ಟ್ರಾಫಿಕ್ ಸಮಸ್ಯೆಗೆ ಶಾಲಾ ಸಮಯ ಬದಲಿಸಲಾಗದು: ಸರ್ಕಾರದ ವರದಿಯಲ್ಲೇನಿದೆ?
ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಶಾಲಾ-ಕಾಲೇಜು ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಕುರಿತು ಹೈಕೋರ್ಟ್ ನೀಡಿದ್ದ ಸಲಹೆಯಂತೆ ಸಂಬಂಧಿಸಿದವರೊಂದಿಗೆ ಸಭೆ ನಡೆಸಿರುವ ರಾಜ್ಯ ಸರ್ಕಾರ, ಶಾಲಾ ಸಮಯ ಬದಲಾವಣೆ ಮಾಡಲಾಗದು ಎಂದು ತಿಳಿಸಿ ನ್ಯಾಯಾಲಯ ವರದಿ ಸಲ್ಲಿಸಿದೆ.
ಬೆಂಗಳೂರು (ಡಿ.22): ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಶಾಲಾ-ಕಾಲೇಜು ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಕುರಿತು ಹೈಕೋರ್ಟ್ ನೀಡಿದ್ದ ಸಲಹೆಯಂತೆ ಸಂಬಂಧಿಸಿದವರೊಂದಿಗೆ ಸಭೆ ನಡೆಸಿರುವ ರಾಜ್ಯ ಸರ್ಕಾರ, ಶಾಲಾ ಸಮಯ ಬದಲಾವಣೆ ಮಾಡಲಾಗದು ಎಂದು ತಿಳಿಸಿ ನ್ಯಾಯಾಲಯ ವರದಿ ಸಲ್ಲಿಸಿದೆ. ಬಳ್ಳಾರಿ ರಸ್ತೆ ಅಗಲೀಕರಣ ಕುರಿತು ಸಮರ್ಪಣಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿತ್ತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಯಿಸಿನ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಸಂಬಂಧಪಟ್ಟವರೊಂದಿಗೆ ನಡೆಸಿರುವ ಹಲವು ಸುತ್ತಿನ ಮಾತುಕತೆ ಮತ್ತು ಸಭೆಯಿಂದ ಹೊರಹೊಮ್ಮಿದ ಫಲಿತಾಂಶಗಳ ಕುರಿತು ವರದಿ ಸಲ್ಲಿಸಿದರು. ಜತೆಗೆ, ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಇತರೆ ಕ್ರಮಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವರದಿಯನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು 2024ರ ಜನವರಿ ತಿಂಗಳ ಮೊದಲ ವಾರಕ್ಕೆ ಮುಂದೂಡಿತು.
ಕಾಂಗ್ರೆಸ್ಸಿಗರು ತಮ್ಮ ಮನೆಗೆ ಟಿಪ್ಪು ಹೆಸರಿಡಲಿ: ಎಂ.ಪಿ.ರೇಣುಕಾಚಾರ್ಯ ಲೇವಡಿ
ಮಕ್ಕಳ ಊಟ, ನಿದ್ರೆಗೆ ಭಂಗ, ಶಿಕ್ಷಣ ಇಲಾಖೆ: ಕೇವಲ ಶಾಲಾ ಸಮಯದ ಕಾರಣದಿಂದ ಬೆಂಗಳೂರು ನಗರದ ಸಂಚಾರ ದಟ್ಟಣೆ ಉಂಟಾಗುತ್ತಿಲ್ಲ. ಸಂಚಾರ ದಟ್ಟಣೆಯ ಒಟ್ಟಾರೆ ವಾಹನಗಳ ಬಳಕೆ, ವಿವಿಧ ಕಚೇರಿಗಳು, ಕೈಗಾರಿಕೆಗಳು ಮತ್ತು ಇತರೆ ಸ್ಥಳಗಳಿಗೆ ತೆರಳುವ ವಾಹನಗಳ ಕಾರಣದಿಂದ ಉಂಟಾಗುತ್ತದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಶಾಲೆಗಳನ್ನು ಬೆಳಗ್ಗೆ ಬೇಗನೆ ಆರಂಭಿಸಿದಲ್ಲಿ ಮಕ್ಕಳಿಗೆ ನಿದ್ರೆ, ಊಟ, ಉಪಚಾರ ನಿಗದಿತ ಸಮಯಕ್ಕೆ ಆಗದೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಒಟ್ಟಾರೆ ಅಭಿಪ್ರಾಯದಂತೆ ಪ್ರಸ್ತುತ ಇರುವ ಶಾಲಾ ಸಮಯದಲ್ಲಿ ಬದಲಾವಣೆ ಅವಶ್ಯವಿಲ್ಲ ಎಂದು ಶಿಕ್ಷಣ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಶಾಲೆಗಳ ಸುತ್ತ-ಮುತ್ತ ವಾಹನ ದಟ್ಟಣೆ ತಪ್ಪಿಸಲು, ಶಾಲಾ ಆವರಣದ ಒಳಗೆ ನಿಲುಗಡೆಗೆ ಅವಕಾಶ ಒದಗಿಸಲು ಸಾಧ್ಯವಿರದೇ ಇರುವ ಶಾಲೆಗಳ ಸಮೀಪದಲ್ಲಿ ನಿರ್ದಿಷ್ಟ ಪಿಕ್ ಅಪ್ ಮತ್ತು ಡ್ರಾಪ್ ಪಾಯಿಂಟ್ಗಳನ್ನು ನಿಗದಿ ಮಾಡಬೇಕು. ಶಾಲೆಗಳ ಸಮೀಪದಲ್ಲಿ ಶಾಲಾ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಸ್ವ ಇಚ್ಛೆಯುಳ್ಳ ಪಾಲಕರನ್ನು ಟ್ರಾಫಿಕ್ ವಾರ್ಡನ್ಗಳನ್ನಾಗಿ ನೇಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ವಾಹನ ದಟ್ಟಣೆ ಉಂಟಾಗುವ ಶಾಲೆಗಳ ಸುತ್ತಮುತ್ತ ಲೋಕಲ್ ಏರಿಯಾ ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲಾನ್ ಜಾರಿಗೊಳಿಸಬೇಕು. ಪೋಷಕರು ಮಕ್ಕಳನ್ನು ಶಾಲೆಗೆ ತಲುಪಿಸಲು ಮತ್ತು ಕರೆತರಲು ಸ್ವಂತ ವಾಹನಗಳನ್ನು ಬಳಸುವುದನ್ನು ತಪ್ಪಿಸಲು 3-4 ಶಾಲೆಗಳಿಗೆ ಒಟ್ಟುಗೂಡಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಬಿಎಂಟಿಸಿಯಿಂದ ಬಸ್ ಸೇವೆ ಒದಗಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಬಿಬಿಎಂಪಿ ಶಾಲೆ ಶಿಕ್ಷಣ ಇಲಾಖೆಗೆ ಹಸ್ತಾಂತರ: ಡಿಕೆಶಿ ನೇತೃತ್ವದಲ್ಲಿ ಸಭೆ
ಕಾರ್ಮಿಕರಿಂದ ಟ್ರಾಫಿಕ್ ಆಗಲ್ಲ: ಸಂಘಟನೆಗಳು: ಕಾರ್ಮಿಕ ಇಲಾಖೆ ಸಂಬಂಧಿಸಿದ ಕೈಗಾರಿಕಾ ಸಂಘಟನೆಗಳ ಜತೆ ವಿಸ್ತೃತ ಮಾತುಕತೆ ನಡೆಸಿದ ಬಳಿಕ ಕಾರ್ಖಾನೆಗಳಿಂದ ವಾಹನ ದಟ್ಟಣೆ ಆಗುತ್ತಿಲ್ಲ, ಹಾಗಾಗಿ ಬದಲಾವಣೆ ಅಗತ್ಯವಿಲ್ಲ. ಕಾರ್ಖಾನೆಗಳ ಸಿಬ್ಬಂದಿ ಕಾರ್ಯನಿರ್ವಹಣೆಯಿಂದ ವಾಹನ ದಟ್ಟಣೆ ಉಂಟಾಗುತ್ತಿಲ್ಲ. ಅವರು ಬೆಳಗ್ಗೆ 6ರಿಂದ 9ರ ನಡುವೆ ಪ್ರಯಾಣ ಮಾಡುತ್ತಾರೆ ಮತ್ತು ಸಂಜೆಯ ನಂತರ ದುಡಿಯುವ ಸ್ಥಳದಿಂದ ಮನೆಗೆ ಮರಳುತ್ತಾರೆ. ಹೊರವರ್ತುಲ ರಸ್ತೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಂಪನಿಗಳು ಹೈಬ್ರೀಡ್ ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಬೇಕು, ಇದರಿಂದ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ತಗ್ಗುವುದಲ್ಲದೆ, ಕಚೇರಿಗೆ ಆಗಮಿಸುವ ಸಿಬ್ಬಂದಿ ಸಂಖ್ಯೆ ಇಳಿಮುಖವಾಗುತ್ತದೆ ಎಂದು ಕಾರ್ಮಿಕ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.