Asianet Suvarna News Asianet Suvarna News

ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮ ಭಕ್ತರಿಗೆ ಕೊಡುವುದಿಲ್ಲ: ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ ಎಂದು ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

Siddeshwar Swamiji ashes are not given to devotees says Basavalinga Swamiji president of Jnana Yogashrama vijayapura gvd
Author
First Published Jan 4, 2023, 1:56 PM IST

ವಿಜಯಪುರ (ಜ.04): ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ ಎಂದು ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ನಿನ್ನೆ (ಮಂಗಳವಾರ) ಜ್ಞಾನಯೋಗಾಶ್ರಮದ ಆವರಣದಲ್ಲಿ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಆತ್ಯಸಂಸ್ಕಾರದ ಬಳಿಕ ಕನ್ನೇರಿ ಮಠದ ಸ್ವಾಮೀಜಿಗಳು ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಾಗಿ ಹೇಳಿದ್ದರು. ಆದ್ರೆ ಇಂದು ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಕ್ತರಿಗೆ ಚಿತಾಭಸ್ಮವನ್ನು ನೀಡುವುದಿಲ್ಲ ಎಂದಿದ್ದಾರೆ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡಲಾಗುತ್ತಿದೆ ಎಂದು ನಿನ್ನೆ (ಜ.03) ರಾತ್ರಿ ನಡೆದ ಅಂತ್ಯಕ್ರಿಯೆ ವೇಳೆ ಕನ್ಹೇರಿ ಮಠದ ಸ್ವಾಮೀಜಿಗಳು ಹೇಳಿದ್ದರು. 

ಸಿದ್ಧೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಯಾರು ನದಿ ಹಾಗೂ ಸಾಗರದಲ್ಲಿ ವಿಸರ್ಜನೆ ಮಾಡಲು ಇಚ್ಛೆ ಪಡುತ್ತಾರೋ ಅವರು ಹೆಸರು ನೋಂದಾಯಿಸಲು ಹೇಳಿದ್ದರು. ಆದರೆ ಯಾವುದೇ ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ನೀಡಲಾಗಲ್ಲ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಗಳ ಅಣತೆಯಂತೆ ನಾವು ಯಾವುದೇ ಚಿತಾಭಸ್ಮವನ್ನು ನೀಡಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿಯನ್ನು ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು. ಚಿತಾಭಸ್ಮವನ್ನು ಯಾವ ನದಿ, ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆಂಬುದರ ಕುರಿತು ಚರ್ಚೆ ಮಾಡುತ್ತೇವೆ. 

ಸಿದ್ದೇಶ್ವರ ಶ್ರೀಗಳು ಇಚ್ಛಾ ಮರಣ ಬಯಸಿದ್ದರೆ?: ಶ್ರೀಗಳನ್ನು ಕಾಡಿತ್ತಾ‘ಪ್ರಾಸ್ಟೇಟ್‌’ಬಾಧೆ

ಆಶ್ರಮದಲ್ಲಿರುವ ನಾವೆಲ್ಲ ಸ್ವಾಮೀಜಿಗಳು ಸೇರಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಈ ಕುರಿತು ಕನ್ಹೇರಿ ಮಠದ ಶ್ರೀಗಳು ಹಾಗೂ ಸುತ್ತೂರು ಮಠದ ಶ್ರೀಗಳು ಸೇರಿದಂತೆ ಇತರ ಸ್ವಾಮೀಜಿಗಳ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಸಭೆಯ ಬಳಿಕ ಚಿತಾಭಸ್ಮ ವಿಸರ್ಜನೆಯ ಕುರಿತು ನಿರ್ಧಾರ ಮಾಡುತ್ತೇವೆ. ಮೂರು ದಿನಗಳ ನಂತರ ಅಂದರೆ ನಾಳೆ ಸರಳ ವಿಧಿ ವಿಧಾನಗಳ ಆಚರಣೆಯ ಮೂಲಕ ಚಿತಾಭಸ್ಮ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಜ್ಞಾನಯೋಗಾಶ್ರಮದಲ್ಲಿ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಸೂಸೂತ್ರ ಅಂತ್ಯಕ್ರಿಯೆ: ವಿವಿಧ ಮಠಾಧೀಶರು, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಕೈಗೊಂಡ ಅಚ್ಚುಕಟ್ಟುತನದ ಕ್ರಮದಿಂದಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಯಾವುದೇ ಲೋಪವಿಲ್ಲದೆ ಸುಸೂತ್ರವಾಗಿ ಮಂಗಳವಾರ ನೆರವೇರಿತು. ಲಕ್ಷಾಂತರ ಜನರನ್ನು ನಿಭಾಯಿಸಿದ ಪೊಲೀಸರು ಮತ್ತು ಜಿಲ್ಲಾಡಳಿತದ ಈ ಕಾರ್ಯವೈಖರಿ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಮವಾರ ಸಂಜೆ 6.05ಕ್ಕೆ ಸಿದ್ದೇಶ್ವರ ಶ್ರೀಗಳು ಕೊನೆಯುಸಿರೆಳೆದ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು, ಸುತ್ತೂರು ಶ್ರೀಗಳು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತಿತರ ಗಣ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಅಂತಿಮ ದರ್ಶನ, ಅಂತಿಮ ಯಾತ್ರೆ ವೇಳೆ ಸಣ್ಣ ಲೋಪವೂ ಆಗದಂತೆ ಮುತುವರ್ಜಿ ವಹಿಸಿದರು. 

ಪಠ್ಯದಲ್ಲಿ ಸಿದ್ದೇಶ್ವರ ಶ್ರೀಗಳ ಜೀವನಗಾಥೆ?: ವಿವೇಕಾನಂದರ ನಂತ್ರ ಹೆಚ್ಚು ಪ್ರಭಾವಿಸಿದವರು ಶ್ರೀಗಳು

ನಸುಕಿನಲ್ಲೇ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರವನ್ನು ಅತ್ಯಂತ ಕಾಳಜಿಯಿಂದ ಸೈನಿಕ ಸ್ಕೂಲ್‌ಗೆ ಸಾಗಿಸಲಾಯಿತು. ಬೆಳಗ್ಗೆ 6 ಗಂಟೆಗೆ ಸೈನಿಕ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರ ಇಡಲಾಯಿತು. ಕ್ಷಣ ಕ್ಷಣಕ್ಕೂ ಭಕ್ತ ಸಾಗರ ಸೈನಿಕ ಶಾಲೆಯತ್ತ ಹರಿದು ಬರುತ್ತಿರುವುದನ್ನು ಕಂಡು ಪರಿಸ್ಥಿತಿ ಕೈಮೀರು ಆತಂಕವೂ ಇತ್ತು. ಇಂಥ ಸಂದರ್ಭದಲ್ಲಿ ಜಿಲ್ಲಾಡಳಿತ ಅತ್ಯಂತ ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಲ್ಲಾ ಜವಾಬ್ದಾರಿ ನಿಭಾಯಿಸಿತು. ಸ್ವತಃ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ವಿಶೇಷ ಕಾಳಜಿ ವಹಿಸಿ ಪಾದರಸದಂತೆ ಓಡಾಡಿ ಸಕಲ ಸಿದ್ಧತೆಗಳಿಗೆ ಹೆಗಲುಕೊಟ್ಟರು.

Follow Us:
Download App:
  • android
  • ios