Asianet Suvarna News Asianet Suvarna News

ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ 12 ಸಾಧಕರ ಆಯ್ಕೆ: ಮಾ.17ಕ್ಕೆ ಪ್ರದಾನ

ದೇಶದ ಬೆನ್ನೆಲುಬು ಎಂದೇ ಬಣ್ಣಿಸಲಾಗುವ, ವಿಶಾಲವಾದ ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರುನಾಡಿನ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ರೈತ ರತ್ನ’ ಪ್ರಶಸ್ತಿಯ 3ನೇ ಆವೃತ್ತಿಯ ವಿಜೇತರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. 

Selected 12 Achievers For Kannadaprabha SuvarnaNews Raita Ratna Award gvd
Author
First Published Mar 11, 2023, 8:41 AM IST

ಬೆಂಗಳೂರು (ಮಾ.11): ದೇಶದ ಬೆನ್ನೆಲುಬು ಎಂದೇ ಬಣ್ಣಿಸಲಾಗುವ, ವಿಶಾಲವಾದ ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರುನಾಡಿನ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ರೈತ ರತ್ನ’ ಪ್ರಶಸ್ತಿಯ 3ನೇ ಆವೃತ್ತಿಯ ವಿಜೇತರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ಒಟ್ಟಾರೆ 11 ವಿಭಾಗಗಳಲ್ಲಿ 12 ಸಾಧಕರನ್ನು ಪ್ರಶಸ್ತಿಗೆ ಆರಿಸಲಾಯಿತು. ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸುದ್ದಿವಾಹಿನಿ ಜಂಟಿಯಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇದೇ ತಿಂಗಳ 17ನೇ ತಾರೀಖಿನಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಬೆಂಗಳೂರಿನಲ್ಲಿರುವ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಕೇಂದ್ರ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತೀರ್ಪುಗಾರರಾಗಿ ಕೃಷಿ-ಪರಿಸರ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕಳವೆ, ಕೃಷಿ ತಜ್ಞ-ಉದ್ಯಮಿ ಕೃಷ್ಣ ಪ್ರಸಾದ್‌, ಕೃಷಿ ವಿಜ್ಞಾನಿ-ಲೇಖಕ ಡಾ ಕೆ.ಎನ್‌.ಗಣೇಶಯ್ಯ, ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಮುಖ್ಯಸ್ಥ ಎಸ್‌.ಎ.ವಾಸುದೇವಮೂರ್ತಿ ಹಾಗೂ ಮೈಕ್ರೋಬಿ ಆಗ್ರೋಟೆಕ್‌ ಪ್ರೈ. ಲಿ.ನ ಮುಖ್ಯಸ್ಥ ಡಾ.ಕೆ.ಆರ್‌.ಹುಲ್ಲುನಾಚೆಗೌಡ ಅವರು ಭಾಗವಹಿಸಿದ್ದರು.

ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿಗೆ ಆಹ್ವಾನ: 11 ವಿಭಾಗದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ

11 ವಿಭಾಗಗಳಲ್ಲಿ 12 ಪ್ರಶಸ್ತಿ: ಸುಸ್ಥಿರ ಕೃಷಿ, ಸಾವಯವ ಕೃಷಿ, ಆಧುನಿಕ ಕೃಷಿ, ಯುವ ರೈತ, ರೈತ ಮಹಿಳೆ, ಪಶು ಸಂಗೋಪನೆ, ತೋಟಗಾರಿಕೆ, ಬೆಳೆ ವೈದ್ಯ ಅಥವಾ ರೈತ ವಿಜ್ಞಾನಿ, ಕೃಷ್ಯುತ್ಪನ್ನ ಸಂಸ್ಥೆ ಅಥವಾ ವ್ಯಕ್ತಿ, ಕೃಷಿ ಸಂಶೋಧಕ ಅಥವಾ ತಂತ್ರಜ್ಞಾನಿ ಹಾಗೂ ಸುವರ್ಣ ಕೃಷಿ ಶಾಲೆ ಎಂಬ 11 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು.

ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಪ್ರಕ್ರಿಯೆ ವೇಳೆ 600ಕ್ಕೂ ಹೆಚ್ಚು ನಾಮನಿರ್ದೇಶನಗಳು ಹರಿದುಬಂದಿದ್ದವು. ಇವುಗಳ ಪೈಕಿ ಮೊದಲೆರಡು ಹಂತದ ಆಯ್ಕೆ ಪ್ರಕ್ರಿಯೆ ಕಳೆದ ವಾರವಷ್ಟೇ ಪೂರ್ಣಗೊಂಡಿತ್ತು. ಕನ್ನಡಪ್ರಭ ಸಂಪಾದಕೀಯ ತಂಡವು ಪ್ರತಿಯೊಂದು ನಾಮನಿರ್ದೇಶನವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಪ್ರತಿ ವಿಭಾಗದಲ್ಲೂ ತಲಾ ಐದರಿಂದ ಆರು ಸಾಧಕರನ್ನು ತೀರ್ಪುಗಾರರ ಸುತ್ತಿಗೆ ಆರಿಸಿತ್ತು.

ಆಯ್ದ 57 ನಾಮನಿರ್ದೇಶನಗಳನ್ನು ತೀರ್ಪುಗಾರರಾದ ಶಿವಾನಂದ ಕಳವೆ, ಕೃಷ್ಣಪ್ರಸಾದ್‌, ಗಣೇಶಯ್ಯ, ವಾಸುದೇವಮೂರ್ತಿ ಹಾಗೂ ಹುಲ್ಲುನಾಚೆಗೌಡ ಅವರ ಮುಂದಿಡಲಾಗಿತ್ತು. ಪ್ರತಿಯೊಂದು ಕ್ಷೇತ್ರದಲ್ಲೂ ಒಬ್ಬರಿಗಿಂತ ಇನ್ನೊಬ್ಬರು ಮಿಗಿಲು ಎಂಬಂತಿದ್ದ ರೈತ ಸಾಧಕರನ್ನು ತೀರ್ಪುಗಾರರು ಪರಸ್ಪರ ಸಮಾಲೋಚಿಸಿ, ಅಳೆದು ತೂಗಿ ಪ್ರಶಸ್ತಿಗೆ ಆರಿಸಿದರು. ಸುಮಾರು ಮೂರು ತಾಸುಗಳ ಕಾಲ ನಡೆದ ಆಯ್ಕೆ ಪ್ರಕ್ರಿಯೆ ಬಳಿಕ 12 ಸಾಧಕರನ್ನು ಪ್ರಶಸ್ತಿಗೆ ಅಂತಿಮಗೊಳಿಸಲಾಯಿತು.

Raita Ratna Award 2022: ತಿರುಮಲೇಶ್ವರ ಭಟ್ಟರ ಪ್ರಯೋಗಶೀಲ ಕೃಷಿ

ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ, ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ, ಕಾರ್ಯನಿರ್ವಾಹಕ ಸಂಪಾದಕ ರವಿಶಂಕರ್‌ ಭಟ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನಮಕ್ಕನವರ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios