ಸಕಲೇಶಪುರ ತಾಲೂಕಿನ ದೋಣಿಗಾಲ್‌ ಸಮೀಪ ಹೆದ್ದಾರಿ ಕುಸಿತ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಇನ್ನೂ 4-5 ದಿನದಲ್ಲಿ ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ​ಧಿಕಾರಿ ಆರ್‌.ಗಿರೀಶ್‌ ತಿಳಿಸಿದರು. 

ಹಾಸನ (ಜು.21): ಸಕಲೇಶಪುರ ತಾಲೂಕಿನ ದೋಣಿಗಾಲ್‌ ಸಮೀಪ ಹೆದ್ದಾರಿ ಕುಸಿತ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಇನ್ನೂ 4-5 ದಿನದಲ್ಲಿ ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾ​ಧಿಕಾರಿ ಆರ್‌.ಗಿರೀಶ್‌ ತಿಳಿಸಿದರು. ಜಿಲ್ಲಾಧಿ​ಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾಡಿ ರಸ್ತೆಯಲ್ಲಿ ಇದೀಗ ಭಾರಿ ವಾಹನ ಸಂಚಾರ ನಿಷೇ​ಧಿಸಲಾಗಿದ್ದು ಲೋಕೋಪಯೋಗಿ ಇಲಾಖೆ ಅ​ಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆದಿದೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರದ ಅಧಿ​ಕಾರಿಗಳು ಸಹ ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ದೋಣಿಗಾಲ್‌ ಹೆದ್ದಾರಿ ಕುಸಿತವನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಅ​ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಬದಲಿ ರಸ್ತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ 2.2 ಕಿಲೋಮೀಟರ್‌ ಹೊಸ ರಸ್ತೆ ಮಾಡಲು 4.3 ಕೋಟಿ ಹಣವನ್ನು ಮಂಜೂರು ಮಾಡಲಾಗಿದ್ದು, ಹೆದ್ದಾರಿ ಪ್ರಾ​ಧಿಕಾರದ ಅಧಿ​ಕಾರಿಗಳು ಸ್ಥಳ ಪರಿಶೀಲನೆ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಮುಂದಿನ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ದೋಣಿಗಾಲ್‌ ಹೆದ್ದಾರಿ ಕುಸಿತವನ್ನು ಸಂಪೂರ್ಣವಾಗಿ ದುರಸ್ತಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿ​ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 

ಆದೇಶ ಪರಿಷ್ಕರಿಸಿದ ಡಿಸಿ, ಶಿರಾಡಿಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ!

ಇದೀಗ ಈ ಮಾರ್ಗದಲ್ಲಿ ಏಕಮುಖ ಸಂಚಾರದಲ್ಲಿ ಲಘು ವಾಹನಗಳನ್ನು ಬಿಡಲಾಗುತ್ತಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಭಾರಿ ವಾಹನ ಸಂಚಾರಕ್ಕೆ ಹೆದ್ದಾರಿಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ ಎಂದರು. ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವ ಘಾಟಿ ರಸ್ತೆಯಲ್ಲಿಯೂ ಸಹ 16 ಟನ್‌ ತೂಕದ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಆದಷ್ಟುಶೀಘ್ರವಾಗಿ ಭಾರಿ ವಾಹನಗಳ ಸಂಚಾರ ಶಿರಾಡಿ ಮಾರ್ಗದಲ್ಲಿ ಸಂಚರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ​ಧಿಕಾರಿ ತಿಳಿಸಿದರು.

ಶಿರಾಡಿ ಘಾಟ್‌ನ 2.5 ಕಿ.ಮೀ. ಒನ್‌ ವೇ: ಹಾಸನ ಜಿಲ್ಲೆ ಶಿರಾಡಿ ಘಾಟ್‌ನ ದೋಣಿಗಲ್‌ ಬಳಿ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ಆಗಿರುವ ತೊಂದರೆ ಪರಿಹರಿಸಲು ತಕ್ಷಣದಿಂದ ತಾತ್ಕಾಲಿಕವಾಗಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ತಿಳಿಸಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಭೂ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಕುಸಿತದಿಂದ ವಿಶೇಷವಾಗಿ ಘಟ್ಟ ಪ್ರದೇಶಗಳಲ್ಲಿ ಆಗಿರುವ ತೊಂದರೆಗಳ ಕುರಿತು ಅಧಿಕಾರಿಗಳ ಜೊತೆ ಮಂಗಳವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಶಿರಾಡಿ, ಚಾರ್ಮಾಡಿ ಘಾಟ್‌ ಮತ್ತೆ ಭೂಕುಸಿತ: ಸಂಚಾರ ಬಂದ್‌ ಭೀತಿ

ಸದ್ಯ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಶಿರಾಡಿ ಘಾಟ್‌ನ ಪ್ರಸ್ತುತ ರಸ್ತೆ ಮೂಲಕವೇ ಹೋಗಲು ಅವಕಾಶ ನೀಡಲಾಗುವುದು. ಆದರೆ ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನಗಳಿಗೆ ಪರಾರ‍ಯಯ ಮಾರ್ಗ ಮಾಡಲಾಗುವುದು. ದೋಣಿಗಲ್‌ ಹತ್ತಿರದ ಕಪ್ಪಳ್ಳಿ-ಕೆಸಗಾನಹಳ್ಳಿ ಮಾರ್ಗವಾಗಿ ಹಳೆಯ ರಸ್ತೆಯಿದ್ದು, ಅದನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಪರ್ಯಾಯ ರಸ್ತೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾಮಗಾರಿ ನಡೆಯುತ್ತಿದೆ ಎಂದರು.