲಿಸಬೇಕಾಗಿದೆ.

ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ

ದೇವಾಲಯಗಳಿಗೆ ಸರ್ಕಾರ ಈ ಹಿಂದೆ ಆದೇಶಿಸಿರುವಂತೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೇರೆ ಯಾವುದೇ ಸೇವೆಗಳು ಇರುವುದಿಲ್ಲ ಎಂದು ದೇವಾಲಯಗಳ ಆಡಳಿತ ಮಂಡಳಿಗಳು ತಿಳಿಸಿವೆ.

ಹೂವಿಗೆ ಬೇಡಿಕೆ ಕಡಿಮೆ

ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಭಾಗಗಳಿಗೆ ನಗರದ ಕೆ.ಆರ್‌. ಮಾರುಕಟ್ಟೆಯಿಂದ ಸಾಕಷ್ಟುಪ್ರಮಾಣದಲ್ಲಿ ಹೂವು ಸರಬರಾಜಾಗುತ್ತಿತ್ತು. ಈ ವರ್ಷ ಕೊರೋನಾದಿಂದ ಅಲ್ಲಿಗೆ ಹೂವು ಹೋಗುತ್ತಿಲ್ಲ. ಸ್ಥಳೀಯವಾಗಿಯೂ ಜನರಲ್ಲಿ ಹಬ್ಬದ ಸಂಭ್ರಮ ಹೆಚ್ಚಾಗಿ ಇಲ್ಲದಿರುವುದರಿಂದ ಬೇಡಿಕೆಯೂ ಕಡಿಮೆಯಾಗಿದ್ದು, ಬೆಲೆಯೂ ಇಲ್ಲ ಎಂದು ಕೆ.ಆರ್‌. ಮಾರುಕಟ್ಟೆಯ ವರ್ತಕರೊಬ್ಬರು ಹೇಳಿದರು.

ಪ್ರತಿ ವರ್ಷ ಹಬ್ಬದ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಹೂವಿನ ವ್ಯಾಪಾರ ಜೋರಾಗಿರುತ್ತಿತ್ತು. ಈ ಬಾರಿ ಹೂವಿನ ಮಾರಾಟಕ್ಕೆ ಹೆಸರಾದ ಪ್ರಮುಖ ಕೆ.ಆರ್‌. ಮಾರುಕಟ್ಟೆಯನ್ನು ಕೊರೋನಾ ಸೋಂಕಿನ ಕಾರಣಗಳಿಂದ ಬಂದ್‌ ಮಾಡಲಾಗಿದೆ. ಹೀಗಾಗಿ ಸಗಟು ಹೂವಿನ ವರ್ತಕರು ನಗರದ ಅಲ್ಲಲ್ಲಿ ಹೂವು ಮಾರಾಟ ಮಳಿಗೆಗಳನ್ನು ತೆರೆದು ಮಾರಾಟ ಮಾಡುತ್ತಿದ್ದಾರೆ. ಈ ಬಾರಿ ಉತ್ತಮ ಮಳೆ, ಬೆಳೆ ಆಗಿರುವುದರಿಂದ ಸಾಕಷ್ಟುಪ್ರಮಾಣದಲ್ಲಿ ಹೂವು ಸರಬರಾಜಾಗುತ್ತಿದೆ. ಬೇಡಿಕೆ ಇಲ್ಲದೆ ಹೂವಿನ ಬೆಲೆಯಲ್ಲೂ ಏರಿಕೆಯಾಗಿಲ್ಲ. ನಗರಕ್ಕೆ ತಮಿಳುನಾಡು ಮತ್ತಿತರ ಪ್ರದೇಶಗಳಿಂದ ಮಲ್ಲಿಗೆ ಮೊಗ್ಗು, ಮಳ್ಳೆ ಮೊಗ್ಗು ಬರುತ್ತಿದೆ. ಉಳಿದಂತೆ ಕೋಲಾರ, ಚಿಕ್ಕಬಳ್ಳಾಪುರ ವಿವಿಧೆಡೆಯಿಂದ ಸೇವಂತಿ, ಕನಕಾಂಬರ, ಗುಲಾಬಿ ಹೂವು ಪೂರೈಕೆಯಾಗುತ್ತಿದೆ. ಆದರೆ, ಈ ಹಿಂದಿನಂತೆ ಹೂವಿಗೆ ಬೇಡಿಕೆ ಇಲ್ಲದಿರುವುದರಿಂದ ಹೂವಿನ ಬೆಲೆಯಲ್ಲೂ ಏರಿಕೆ ಇಲ್ಲ.

ಸಗಟು ಹೂವಿನ ದರ (ಕೆ.ಜಿ.ಗಳಲ್ಲಿ)

ಮಲ್ಲಿಗೆ 200-300 ರು.
ಮಳ್ಳೆ ಹೂವು 200-250 ರು.
ಕನಕಾಂಬರ 400-600 ರೂ.
ಸೇವಂತಿಗೆ 120-160 ರು.
ರೋಸ್‌ 120-160 ರು.

Follow Us:
Download App:
  • android
  • ios