Asianet Suvarna News Asianet Suvarna News

ಸಂಕ್ರಾಂತಿ ಸಂಭ್ರಮಕ್ಕೆ ಕೊರೋನಾ ಕಂಟಕ!

ಸಂಕ್ರಾಂತಿ ಸಂಭ್ರಮಕ್ಕೆ ಕೊರೋನಾ ಕಂಟಕ! ಖರೀದಿಗೆ ಆಸಕ್ತಿ ತೋರದ ಗ್ರಾಹಕರು | ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ಕುಸಿತ | ಬಿಕೋ ಎನ್ನುತ್ತಿರುವ ಅಂಗಡಿಗಳು

Sankranthi shopping dull in Bengaluru due to covid19 dpl
Author
Bangalore, First Published Jan 10, 2021, 8:22 AM IST

ಬೆಂಗಳೂರು(ಜ.10): ಸಮೃದ್ಧಿ ಸಂಕೇತವಾದ ಮಕರ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿರುವುದರಿಂದ ಈಗಾಗಲೇ ನಗರದ ಮಾರುಕಟ್ಟೆಗಳು ಕಳೆಗಟ್ಟಿದ್ದರೂ, ಕೊರೋನಾ ಭೀತಿಯಿಂದ ಗ್ರಾಹಕರ ಕೊರತೆಯಾಗಿ ವ್ಯಾಪಾರ-ವಹಿವಾಟಿಗೆ ಪೆಟ್ಟು ಬಿದ್ದಿದೆ.

ಜನವರಿ 14ರ ಗುರುವಾರ ಮಕರ ಸಂಕ್ರಾಂತಿ ಹಬ್ಬ ಬಂದಿದೆ. ಹಬ್ಬಕ್ಕೆ ಅಗತ್ಯವಾಗಿರುವ ಅವರೆಕಾಯಿ, ಗೆಣಸು, ಕಡಲೇಕಾಯಿ, ಕಬ್ಬು, ಎಳ್ಳು-ಬೆಲ್ಲಗಳ ಮಿಶ್ರಣ, ಸಕ್ಕರೆ ಅಚ್ಚು ಸೇರಿದಂತೆ ನಾನಾ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ನಿರೀಕ್ಷೆ ಪ್ರಮಾಣದಲ್ಲಿ ಕೊಳ್ಳುವವರಿಲ್ಲದೇ ಬಣಗುಡುತ್ತಿವೆ. ಕೆಲವೆಡೆ ಸಾಧಾರಣ ಮಟ್ಟಿಗೆ ವ್ಯಾಪಾರ ನಡೆಯುತ್ತಿದೆ.

ಹಬ್ಬಕ್ಕೆ ಒಂದು ತಿಂಗಳು ಅಥವಾ 15 ದಿನಗಳಿದ್ದಂತೆ ಎಳ್ಳು-ಬೆಲ್ಲದ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ, ಕೊರೋನಾ ಭಯದಿಂದ ಗ್ರಾಹಕರು ಸಿದ್ಧ ಎಳ್ಳು ಬೆಲ್ಲ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹಬ್ಬಕ್ಕೆ ನಾಲ್ಕೈದು ದಿನ ಇದ್ದಂತೆ ವ್ಯಾಪಾರವಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಕೆ.ಆರ್‌.ಮಾರುಕಟ್ಟೆ, ಜಯನಗರ, ಗಾಂಧಿಬಜಾರ್‌, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ಕೆಂಗೇರಿ ಉಪನಗರ, ಮಡಿವಾಳ ಹೀಗೆ ನಗರದ ಬಹುತೇಕ ಬಡಾವಣೆಗಳಲ್ಲಿ ಸಿದ್ಧ ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಮಾರಾಟಕ್ಕೆಂದೇ ಪ್ರತ್ಯೇಕ ಮಳಿಗೆಗಳನ್ನು ತೆರೆಯಲಾಗಿದೆ. ಇದಲ್ಲದೆ ಪ್ರಾವಿಷನ್‌ ಸ್ಟೋರ್‌ ಮತ್ತಿತರ ಮಳಿಗೆಗಳಲ್ಲೂ ಮಾರಾಟಕ್ಕಿಡಲಾಗಿದ್ದರೂ ಈ ಹಿಂದಿನಷ್ಟುವ್ಯಾಪಾರವಿಲ್ಲ.

ಬಿಎಸ್‌ವೈಗೆ ಅಭಿನಂದಿಸಿದ ಎಚ್‌ಡಿಕೆ: ಕಾರಣ ಏನು..?

ಕೊರೋನಾದಿಂದ ವ್ಯಾಪಾರವಿಲ್ಲದೆ ನಷ್ಟಕ್ಕೆ ಗುರಿಯಾಗಿದ್ದ ವ್ಯಾಪಾರಿಗಳು ಈ ವರ್ಷ ಸ್ವಲ್ಪಮಟ್ಟಿಗೆ ಕೆಲ ಪದಾರ್ಥಗಳ ಬೆಲೆ ಹೆಚ್ಚಿಸಿದ್ದಾರೆ. ಒಂದು ಕೆ.ಜಿ. ಮಿಶ್ರಿತ ಎಳ್ಳು-ಬೆಲ್ಲ .240-250, ಕೊಬ್ಬರಿ ಕೆ.ಜಿ. .500, ಕಡಲೆಬೀಜ ಕೆ.ಜಿ. .120, ಸಕ್ಕರೆ ಅಚ್ಚು ಕೆ.ಜಿ. .240 ಇದೆ. ಪೂರ್ಣ ಕಬ್ಬು ಒಂದಕ್ಕೆ ಸಗಟು ದರ .50-60 ಇದೆ.

ಕೆಲವರು ಮಿಶ್ರಣ ಎಳ್ಳು-ಬೆಲ್ಲವನ್ನು ಕಳೆದ ವರ್ಷದ ದರದಲ್ಲೆ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ನೀಡಲು ಮುಂದಾದರೂ ಗ್ರಾಹಕರಿಲ್ಲ. ಪ್ರತಿ ವರ್ಷವೂ ವಿದೇಶದಲ್ಲಿರುವ ಭಾರತೀಯರು ಕಳೆದ 15-20 ದಿನಗಳಿಂದ ಸಿದ್ಧ ಎಳ್ಳು-ಬೆಲ್ಲಗಳಿಗಾಗಿ ಮಾರಾಟಗಾರರಲ್ಲಿ ಬುಕ್‌ ಮಾಡುತ್ತಿದ್ದರು. ಕ್ರಿಸ್ಮಸ್‌ ರಜೆ ಮೇಲೆ ಲಂಡನ್‌, ಅಮೆರಿಕ ಮತ್ತಿತರ ರಾಷ್ಟ್ರಗಳಿಂದ ಬಂದಿದ್ದವರು ಡಿಸೆಂಬರ್‌ ಅಂತ್ಯ ಹಾಗೂ ಜನವರಿ ಮೊದಲ ವಾರದಲ್ಲಿ ವಿದೇಶಕ್ಕೆ ತೆರಳುವಾಗ ಇಲ್ಲಿಂದಲೇ ಎಳ್ಳು-ಬೆಲ್ಲ ಕೊಂಡೊಯ್ಯುತ್ತಿದ್ದರು. ಇದಕ್ಕೆಲ್ಲ ಕೊರೋನಾ ತಡೆಯೊಡ್ಡಿದೆ ಎನ್ನುತ್ತಾರೆ ಗಾಂಧಿಬಜಾರ್‌ ಅಶ್ವಿನಿ ಸ್ಟೋ​ರ್‍ಸ್ನ ಅಂಜನ್‌ಕುಮಾರ್‌.

ಪ್ರತಿವರ್ಷ ಈ ಸಮಯದಲ್ಲಿ ಹೆಚ್ಚು ವ್ಯಾಪಾರವಾಗುತ್ತಿತ್ತು. ಕೊರೋನಾದಿಂದಾಗಿ ಈ ವರ್ಷ ಶೇ.30-40ರಷ್ಟುವ್ಯಾಪಾರ ಕಡಿಮೆಯಾಗಬಹುದು. ಕಳೆದ ವರ್ಷದಷ್ಟೇ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಆದರೆ, ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಮುಂದಿನ ದಿನಗಳಲ್ಲಿ ವ್ಯಾಪಾರ ಇಲ್ಲದಿದ್ದರೆ ಬೆಲೆ ಇಳಿಕೆಯಾಗಲಿದೆ ಎಂದು ಅದಿತಿ ಪೂಜಾ ಸ್ಟೋ​ರ್‍ಸ್ ಮಾಲೀಕ ಡಿ.ವೆಂಕಟೇಶಬಾಬು ಹೇಳಿದ್ದಾರೆ.

ಬೆಂಗಳೂರಲ್ಲಿ 1507 ಕೇಂದ್ರದಲ್ಲಿ ಲಸಿಕೆಗೆ ವ್ಯವಸ್ಥೆ

ಮಾರುಕಟ್ಟೆಯ ದರ (ಕೆ.ಜಿ.ಗಳಲ್ಲಿ)

(ಗುಣಮಟ್ಟಆಧಾರದ ಮೇಲೆ ಬೆಲೆಗಳು ನಿಗದಿ)

ಕಡ್ಲೆಬೀಜ .200-220

ಹುರಿಗಡ್ಲೆ .120-130

ಬೆಲ್ಲ .140

ಕೊಬ್ಬರಿ .400-500

ಎಳ್ಳು .260-240

ಸಕ್ಕರೆ ಅಚ್ಚು .200-240

ಕುಸುರಿ(100 ಗ್ರಾಂ) .12-20

ಎಳ್ಳು ಬೆಲ್ಲ ಮಿಶ್ರಣ .250

ಬಣ್ಣದ ಕುಡಿಕೆ ಒಂದಕ್ಕೆ .20-50

Follow Us:
Download App:
  • android
  • ios