ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಕಾರ್ಯಕ್ರಮಗಳು ಎಸ್ಸಿ, ಎಸ್ಟಿ ಜನರಿಗೆ ನೇರವಾಗಿ ಪ್ರಯೋಜವಾಗುತ್ತಿರುವುದರಿಂದ ಎಸ್ಸಿಪಿ, ಟಿಎಸ್ಪಿ ಅಡಿ ಮೀಸಲಿಟ್ಟಿರುವ 34,294 ಕೋಟಿ ರು.ಗಳಲ್ಲಿ ಭಾಗಶಃ ಅಂದರೆ 11,144 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗ ಹಂಚಿಕೆ ಮಾಡಲಾಗಿದೆ. ಇಷ್ಟೂಹಣವನ್ನು ಕಡ್ಡಾಯವಾಗಿ ಪ.ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ವಿನಿಯೋಗಿಸಲಾಗುವುದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಆ.03): ಅನುಸೂಚಿತ ಜಾತಿಗಳ ಉಪಹಂಚಿಕೆ (ಎಸ್ಸಿಪಿ) ಮತ್ತು ಬುಡಕಟ್ಟು ಉಪ ಹಂಚಿಕೆ (ಟಿಎಸ್ಪಿ) ಯೋಜನೆಗಳ ಅನುದಾನವನ್ನು ಇತರೆ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಕೆಲವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ಯಾವುದೇ ರೀತಿಯಲ್ಲೂ ಪರಿಶಿಷ್ಟಜಾತಿ/ಪಂಗಡಗಳ ಕಲ್ಯಾಣಕ್ಕೆಂದು ಮೀಸಲಿರಿಸಿದ ಹಣವನ್ನು ಇತರ ಜನ ಸಮುದಾಯಗಳ ಉದ್ದೇಶಕ್ಕೆ ಬಳಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಸ್ಸಿಪಿ, ಟಿಎಸ್ಪಿ ಅಧಿನಿಯಮ 2013ರ ಅನ್ವಯ ಪ.ಜಾತಿ ಮತ್ತು ಪ.ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ವಾಸಸ್ಥಳ ಅಭಿವೃದ್ಧಿಗೆ ಅನುದಾನ ಹಂಚಿಕೆಗೆ ಅವಕಾಶವಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಕಾರ್ಯಕ್ರಮಗಳು ಎಸ್ಸಿ, ಎಸ್ಟಿ ಜನರಿಗೆ ನೇರವಾಗಿ ಪ್ರಯೋಜವಾಗುತ್ತಿರುವುದರಿಂದ ಎಸ್ಸಿಪಿ, ಟಿಎಸ್ಪಿ ಅಡಿ ಮೀಸಲಿಟ್ಟಿರುವ 34,294 ಕೋಟಿ ರು.ಗಳಲ್ಲಿ ಭಾಗಶಃ ಅಂದರೆ 11,144 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗ ಹಂಚಿಕೆ ಮಾಡಲಾಗಿದೆ. ಇಷ್ಟೂ ಹಣವನ್ನು ಕಡ್ಡಾಯವಾಗಿ ಪ.ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.
News Hour: ಗ್ಯಾರಂಟಿ ಜಾರಿಯಿಂದಾಗಿ ಖಾಲಿಯಾಯ್ತಾ ಸರ್ಕಾರದ ಖಜಾನೆ?
11,144 ಕೋಟಿ ರು.ಗಳ ಪೈಕಿ ಈ ಪೈಕಿ 5075 ಕೋಟಿ ರು.ಗೃಹಲಕ್ಷ್ಮಿ, 2779.97 ಕೋಟಿ ರು.ಗಳನ್ನು ಅನ್ನಭಾಗ್ಯ, 2410 ಕೋಟಿ ರು. ಗೃಹ ಜ್ಯೋತಿಗೆ, 812 ಕೋಟಿ ರು.ಗಳನ್ನು ಶಕ್ತಿ ಯೋಜನೆಗೆ ಮತ್ತು 67.50 ಕೋಟಿ ರು.ಗಳನ್ನು ಯುವನಿಧಿ ಯೋಜನೆಗೆ ಹಂಚಿಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಈ ರೀತಿ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಹಂಚಿಕೆ ಮಾಡುತ್ತಿರುವುದು ಇದೇ ಮೊದಲಲ್ಲ. 2019-20ರಿಂದ 2023-24ರವರೆಗೆ ಇಂಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಸಾರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳಡಿ ಭಾಗಶಃ ಅನುದಾನ ಹಂಚಿಕೆ ಮಾಡಿಕೊಂಡು ಬರಲಾಗಿದೆ. ಅದೇ ರೀತಿ ಈ ಬಾರಿಯೂ ಈ ಐದೂ ಇಲಾಖೆಯಡಿ ಜಾರಿಗೊಳಿಸಿರುವ ಐದೂ ಗ್ಯಾರಂಟಿಗಳಿಗೆ ಎಸ್ಸಿಪಿ, ಟಿಎಸ್ಪಿಯ ಭಾಗಶಃ ಅನುದಾನ ಹಂಚಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಇಲಾಖೆಗಳ ಅನುದಾನ ಹಂಚಿಕೆಯನ್ನು ಕಡಿತಗೊಳಿಸಿದ್ದು ಅದನ್ನು ಈ ಬಾರಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
