ವೈರಲ್ ವಿಡಿಯೋದಿಂದ ಪ್ರಸಿದ್ಧಿಗೆ ಬಂದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ, ಅಕ್ರಮ ಠೇವಣಿ ಆರೋಪದ ಮೇಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಅವರ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡು, ಅವರನ್ನು ಬಂಧಿಸಿದ್ದಾರೆ.

ಬೆಳಗಾವಿ (ಮೇ.16): ನಿಯಮ ಬಾಹಿರವಾಗಿ ಠೇವಣಿ ಪಡೆದ ಆರೋಪದ ಮೇಲೆ ಶಿವಂ ಅಸೋಸಿಯೇಟ್ಸ್ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಉಪವಿಭಾಗಾಧಿಕಾರಿ ನೇತೃತ್ವದ ತಂಡ 20 ಗಂಟೆಗಳ ಕಾಲ ನಿರಂತರ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಕಚೇರಿ ಮತ್ತು ಮನೆಯಲ್ಲಿ ತಪಾಸಣೆ ನಡೆಸಿದರು. ಈ ವೇಳೆ ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ.

Add Asianetnews Kannada as a Preferred SourcegooglePreferred

ಶಿವಾನಂದ ನೀಲಣ್ಣವರ ಇತ್ತೀಚೆಗೆ ವೈರಲ್ ವಿಡಿಯೋ ಮೂಲಕ ರಾಜ್ಯಮಟ್ಟದಲ್ಲಿ ಪ್ರಸಿದ್ಧಿಗೆ ಬಂದಿದ್ದರು. ದಶಕಗಳಿಂದ ಹೂಡಿಕೆ ವ್ಯವಹಾರ ನಡೆಸುತ್ತಿದ್ದರೂ ಯಾರ ಗಮನಕ್ಕೂ ಇಲ್ಲದೇ ತಮ್ಮ ಕೆಲಸ ತಾವು ಮಾಡಿಕೊಂಡಿದ್ದರು. ಆದರೆ, ಕಡೂರ ಕಾರ್ಯಕ್ರಮದಲ್ಲಿ ಆಡಿದ ಮಾತುಗಳೇ ಆವರಿಗೆ ಕಂಟಕವಾಗಿ ಪರಿಣಮಿಸಿವೆ. 

ಈ ಕಾರ್ಯಕ್ರಮದಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ಯಾರಿಗೂ ಹೆದರಲ್ಲ, ಜನರನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ ಎಂದೆಲ್ಲ ಹೇಳಿಕೊಂಡಿದ್ದರು. ಈ ಭಾಷಣದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರ, ಬೆನ್ನಲ್ಲೇ 20 ಸಾವಿರ ಜನರನ್ನು ಸೇರಿಸಿ ಮೇ.17ರಂದು ಬೆಳಗಾವಿ ನಗರದ ಸ್ವಚ್ಛತೆಗೆ ಮುಂದಾಗಿದ್ದರು. ಇದರ ಕಟೌಟ್‌ಗಳು ನಗರದಲ್ಲಿ ರಾರಾಜಿಸಲು ಆರಂಭಿಸಿದ ಬಳಿಕವೇ, ನೀಲಣ್ಣವರಗೆ ಒಂದೊಂದೆ ಕಂಟಕ ಎದುರಾದವು. 

ಗುರುವಾರ ಬೆಳಗ್ಗೆ ನಗರದಲ್ಲಿನ ಎಲ್ಲ ಕಟೌಟ್, ಬ್ಯಾನರ್‌ಗಳನ್ನು ಮಹಾನಗರ ಪಾಲಿಕೆ ತೆರವುಗೊಳಿಸಿತ್ತು. ಮಧ್ಯಾಹ್ನದ ಹೊತ್ತಿಗೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಅದು ಶುಕ್ರವಾರ ಮಧ್ಯಾಹ್ನಕ್ಕೆ ಮುಗಿದಿದೆ.ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ನೀಲಣ್ಣವರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಲ್ಲದೇ, ಗುರುವಾರ ಶಿವಂ ಅಸೋಸಿಯೇಟ್ ಕಚೇರಿ ಮೇಲೆ ಎಸಿ, ಸಹಕಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ್ದು, ಶುಕ್ರವಾರ ಕಚೇರಿ, ಮನೆ, ಅಪಾರ್ಟ್ಮೆಂಟ್‌ನ್ನು ಸೀಜ್ ಮಾಡಲಾಗಿದ್ದು, ಶಿವಾನಂದನನ್ನು ಶಿವಬಸವ ನಗರದ ಆತನ ಮನೆಯಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯಿಂದ ಬಂದು ಬದುಕು ಕಟ್ಟಿಕೊಂಡಿದ್ದ

ಹುಬ್ಬಳ್ಳಿ ಬಳಿಯಿರುವ ಉಣಕಲ್‌ ಶಿವಾನಂದ ನೀಲಣ್ಣವರ ಅವರ ಮೂಲ ಊರು. ತಂದೆ ಸೇನೆಯಲ್ಲಿದ್ದರು. ನಿವೃತ್ತಿಯಾದ ಬಳಿಕ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಿಧನರಾದರು. ಆ ನೌಕರಿ ಶಿವಾನಂದ ಸೋದರನಿಗೆ ಸಿಕ್ಕಿತ್ತು. ಬಳಿಕ, ಅವರಿಗೆ ಬೆಳಗಾವಿಗೆ ವರ್ಗವಣೆಯಾದ ಹಿನ್ನಲೆಯಲ್ಲಿ ಇಡೀ ಕುಟುಂಬ ಬೆಳಗಾವಿಗೆ ಬಂದು ನೆಲೆಸಿತ್ತು. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಶಿವಾನಂದ ನೀಲಣ್ಣವರ, ಆರಂಭದಲ್ಲಿ ರೂರಲ್ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡಿದ್ದಾರೆ. 

2004ರಿಂದ 2006ರವೆಗೆ ಆಟೋದಲ್ಲಿ ಫ್ರಿಜ್ ಇಟ್ಟುಕೊಂಡು ಐಸಕ್ರೀಮ್ ಮಾರಿದ್ದರು. ಅದಕ್ಕಾಗಿಯೇ ಐಸಕ್ರೀಮ್ ಫ್ಯಾಕ್ಟರಿ ಹಾಕಿದ್ದರು. 2012ರಲ್ಲಿ ಷೇರು ಪೇಟೆಯಲ್ಲಿ ಹೂಡಿಕೆ ಆರಂಭಿಸಿದ್ದರು. ಆದರೆ, ಅದು ಶಿವಾನಂದ ನೀಲಣ್ಣವರ ಕೈ ಹಿಡಿದಿರಲಿಲ್ಲ. ಆಗ ತಾನೇ ಯಾಕೆ ಇಂತಹ ಒಂದು ಹೂಡಿಕೆ ಸಂಸ್ಥೆ ಆರಂಭಿಸಬಾರದೆಂದು ವಿಚಾರಿಸಿ ಅಕ್ಯೂಮೆನ್ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿ ಕೊಳ್ಳಲು ಶುರು ಮಾಡಿದ್ದರು. ಈ ಆ್ಯಪ್ ಮೂಲಕ ನೂರಾರು ಕೋಟಿ ಹೂಡಿಕೆಯಾಗಿದೆ. ಇನ್ನು, ಇತ್ತೀಚೆಗೆ ಶಿವಂ ಅಸೊಸಿಯೇಟ್ಸ್ ಮೂಲಕ ಸಮಾಜಮುಖಿ ಕಾರ್ಯಗಳನ್ನು ಆರಂಭಿಸಿದ್ದರು. ಇದರಿಂದಲೇ ಅವರು ಪ್ರಸಿದ್ಧಿಗೆ ಬಂದಿದ್ದರು. ಸಾರ್ವಜನಿಕ ವೇದಿಕೆಗಳಲ್ಲಿ ಆಡುತ್ತಿದ್ದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿಯನ್ನು ಸೃಷ್ಟಿ ಮಾಡಿದ್ದವು.