ಕುಡುಕರನ್ನ ಕಂಡರೆ ಸರ್ಕಾರಕ್ಕೇಕೆ ಕರುಣೆ? ಮದಿರೆಯ ಮಾರಾಟಕ್ಕೇಕೆ ತರಾತುರಿ?
ಈಗಾಗಲೇ ಮದ್ಯವಿಲ್ಲದೇ ಹಲವು ದಿನಗಳನ್ನು ಕಳೆದಿರುವ ಮದ್ಯಪ್ರಿಯರಿಗೆ ವಿಥ್ಡ್ರಾವಲ್ ಲಕ್ಷಣಗಳು ಕಡಿಮೆಯಾಗಿವೆ. ಇತರೆ ರಾಜ್ಯಗಳಂತೆ ಕರ್ನಾಟಕವನ್ನು ಮದ್ಯ ಮುಕ್ತ ರಾಜ್ಯವನ್ನಾಗಿಸಲು ಇದು ಸಕಾಲ. ಅಂಥದ್ರಲ್ಲಿ ಸರಕಾರಕ್ಕೇಕೆ ಮದ್ಯದಂಗಡಿ ತೆರೆಯಲು ಇಷ್ಟು ತರಾತುರಿ? ಸಂಸಾರದ ನೆಮ್ಮದಿ ರಾಜ್ಯಕ್ಕೆ ಮುಖ್ಯವಲ್ಲವೇ? ಹಾಗೊಂದು ವಿಚಾರ ಮಂಥನ...
- ರಾಘವೇಂದ್ರ ಅಗ್ನಿಹೋತ್ರಿ
ಹೇಳಿಕೆ-1
ರಾಜ್ಯದಲ್ಲಿ ಲಾಕ್ಡೌನ್ ಬಳಿಕ ಮದ್ಯ ಮಾರಾಟ ಆರಂಭಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ - ರಾಜ್ಯ ಅಬಕಾರಿ ಸಚಿವ ಎಚ್. ನಾಗೇಶ್.
ಹೇಳಿಕೆ-2
ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹಸಿರು ವಲಯ ವ್ಯಾಾಪ್ತಿಯಲ್ಲಿ ಮದ್ಯದಂಗಡಿ ತೆರೆಯಬೇಕು. ಅತಿದೊಡ್ಡ ಆರ್ಥಿಕ ಮೂಲವಾದ ಅಬಕಾರಿ ಸುಂಕವೂ ಬರುತ್ತಿಲ್ಲ, ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ರಾಜ್ಯದ ಆರ್ಥಿ ಪರಿಸ್ಥಿತಿ ಸುಧಾರಣೆಯಾಗಲಿದೆ - ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ.
ಮದಿರೆಗಾಗಿ ಮದ್ಯಪ್ರಿಯರು ಚಾತಕಪಕ್ಷಿಿಯಂತೆ ಕಾಯುತ್ತಿರುವಾಗ ಇಂಥ ಹೇಳಿಕೆಗಳು ಮದ್ಯ ವ್ಯಸನಿಗಳ ಆಸೆ ಚಿಗುರುವಂತೇ ಮಾಡುತ್ತಿಿವೆ. ಮದಿರೆ ಭಾಗ್ಯದ ಬಾಗಿಲು ತೆರೆಯುಂತೆ ಮಾಡಲು ಸರ್ಕಾರದ ಮೇಲೆ ಒತ್ತಡವನ್ನು ಎಲ್ಲೆಲ್ಲಿಂದ ಹೇರಲು ಸಾಧ್ಯವೊ ಎಲ್ಲ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನದ ಫಲವಾಗಿಯೇ ಈಗ ಮೇ 4 ರ ಬಳಿಕ ಕೆಲವು ಷರತ್ತಿನೊಂದಿಗೆ ಮದ್ಯ ಮಾರಾಟಕ್ಕೆ ಒಪ್ಪಿಗೆ ಸಿಕ್ಕಿದೆ. ಮದ್ಯ ಮಾರಾಟ ಮಾಡಬೇಕು ಎಂಬ ತೀವ್ರ ಒತ್ತಡದ ನಡುವೆ ಬೇಡ ಎಂಬ ಬೇಡಿಕೆ ಗೌಣವಾಗಿದೆ. ಮದ್ಯದಂಗಡಿ ತೆರೆಯುವುದು ಬೇಡ ಎಂದು ಸರ್ಕಾರದ ಮೇಲೆ ಬೆರಳೆಣಿಕೆಯ ಕೆಲವೇ ಮಠಮಂದಿರಗಳಿಂದ ಒತ್ತಡ ಬಿಟ್ಟರೆ ಜನರಿಂದ ಒತ್ತಡ ಬರುತ್ತಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯಿಂದ ಹಾಗೂ ಶಿರಸಿಯ ಸ್ವರ್ಣವಲ್ಲೀ ಶ್ರೀಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸಾಣೆಹಳ್ಳಿ ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳೂ ಮದ್ಯ ಮಾರಾಟವನ್ನು ಪ್ರಬಲವಾಗಿ ವಿರೋಧಿಸಿದ್ದಾಾರೆ. ಆದರೆ ಮದ್ಯ ಮಾರಾಟದ ಮೂಲಕ ರಾಜ್ಯದ ಬೊಕ್ಕಸಕ್ಕೆ ಬರುವ ಬಹುಮುಖ್ಯ ಆದಾಯದ ಮೂಲವನ್ನು ಸರ್ಕಾರ ಕಳೆದುಕೊಳ್ಳಲು ಇಚ್ಛಿಸುತ್ತದೆಯೇ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.
ಕೊರೋನಾಗಿಂತಲೂ ಮದ್ಯ ವಿಥ್ಡ್ರಾವಲ್ನಿಂದ ಸಾಯೋರೇ ಹೆಚ್ಚು
ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ರಾಜ್ಯದಲ್ಲಿ ಕೊರೋನಾದಿಂದ ಈವರೆಗೆ ಸತ್ತವರ ಸಂಖ್ಯೆ ೨೩. ಆದರೆ ಲಾಕ್ಡೌನ್ ಅವಧಿಯಲ್ಲಿ ಮದ್ಯ ಸಿಗದೇ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡವರ 24!. ಅದರಲ್ಲಿ 10 ಮಂದಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಇನ್ನು ಡಿಪ್ರೆಶನ್ಗೆ ಒಳಗಾದವರ ಕಥೆ ದೇವರಿಗೇ ಪ್ರೀತಿ.
ಕುಡಿತದ ಚಟ ಎಷ್ಟರಮಟ್ಟಿಿಗೆ ಸಮಸ್ಯೆ ತಂದಿದೆಯೆಂದರೆ ಮದ್ಯದಂಗಡಿ ಕಳುವುಗೈದು ಕುಡಿತದ ಚಟ ತೀರಿಸಿಕೊಂಡವರೂ ಇದ್ದಾರೆ. ಲಾಕ್ಡೌನ್ ಆಗುತ್ತಿದ್ದಂತೇ ಕೆಲವರು ಮೊದಲೇ ಬಾಕ್ಸ್ಗಟ್ಟಲೆ ಸಂಗ್ರಹ ಇಟ್ಟವರಿಗೆ ಅಭಾವದ ಬಿಸಿ ತಟ್ಟಿಲ್ಲ. ಶ್ರೀಮಂತರು ನಾಲ್ಕೈದು ಪಟ್ಟು ದುಬಾರಿ ಬೆಲೆ ತೆತ್ತು ಕಾಳಸಂತೆಯಿಂದ ಖರೀದಿಸುತ್ತಿದ್ದಾಾರೆ. ಆದರೆ ಬಡ, ಕೆಳ ಹಂತದ ಕುಡುಕರು ಮಾತ್ರ ಮದಿರೆ ಭಾಗ್ಯವಿಲ್ಲದೆ ಕೊತ ಕೊತ ಕುದಿಯುತ್ತಿದ್ದಾಾರೆ.
ಲಾಕ್ಡೌನ್ ವೇಳೆ ಮದ್ಯ ಮಾರಾಟ ನಿಲ್ಲಿಸಿದ್ದರಿಂದ ರಾಜ್ಯ ಬೊಕ್ಕಸಕ್ಕೆ 2 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅದಕ್ಕಾಗಿಯೇ ತಾರಾತುರಿಯಲ್ಲಿ ಮದ್ಯದಂಗಡಿಯನ್ನು ತೆರೆಯಲು ಸರ್ಕಾರ ಯೋಚಿಸುತ್ತಿಿದೆ. ಕೇಂದ್ರ ಸರ್ಕಾರವೇ ಈ ಬಗ್ಗೆ ಮಾರ್ಗಸೂಚಿ ಪ್ರಕಟಿಸಿರುವುದರಿಂದ ರಾಜ್ಯ ಸರ್ಕಾರ ಇನ್ನೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಿಲ್ಲ.
ಕುಡಿತವೊಂದು ರೋಗ, ಸೂಕ್ತ ಚಿಕಿತ್ಸೆಯಿಂದ ವಾಸಿಯಾಗುತ್ತಾನೆ ರೋಗಿ
ಸಮೀಕ್ಷೆ ನಡೆದಿತ್ತು:
ಲಾಕ್ ಡೌನ್ ಇರುವ ಸಂದರ್ಭ ಮದ್ಯಪಾನ ನಿಷೇಧ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗು ಜನಜಾಗೃತಿ ವೇದಿಕೆ ಒಂದು ಸರ್ವೆನಡೆಸಿತ್ತು. ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸಿದಲ್ಲಿ ಜನರ ಬದುಕು ಹಸನಾಗಲಿದೆ ಎಂಬುದು ಈ ಸರ್ವೆಯಿಂದ ಬಹಿರಂಗಗೊಂಡಿದೆ.
9400 ಜನ ಸೇವಾ ಪ್ರತಿನಿಧಿಗಳಿಂದ ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ನಡೆಸಿದ ಈ ಸರ್ವೇಯಲ್ಲಿ ಶೇ.60ರಷ್ಟು ಜನರು ಮದ್ಯ ನಿಷೇಧದಿಂದ ಗ್ರಾಮದಲ್ಲಿ ಒಳ್ಳೆಯದಾಗಿದೆ ಎಂದರೆ, ಶೇ.34 ಮಂದಿಯಿಂದ ತುಂಬಾ ಒಳ್ಳೆಯದಾಗಿದೆ ಎದಿದ್ದಾರೆ. ಶೇ.89 ಜನರು ತಮ್ಮ ಪ್ರದೇಶದಲ್ಲಿ ಮದ್ಯ ಸಿಗದೇ ಒಳ್ಳೆಯದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾಾರೆ.
ಶೇ. 41ರಷ್ಟು ಜನ ಮದ್ಯ ಸಿಗದೇ ಸಮಾಜದಲ್ಲಿ ಸಂತೋಷ ಹೆಚ್ಚಾಾಗಿದೆ ಎಂದು ಹೇಳಿದ್ದಾರೆ. ಶೇ.67ರಷ್ಟು ಮದ್ಯ ಸಿಗದೇ ಇದ್ದಿದ್ದರಿಂದ ಸಮಾಜದಲ್ಲಿ ಗೊಂದಲ, ಗಲಾಟೆ ಅಥವಾ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ. ಶೇ. 43ರಷ್ಟು ಜನರಿಗೆ ವಿತ್ ಡ್ರಾವಲ್ ಸಮಸ್ಯೆ ಇದೆ ಎಂಬ ಅಂಶ ಪತ್ತೆಯಾಗಿದೆ. ಶೇ.30ರಷ್ಟು ಜನರು ಮಾನಸಿಕ ಖಿನ್ನತೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.12ರಷ್ಟು ಜನರು ಮದ್ಯ ಅಕ್ರಮ ಸೇವನೆ ಬಗ್ಗೆ ಸರ್ವೇ ವೇಳೆ ಮಾಹಿತಿ ನೀಡಿದ್ದಾರೆ. ಮದ್ಯ ಪ್ರಿಯರು, ಮಹಿಳೆಯರು ಸೇರಿ ಹಲವರ ಅಭಿಪ್ರಾಯ ದಾಖಲಿಸಿಕೊಳ್ಳಲಾಗಿತ್ತು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಪರಿಣಾಮಕಾರಿಯಾದ ಸರ್ವೇಕ್ಷಣೆ ನಡೆದಿದ್ದು ಅನೇಕ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಮದ್ಯ ನಿಷೇಧದಿಂದ ಸಮಾಜ ಮತ್ತು ಕುಟುಂಬದಲ್ಲಿ ಶಾಂತಿ ಸ್ಥಾಪನೆಯಾಗಿದೆ. ಹೀಗಾಗಿ ಮದ್ಯ ನಿಷೇಧಿಸಬೇಕು ಎಂದು ಧರ್ಮಸ್ಥಳ ಗ್ರಾಾಮಾಭಿವೃದ್ಧಿ ಯೋಜನೆ ಸರ್ಕಾರವನ್ನು ಒತ್ತಾಯ ಮಾಡಿದೆ. ಅದೇ ರೀತಿ ಶಿರಸಿಯ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತಿ ಶ್ರೀಗಳು ಮುಖ್ಯಮಂತ್ರಿಿಯವರಿಗೆ ಪತ್ರ ಬರೆದಿದ್ದಾಾರೆ. ಆದರೇನು ಮಾಡುವುದು? ಮದ್ಯ ಬೇಕು, ಬೇಗ ಆರಂಭಿಸಿ ಎಂಬವರ ಒತ್ತಡದ ನಡುವೆ ಇದ್ಯಾವ ಲಾಬಿಯೂ ಸರ್ಕಾರದ ಕಿವಿಗೆ ಕೇಳಿಸುತ್ತಿಿಲ್ಲ.
ಡ್ರೈ ರಾಜ್ಯಗಳು
ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲು ಇದು ಸಕಾಲ. ವ್ಯಸನಿಗಳು ಮದ್ಯವನ್ನು ಕುಡಿಯುವವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡರೂ, ಕುಡಿದ ಬಳಿಕ ಮೈಮರೆಯುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಭರವಸೆಯಿಲ್ಲ. ಖರೀದಿಗಾಗಿ ನೂಕುನುಗ್ಗಲು, ಜನದಟ್ಟಣಿ ಸಾಧ್ಯ. ಹಾಗಾಗಿ ಇಷ್ಟು ದಿನ ಕುಡಿಯದೇ ಸುಧಾರಿಸಿಕೊಂಡಿದ್ದಾಾ, ಸಂಪೂರ್ಣ ನಿಷೇಧಿಸಿ ಖಾಯಂ ಆಗಿ ಸುಧಾರಿಸಿಕೊಳ್ಳಲು ವ್ಯಸನಿಗಳಿಗೆ ಸರ್ಕಾರ ಅವಕಾಶ ಒದಗಿಸಬೇಕು. ಮದ್ಯವನ್ನು ನಿಷೇಧಿಸಿದ ಡ್ರೈ ಸ್ಟೇಟ್ಗಳು ದೇಶದಲ್ಲಿ ಸಾಕಷ್ಟು ಇದೆ. ಮಿಜೋರಾಂ, ಗುಜರಾತ್, ಬಿಹಾರ, ನಾಗಾಲ್ಯಾಂಡ್ ಹಾಗೂ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಈಗಾಗಲೇ ನಿಷೇಧಿಸಿ ಮಾದರಿಯಾಗಿವೆ. ಕೇರಳದಲ್ಲಿ ಮದ್ಯ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುತ್ತಿಿಲ್ಲ. ಆ ರಾಜ್ಯಗಳಲ್ಲಿ ಬೊಕ್ಕಸ ಭರ್ತಿಗೆ ಏನೇನು ಕ್ರಮ ಕೈಗೊಂಡಿದ್ದಾರೆ ಎಂದು ಅಭ್ಯಸಿಸಿ ಅದೇ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲು ಇದು ಸಕಾಲ. ಹೆಚ್ಚಿನ ಡಿಪ್ರೆಶನ್ಗೆ ಒಳಗಾದ ವ್ಯಸನಿಗಳಿಗೆ ಸರ್ಕಾರದ ನಿಮಾನ್ಸ್ನಿಂದ ನಿಂದ ಅಥವಾ ಧರ್ಮಸ್ಥಳದಂಥ ಸಂಸ್ಥೆಗಳಿಂದ ಕೌನ್ಸಲಿಂಗ್ ಕೊಡಿಸುವಂಥ ಕಾರ್ಯವಾಗಬೇಕು.
ಆದಾಯಕ್ಕಿಂತ ಅಗೋಚರ ಖರ್ಚು ಹೆಚ್ಚು:
ಮದ್ಯ ಮಾರಾಟದಿಂದ ಸರ್ಕಾಕ್ಕೇನೊ ತಕ್ಷಣಕ್ಕೆ ಆದಾಯ ಬಂದ ಹಾಗೆ ಕಾಣುತ್ತದೆ, ಆದರೆ ಅದರ ದುಷ್ಪರಿಣಾಮಗಳಿಂದ ಬರುವ ಅಗೋಚರ ಖರ್ಚು ಆದಾಯಕ್ಕಿಂತಲೂ ದ್ವಿಗುಣವಾಗಿರುತ್ತದೆ. ಈಗ ನಡೆಯುತ್ತಿಿರುವ ಅಪರಾಧ ಚಟುವಟಿಕೆಗಳಲ್ಲಿ ಶೇ. 70 ಮದ್ಯಪಾನದಿಂದಲೇ ಸಂಭವಿಸುತ್ತಿವೆ ಎಂದು ನಿಮಾನ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಅಪಘಾತ, ಕೊಲೆ, ಸುಲಿಗೆ, ಪೊಲೀಸ್ ಪ್ರಕರಣ, ಕೋರ್ಟ್ ಕೇಸ್ಗಳ ಹೆಚ್ಚಳವಾಗುತ್ತಿವೆ. ಇದು ಸರ್ಕಾರಕ್ಕೆ ಹಾಗೂ ಸರ್ಕಾರವನ್ನು ನಡೆಸುವವರಿಗೆ, ರಾಜಕೀಯ ಪಕ್ಷಗಳಿಗೆ ಗೊತ್ತಿಲ್ಲದೇ ಅಲ್ಲ. ಆದರೂ ತಕ್ಷಣಕ್ಕೆ ಸಿಗುವ ಆದಾಯಕ್ಕಾಗಿ ಮದ್ಯ ಮಾರಾಟ ನಿಷೇಧಿಸುವ ಧೈರ್ಯವನ್ನು ಯಾವ ಪಕ್ಷವೂ ತೋರುತ್ತಿಲ್ಲ.
ಮಗ ಕುಡಿಯುತ್ತಾನೆಂದರೆ ಮುಚ್ಚಿಡಬೇಡಿ, ಸೂಕ್ತ ಚಿಕಿತ್ಸೆ ಕೊಡಿಸಿ
ಮಹಿಳೆಯರೇ ಜಾಗೃತರಾಗಿ:
ದೇಶದ ಕಟ್ಟಕಡೆಯ ಹಳ್ಳಿಗೆ ಶುದ್ಧ ಕುಡಿಯುವ ನೀರು ಇನ್ನೂ ತಲುಪಿಲ್ಲ. ಆದರೆ ಅಂಥ ಹಳ್ಳಿಗೆ ಮದ್ಯದಂಗಡಿ ತಲುಪಿದೆ. ಮುಕ್ತವಾಗಿ ಸಿಗುವ ಮದಿರೆಯ ಚಟದಲ್ಲಿ ಆಧುನಿಕ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆಧುನಿಕ ಲೈಫ್ಸ್ಟೈಲ್ ಯುವತಿಯರನ್ನು ಮಾದಕ ಲೋಕಕ್ಕೆ ಸೆಳೆಯುತ್ತಿದೆ. ಕೆಲ ಕಾರ್ಮಿಕ ಮಹಿಳೆಯರೂ ಮದ್ಯ ಸೇವಿಸವುದು ಗುಟ್ಟಾಗಿ ಉಳಿದಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹಾಗೆ ಮಹಿಳೆಯರು ಜಾಗೃತರಾದರೆ ಸರ್ಕಾರದ ಕಣ್ಣು ತೆರೆಸುವುದು ಅಸಾಧ್ಯದ ಮಾತೇನಲ್ಲ. ಕುಡಿತದಿಂದ ಬರುವ ಆದಾಯದಿಂದ ಅಭಿವೃದ್ಧಿ ಸಾಧಿಸುವುದು ಬೇಕಿಲ್ಲ. ಕುಡಿದು ಕುಡಿದು ಸತ್ತವರ ದುಡ್ಡಿನಲ್ಲಿ ಕನಸಿನಸೌಧ ತೆರೆಯುವುದು ಅಗತ್ಯವಿಲ್ಲವೆಂದು ಮಹಿಳೆಯರು ಸರ್ಕಾರಕ್ಕೆ ಮನಗಾಣಿಸಬೇಕಿದೆ. ಆಗ ಮಾತ್ರ ಮುಂಬರುವ ದಿನಗಳಲ್ಲಿ ಮದ್ಯ ನಿಷೇಧವಾದೀತು. ತನ್ಮೂಲಕ ಕುಟುಂಬ, ಊರು, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ದೇಶವನ್ನು ಉಳಿಸುವ ಹೊಣೆಗಾರಿಕೆ ಮಹಿಳೆಯರು ಹೊರಬೇಕಿದೆ.
ಮಹಿಳೆಯರು ಒಗ್ಗಟ್ಟಾದರೆ ಏನನ್ನೂ ಸಾಧಿಸಲು ಸಾಧ್ಯ. ಮಹಿಳೆಯರ ಹಿತಾಸಕ್ತಿ ಕಾಯುವದಕ್ಕೋಸ್ಕರ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಜಾರಿಯಲ್ಲಿ ತಂದಿದೆ. ಮನಸ್ಸು ಮಾಡಿದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವುದು ಸರ್ಕಾರಕ್ಕೆ ದೊಡ್ಡ ಸವಾಲೇನಲ್ಲ. ಈ ದಿಶೆಯಲ್ಲಿ ಚಿಂತಿಸಬೇಕಿದ