Asianet Suvarna News Asianet Suvarna News

ಚುಂಚಶ್ರೀ ಎದುರು ಕಾಲ ಮೇಲೆ ಕಾಲು ಹಾಕಿದ ಸುರ್ಜೇವಾಲಾಗೆ ಡಿಕೆಶಿ ಪಾಠ!

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿಕೊಟ್ಟಿದ್ದ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳೆದುರು ಕಾಲಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

randeep surjewala and congress leaders meet adichunchanagiri mutt nirmalananda swamiji gvd
Author
First Published Sep 28, 2022, 10:31 AM IST

ನಾಗಮಂಗಲ (ಸೆ.28): ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿಕೊಟ್ಟಿದ್ದ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳೆದುರು ಕಾಲಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭಾರತ್‌ ಜೋಡೊ ಪಾದಯಾತ್ರೆ ಸಂಚರಿಸುವ ಮಾರ್ಗ ಪರಿಶೀಲನೆಗಾಗಿ ಇತ್ತೀಚೆಗೆ ಸುರ್ಜೆವಾಲ, ಡಿ.ಕೆ.ಶಿವಕುಮಾರ್‌, ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಹಲವು ನಾಯಕರು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಭೇಟಿಕೊಟ್ಟಿದ್ದರು. ಈ ವೇಳೆ ಶ್ರೀಗಳೆದುರು ಸುರ್ಜೇವಾಲ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಿದ್ದಂತೆ ತಕ್ಷಣ ಎಚ್ವೆತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸುರ್ಜೇವಾಲ ಅವರಿಗೆ ಶ್ರೀಗಳೆದುರು ಹೇಗೆ ಕುಳಿತುಕೊಳ್ಳಬೇಕೆಂಬುದನ್ನು ತಿಳಿಸಿ ಕೊಡುತ್ತಿದ್ದಂತೆ ಸರಿಪಡಿಸಿಕೊಂಡರು ಎಂದು ತಿಳಿದುಬಂದಿದೆ.

ಯಾವ ತನಿಖೆಯಿಂದಲೂ ನನಗೇನೂ ಮಾಡಕ್ಕಾಗಲ್ಲ: ಡಿಕೆಶಿ

ಭಾರತ್‌ ಜೋಡೋ ಯಾತ್ರೆ ಸ್ಥಳ ವೀಕ್ಷಿಸಿದ ಸುರ್ಜೇವಾಲ: 30 ರಂದು ಭಾರತ್‌ ಜೋಡೋ ಯಾತ್ರೆ ಗುಂಡ್ಲುಪೇಟೆಗೆ ಪ್ರವೇಶಿಸುವ ಹಿನ್ನೆಲೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣಜೀತ್‌ ಸಿಂಗ್‌ ಸುರ್ಜೇವಾಲ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಥಳ ಪರಿಶೀಲನೆ ನಡೆಸಿದರು. ಅಂಬೇಡ್ಕರ್‌ ಭವನದ ಮುಂಭಾಗದ ಆವರಣದಲ್ಲಿ ಸ್ಟೇಜ್‌ ಎಲ್ಲಿ ಹಾಕಬೇಕು. ಎಷ್ಟುಸ್ಥಳದಲ್ಲಿ ಹಾಕಬೇಕು ಎಂದು ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿದರು. ನಂತರ ಮೈಸೂರು-ಊಟಿ ಹೆದ್ದಾರಿಯ ಕಬ್ಬೇಕಟ್ಟೆ ಶನೇಶ್ವರಸ್ವಾಮಿ ದೇವಸ್ಥಾನದ ಬಳಿಯ ಜಾಗದಲ್ಲಿ ಊಟ ಹಾಗೂ ಸಂವಾದ ನಡೆವ ಸ್ಥಳ ಖುದ್ದು ವೀಕ್ಷಿಸಿದರು.

ಬೇಗೂರು ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆಯ ಬಳಿ ರಾಹುಲ್‌ಗಾಂಧಿ ಹಾಗೂ ಪಾದಯಾತ್ರೆ ಯಾತ್ರಿಗಳು ಹಾಗೂ ಕಾಂಗ್ರೆಸ್‌ ನಾಯಕರು ವಾಸ್ತವ್ಯ ಹೂಡುವ ಸ್ಥಳ ಹಾಗೂ ಅ.1ರಂದು ಬೆಳಗ್ಗೆ ಪಾದಯಾತ್ರೆ ವೇಳೆ ತಿಂಡಿ ನೀಡುವ ಸ್ಥಳ ವೀಕ್ಷಿಸಿದರು. ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಕಾಂಗ್ರೆಸ್‌ ಮುಖಂಡ ಎಚ್‌.ಎಂ.ಗಣೇಶಪ್ರಸಾದ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಸಂಸದ ಎ.ಸಿದ್ದರಾಜು, ಮಾಜಿ ಶಾಸಕ ಎಸ್‌.ಬಾಲರಾಜು,  ಸೇರಿದಂತೆ ಕಾಂಗ್ರೆಸ್‌ ಮುಖಂಡರು ಇದ್ದರು.

ಪಕ್ಷಾತೀತ ಹೆಜ್ಜೆ ಹಾಕಿದರೆ ದೇಶಕ್ಕೆ ಕೊಡುಗೆ: ಯಾತ್ರೆಯಲ್ಲಿ ಪಕ್ಷಾತೀತ ಹೆಜ್ಜೆ ಹಾಕಿದರೆ ದೇಶಕ್ಕೆ ಕೊಡುಗೆ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿ, ತ್ರಿವರ್ಣ ಧ್ವಜ ಹಾಗೂ ಸಂವಿಧಾನದ ಬಗ್ಗೆ ಗೌರವವಿರುವ ಯಾತ್ರೆಗೆ ಆಹ್ವಾನಿಸಿದ್ದೇವೆ.ಯುವಕರು, ನಿರುದ್ಯೋಗಿ ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ಹಾಗೂ ಎಲ್ಲಾ ವರ್ಗಗಳಿಗೋಸ್ಕರ ದೊಡ್ಡಯಾತ್ರೆ ಹಾಗೂ ಹೋರಾಟದಲ್ಲಿ ಭಾಗವಹಿಸಿ ಎಂದರು.

ಬೊಮ್ಮಾಯಿ ಜಾತಿ ಮೇಲೆ ಸಿಎಂ ಆಗಿದ್ದಾರಾ?: ಡಿ.ಕೆ.ಶಿವಕುಮಾರ್‌

30ರಂದು ಬೆಳಗ್ಗೆ 9ರೊಳಗೆ ಯಾತ್ರೆ ಗುಂಡ್ಲುಪೇಟೆಗೆ ಪ್ರವೇಶಿಸಲಿದೆ. ಬೆಳಗ್ಗೆ 9ಕ್ಕೆ ನಾಯಕರು, ಸ್ಥಳೀಯ, ಜಿಲ್ಲೆಯ ನಾಯಕರೊಂದಿಗೆ ನಡಿಗೆ ಶುರುವಾಗಲಿದೆ ಎಂದರು. ಯಾತ್ರೆಗೆ ಬರುವ ಮಂದಿ ಬೆಳಗ್ಗೆ 6.30 ಗಂಟೆಯೊಳಗೆ ಸಿದ್ದರಿರಬೇಕು. ಬಿಸಿಲಿರುವ ಕಾರಣ ಬೆಳಗ್ಗೆ 11 ಗಂಟೆಗೆ ನಡಿಗೆ ನಿಲ್ಲಲಿದೆ ಎಂದರು. ಜಿಲ್ಲೆಯಲ್ಲಿ ಆಕ್ಸಿಜನ್‌ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರೊಂದಿಗೆ ರಾಹುಲ್‌ಗಾಂಧಿ ಸಂವಾದ ನಡೆಸಲಿದ್ದಾರೆ ನಂತರ ಊಟ ಮುಗಿಸಿ ಸಂಜೆ ನಾಲ್ಕು ಗಂಟೆಗೆ ನಡಿಗೆ ಶುರುವಾಗಲಿದೆ ಎಂದರು.

Follow Us:
Download App:
  • android
  • ios