Asianet Suvarna News Asianet Suvarna News

ಗಾಯಗೊಂಡಿದ್ದ ಕೊಳಕು ಮಂಡಲ ಹಾವಿನಿಂದ 41 ಮರಿಗಳ ಜನನ

ಜೆಸಿಬಿ ಮೂಲಕ ರಕ್ಷಣೆ ಮಾಡಲಾಗಿದ್ದ ಕೊಳಕುಮಂಡಲ ಹಾವೊಂದು ಸುಮಾರು 41 ಮರಿಗಳಿಗೆ ಜನ್ಮ ನೀಡುವುದರೊಂದಿಗೆ ತಾನೂ ಕೂಡ ಅರಣ್ಯವನ್ನು ಸೇರಿಕೊಂಡಿದೆ. ಜಿಲ್ಲೆಯ ಖ್ಯಾತ ಉರಗರಕ್ಷಕರಾದ ಸ್ನೇಕ್‌ ಸುರೇಶ್‌ ಹಾಗೂ ನವೀನ್‌ ಈ ಹಾವನ್ನು ರಕ್ಷಿಸಿದ್ದರು.

russells viper gave birth to 41 snakes in madikeri district gvd
Author
Bangalore, First Published Jun 21, 2022, 4:00 AM IST

ಮಡಿಕೇರಿ (ಜೂ.21): ಜೆಸಿಬಿ ಮೂಲಕ ರಕ್ಷಣೆ ಮಾಡಲಾಗಿದ್ದ ಕೊಳಕುಮಂಡಲ ಹಾವೊಂದು ಸುಮಾರು 41 ಮರಿಗಳಿಗೆ ಜನ್ಮ ನೀಡುವುದರೊಂದಿಗೆ ತಾನೂ ಕೂಡ ಅರಣ್ಯವನ್ನು ಸೇರಿಕೊಂಡಿದೆ. ಜಿಲ್ಲೆಯ ಖ್ಯಾತ ಉರಗರಕ್ಷಕರಾದ ಸ್ನೇಕ್‌ ಸುರೇಶ್‌ ಹಾಗೂ ನವೀನ್‌ ಈ ಹಾವನ್ನು ರಕ್ಷಿಸಿದ್ದರು.

ಕೆಲವು ದಿನಗಳ ಹಿಂದೆ ಕೊಡಗು ಜಿಲ್ಲೆಯ ಸಿದ್ದಾಪುರದ ಗುಹ್ಯ ಗ್ರಾಮದ ಉರಗ ರಕ್ಷಕರಾದ ಸ್ನೇಕ್‌ ಸುರೇಶ್‌ ಹಾಗೂ ಪೊನ್ನಂಪೇಟೆಯ ನವೀನ್‌ ರಾಖಿ ಅವರು ಸಿದ್ದಾಪುರದ ಮೈಸೂರು ರಸ್ತೆ ಬಡಾವಣೆಯಲ್ಲಿ ಕೊಳಕುಮಂಡಲ ಗರ್ಭಿಣಿ ಹಾವನ್ನು ಜೆಸಿಬಿ ಮೂಲಕ ರಕ್ಷಣೆ ಮಾಡಿದ್ದರು. ಹಾವನ್ನು ಹಿಡಿಯುವ ಸಂದರ್ಭದಲ್ಲಿ ಸಣ್ಣಪುಟ್ಟಗಾಯಗಳು ಆಗಿದ್ದರಿಂದ ಅದನ್ನು ಸಿದ್ದಾಪುರದ ಉರಗ ರಕ್ಷಕರ ತಂಡದ ಸ್ನೇಕ್‌ ಸುರೇಶ್‌ ಅವರ ಮನೆಯಲ್ಲಿ ಇರಿಸಿ 2 ದಿನಗಳ ಕಾಲ ಸ್ನೇಕ್‌ ಸುರೇಶ್‌ ಹಾಗೂ ಸ್ನೇಕ್‌ ನವೀನ್‌ ರಾಕಿ ಅವರು ಚಿಕಿತ್ಸೆ ನೀಡಿದ್ದರು.

ಜಿದ್ದಾ ಜಿದ್ದಿನ ಘೋರ ಕಾಳಗದಲ್ಲಿ ಗೆದ್ದಿದ್ದು 'ಸಾವು': ಶ್ವಾನ, ಸರ್ಪದ ವಿಡಿಯೋ ವೈರಲ್‌..!

ಗಾಯವಾಗಿದ್ದ ಹಾವನ್ನು ಪೆಟ್ಟಿಗೆಯಲ್ಲಿ ಹಾಕಿ ಅದಕ್ಕೆ ಆಹಾರವಾಗಿ ಕಪ್ಪೆ, ಇಲಿಯನ್ನು ನೀಡಲಾಗಿದೆ. ಹೀಗೆ ಎರಡು ದಿನಗಳ ಪಾಲನೆಯ ನಂತರ ಕೊಳಕುಮಂಡಲ ಸುಮಾರು 41 ಮರಿಗಳಿಗೆ ಜನ್ಮ ನೀಡಿದೆ. ಅವುಗಳಿಗೆ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ನೋಡಿಕೊಳ್ಳುವಲ್ಲಿ ಉರಗ ರಕ್ಷಕರ ತಂಡದ ಸದಸ್ಯರು ಯಶಸ್ವಿಯಾಗಿದ್ದಾರೆ.

ಪೊನ್ನಂಪೇಟೆ ನಿವಾಸಿ ಸ್ನೇಕ್‌ ನವೀನ ರಾಕಿ, ಸ್ನೇಕ್‌ ವಿನೋದ್‌ ಬಾವೆ, ಸ್ನೇಕ್‌ ಮನೋಜ್‌, ಸ್ನೇಕ್‌ ರೋಷನ್‌ ಅವರು ಕೊಳಕುಮಂಡಲ ಹಾವು ಮತ್ತು 41 ಮರಿಗಳನ್ನು ಅರಣ್ಯ ಅಧಿಕಾರಿ ಉಮಾಶಂಕರ್‌ ಅವರ ನೇತೃತ್ವದಲ್ಲಿ ತಿತಿಮತಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಕೊಡಗಿನಲ್ಲಿ ಯಾರು ಈ ರೀತಿಯ ಕೆಲಸಗಳನ್ನು ಮಾಡುವುದಿಲ್ಲ ಹಾಗೂ ಮಾಡಲು ಮುಂದೆ ಬರುವುದಿಲ್ಲ. ಕೊಡಗು ತಕ್ಷ ಸಂರಕ್ಷಕರ ಸಂಘದ ಸದಸ್ಯರು ಹಲವು ವರ್ಷಗಳಿಂದ ಹಾವಿನ ಮೊಟ್ಟೆಗಳ ರಕ್ಷಣೆ ಮಾಡಿ ಮರಿ ಮಾಡಿಸುವ ಕೆಲಸ ಹಾಗೂ ಹಾವುಗಳಿಗೆ ಗಾಯಗಳಾದರೆ ಚಿಕಿತ್ಸೆ ನೀಡಿ ಒಂದು ದಿನದ ಮಟ್ಟಿಗೆ ಮನೆಯಲ್ಲಿ ಇಟ್ಟು ಅನಂತರ ಅವುಗಳನ್ನು ಅರಣ್ಯಕ್ಕೆ ಬಿಡಲಾಗುವುದು ಎಂದು ಸ್ನೇಕ್‌ ನವೀನ್‌ ರಾಕಿ ಹಾಗೂ ಸ್ನೇಕ್‌ ಸುರೇಶ್‌ ಮಾಹಿತಿ ನಿಡಿದ್ದಾರೆ.

ಹಾವಿನ ರೂಪದಲ್ಲಿ ಮೃತಗಂಡ ಮನೆಗೆ ಬಂದನೆಂದು ಹಾವಿನೊಂದಿಗೆ 4 ದಿನ ಕಳೆದ ಅಜ್ಜಿ!

ಸದಸ್ಯರ ಮನವಿ: ಎಲ್ಲಿಯಾದರೂ ಹಾವುಗಳನ್ನು ಕಂಡರೆ ಕೂಡಲೇ ಕೊಡಗು ತಕ್ಷ ಸಂರಕ್ಷಕರ ಸಂಘದ ಸದಸ್ಯರಿಗೆ ಮಾಹಿತಿ ನೀಡಬೇಕಾಗಿ ಮನವಿ ಮಾಡಿದ್ದಾರೆ. ದೂರವಾಣಿ ಸಂಖ್ಯೆ 8277131863.

Follow Us:
Download App:
  • android
  • ios