Annabhagya: ಬೆಂಗಳೂರಿನ ಹೊರವಲಯದ ಆನೇಕಲ್ನಲ್ಲಿ ಸರ್ವರ್ ಸಮಸ್ಯೆಯಿಂದ ಅನ್ನಭಾಗ್ಯದ ಅಕ್ಕಿ ವಿತರಣೆ ವಿಳಂಬ ಪರಿಣಾಮದಿಂದಾಗ ಪಡಿತರದಾರರು ಕಿಮೀಗಟ್ಟಲೆ ಸರತಿ ಸಾಲಲ್ಲಿ ನಿಂತು ಪರದಾಡುವಂತಾಗಿದೆ.
ಆನೇಕಲ್ (ಸೆ.16): ಬೆಂಗಳೂರಿನ ಹೊರವಲಯದ ಆನೇಕಲ್ನಲ್ಲಿ ಸರ್ವರ್ ಸಮಸ್ಯೆಯಿಂದ ಅನ್ನಭಾಗ್ಯದ ಅಕ್ಕಿ ವಿತರಣೆ ವಿಳಂಬ ಪರಿಣಾಮದಿಂದಾಗ ಪಡಿತರದಾರರು ಕಿಮೀಗಟ್ಟಲೆ ಸರತಿ ಸಾಲಲ್ಲಿ ನಿಂತು ಪರದಾಡುವಂತಾಗಿದೆ.
ಅನ್ನಭಾಗ್ಯಕ್ಕೆ ಕೈಕೊಟ್ಟ ಸರ್ವರ್
ಕಳೆದ ನಾಲ್ಕು ದಿನಗಳಿದ ಅನ್ನಭಾಗ್ಯದಡಿ ಅಕ್ಕಿ ಪಡೆಯಲು ಫಲಾನುಭವಿಗಳು ಬರುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಅಕ್ಕಿ ವಿತರಣೆಯಾಗುತ್ತಿಲ್ಲ. ಇದರಿಂದ ನ್ಯಾಯಬೆಲೆ ಅಂಗಡಿ ಸುತ್ತಮುತ್ತ ನೂರಾರು ಪಡಿತರದಾರರು ಕಾಯುತ್ತ ಕುಳಿತಿದ್ದಾರೆ. ಮನೆಗೆ ವಾಪಸ್ ಹೋದ್ರೆ ಅಕ್ಕಿ ಸಿಗಲ್ಲ ಎಂಬ ಆತಂಕದಲ್ಲೇ ಬೆಳಗಿನ ನಾಲ್ಕು ಗಂಟೆಯಿಂದಲೇ ಸರತಿ ಸಾಲಲ್ಲಿ ಜನ ನಿಂತಿದ್ದಾರೆ ಆದ್ರೂ ತಾಂತ್ರಿಕ ಸಮಸ್ಯೆ ಬಗೆಹರಿಯುತ್ತಿಲ್ಲ ಅಕ್ಕಿ ಸಿಗುತ್ತಿಲ್ಲ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಿನಿಂದ ಕಾದರೂ ಸಿಗುತ್ತಿಲ್ಲ ಅನ್ನಭಾಗ್ಯದ ಅಕ್ಕಿ
ಫಲಾನುಭವಿಗಳು ಅನ್ನದ ಭಾಗ್ಯದ ಅಕ್ಕಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಅಕ್ಕಿ ವಿತರಣೆ ವಿಳಂಬ, ತಾಂತ್ರಿಕ ಸಮಸ್ಯೆಯಿಂದಾಗಿ ಕಂಗಾಲಾಗಿದ್ದಾರೆ. ನಾಲ್ಕು ದಿನಗಳಿಂದಲೂ ಸರ್ವರ್ ಸಮಸ್ಯೆ ಹೇಳುತ್ತಿರೋ ಸಿಬ್ಬಂದಿ. ಇದುವರೆಗೆ ಯಾವ ಅಧಿಕಾರಿಯೂ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಫಲಾನುಭವಿಗಳು ಆಕ್ರೋಶ ಹೊರಹಾಕಿದ್ದಾರೆ.
ಊಟ ತಿಂಡಿ ಬಿಟ್ಟು ಸರತಿ ಸಾಲಲ್ಲೇ ನಿಂತಿರೋ ಜನ:
ಬೆಳಗಿನ ಜಾವ ಸರ್ವರ್ ಇರುತ್ತದೆ ಎಂದು ಅನ್ನಭಾಗ್ಯ ಅಕ್ಕಿ ಪಡೆಯಲು ಜನ ಬಂದಿದ್ದಾರೆ. ಆದ್ರೆ ಬೆಳಗಿನ ಜಾವದಿಂದಲೂ ಸರ್ವರ್ ಸಮಸ್ಯೆ ಹೇಳ್ತಿರೋ ಸಿಬ್ಬಂದಿ. ಇತ್ತ ಸರತಿ ಸಾಲು ಬಿಟ್ಟು ಕಾಫಿ ಟೀ ತಿಂಡಿಗೂ ಹೋದರೆ ಪಾಳಿ ತಪ್ಪಿ ಮತ್ತ ಹಿಂದೆ ಹೋಗಬೇಕಾಗುತ್ತೆ ಅನ್ನೋ ಆತಂಕದಲ್ಲಿ ನಿಂತಲ್ಲೇ ನಿಂತಿರೋ ಜನರು. ಇಷ್ಟಾದರೂ ಅಕ್ಕಿ ಸಿಗುವ ಯಾವ ಗ್ಯಾರಂಟಿಯೂ ಇಲ್ಲ.
ಸರ್ವರ್ ಸಮಸ್ಯೆಯಿಂದ ಜನ ಹೈರಾಣು
ಸರ್ವರ್ ಸಮಸ್ಯೆಯಿಂದಾಗಿ ಫಲಾನುಭವಿಗಳು ಹೈರಾಣಾಗಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ ಪಾಲಿನ ಅನ್ನಕ್ಕೂ ತಾಂತ್ರಿಕ ಸಮಸ್ಯೆ ಹೇಳ್ತಿದ್ದಾರೆ. ಅಕ್ಕಿ ಕೊಡಿಸಿ ಇಲ್ಲವಾದ್ರೆ ನಮ್ಮ ಸಮಯಕ್ಕಾದ್ರೂ ಬೆಲೆ ಕೊಡಿ. ನಾವು ಅನ್ನ ನೀರು ಬಿಟ್ಟು ಸರತಿ ಸಾಲಲ್ಲಿ ನಿಂತಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ಫಲಾನುಭವಿಗಳು ಕಿಡಿಕಾರಿದ್ದಾರೆ.


