Saalumarada Thimmakka passes away: ಶತಾಯುಷಿ ಸಾಲುಮರದ ತಿಮ್ಮಕ್ಕ (114) ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಗೊಂದಲ ಉಂಟಾಗಿದೆ. ತಿಮ್ಮಕ್ಕನ ಕೊನೆ ಆಸೆಯಂತೆ ಹುಲಿಕಲ್‌ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು, ಪಾರ್ಥಿವ ಶರೀರವನ್ನು ತಡೆದಿದ್ದಾರೆ.

ಹುಲಿಕಲ್, (ನ.14): ಶತಾಯುಷಿ ಸಾಲುಮರದ ತಿಮ್ಮಕ್ಕ ಅವರು 114ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಆದೇಶಿಸಿದೆ. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಅಂತ್ಯಕ್ರಿಯೆಗೆ ಎರಡು-ಮೂರು ಸ್ಥಳಗಳನ್ನ ಗೊತ್ತು ಮಾಡಿದ್ದು, ಹುಲಿಕಲ್ ಗ್ರಾಮಸ್ಥರು ನಮ್ಮೂರಲ್ಲೇ ಅಂತ್ಯಕ್ರಿಯೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಸಾಲುಮರದ ತಿಮ್ಮಕ್ಕನ ಪಾರ್ಥಿವ ಶರೀರ ತಡೆ ಗ್ರಾಮಸ್ಥರು:

ಹಾಸನದ ಬೇಲೂರಿಗೆ ಹೊರಟ್ಟಿದ್ದ ಸಾಲುಮರದ ತಿಮ್ಮಕ್ಕನ ಪಾರ್ಥಿವ ಶರೀರವನ್ನು ತಮ್ಮೂರಿನಲ್ಲೇ ಇರಿಸಿಕೊಳ್ಳಲು ಗ್ರಾಮಸ್ಥರು ಪಟ್ಟು ಹಿಡಿದ ಭಾವನಾತ್ಮಕ ಘಟನೆಯೂ ನಡೆಯಿತು. ತಿಮ್ಮಕ್ಕನ ಆಸೆಯಂತೆಯೇ ಗ್ರಾಮದಲ್ಲೇ ಅಂತ್ಯಸಂಸ್ಕಾರ ನಡೆಸಬೇಕು ಎಂದು ಸಂಬಂಧಿಕರು ಒತ್ತಾಯಿಸಿದರು ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ ಗ್ರಾಮಸ್ಥರು.

ತಿಮ್ಮಕ್ಕ ಸ್ಮಾರಕವೂ ಹುಲಿಕಲ್‌ನಲ್ಲೇ ಆಗಬೇಕು:

ಗ್ರಾಮದ ಆಲದ ಮರದ ಕೆಳಗೆ ಬೆಳೆದು ಗ್ರಾಮದ ಜೀವವಾಗಿದ್ದ ತಿಮ್ಮಕ್ಕ ಪಾರ್ಥೀವ ಶರೀರವು ಬೆಳಗ್ಗೆಯೇ ಹುಲಿಕಲ್ ಗ್ರಾಮ ತಲುಪಿತು. ಗ್ರಾಮದ ಸರ್ಕಲ್‌ನಲ್ಲಿ ಅಂತಿಮ ದರ್ಶನಕ್ಕೆ ತಂದ ಕ್ಷಣದಿಂದಲೇ ಗ್ರಾಮಸ್ಥರು ಭಾವುಕರಾದರು. ಸಾಲುಮರದ ತಿಮ್ಮಕ್ಕ ಪತಿ ಬಿಕ್ಕಲ ಚಿಕ್ಕಯ್ಯ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ಮಾಡದಿ. ಗಂಡನ ಪಕ್ಕದಲ್ಲೇ ಹೆಂಡತಿಯ ಸಮಾಧಿ ಇರಬೇಕು. ಹೀಗಾಗಿ ಹುಲಿಕಲ್‌ನಲ್ಲೇ ಅಂತಿಮ ಸಂಸ್ಕಾರ ಆಗಬೇಕು, ಗ್ರಾಮದಲ್ಲಿ ತಿಮ್ಮಕ್ಕನ ಹೆಸರಲ್ಲಿ ಎರಡು ಎಕರೆ ಜಮೀನಿದ್ದು, ಸ್ಮಾರಕವೂ ನಮ್ಮೂರಲ್ಲೇ ಆಗಬೇಕು ಎಂದು ಗ್ರಾಮಸ್ಥರು, ತಿಮ್ಮಕ್ಕ ಸಂಬಂಧಿಗಳು ಪಟ್ಟು ಹಿಡಿದರು. ಬೇಲೂರಿಗೆ ಹೊರಟ್ಟಿದ್ದ ಶರೀರವನ್ನು ಗ್ರಾಮಸ್ಥರೇ ತಡೆದರು. ಈ ನಡುವೆ ಶಾಸಕ ಬಾಲಕೃಷ್ಣ ಗ್ರಾಮಸ್ಥರ ಮನವೊಲಿಸಿದರು. ಅಂತ್ಯಸಂಸ್ಕಾರದ ಸ್ಥಳದ ಬಗ್ಗೆ ನಾಳೆ ಸಿಎಂ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.