Asianet Suvarna News Asianet Suvarna News

ಬೊಮ್ಮಾಯಿ ಜಾತಿ ಮೇಲೆ ಸಿಎಂ ಆಗಿದ್ದಾರಾ?: ಡಿ.ಕೆ.ಶಿವಕುಮಾರ್‌

ಭ್ರಷ್ಟಾಚಾರದ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾತಿಯನ್ನು ಎಳೆದು ತರುವುದು ಸರಿಯಲ್ಲ. ನಾವು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಟಾರ್ಗೆಟ್‌ ಮಾಡಿದ್ದೇವೆ. ಅವರು ಅದರ ಮುಖ್ಯಸ್ಥರಾಗಿದ್ದಾರೆ. 

Kpcc President DK Shivakumar Outraged Against CM Basavaraj Bommai gvd
Author
First Published Sep 27, 2022, 3:00 AM IST

ಬೆಂಗಳೂರು (ಸೆ.27): ‘ಭ್ರಷ್ಟಾಚಾರದ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾತಿಯನ್ನು ಎಳೆದು ತರುವುದು ಸರಿಯಲ್ಲ. ನಾವು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಟಾರ್ಗೆಟ್‌ ಮಾಡಿದ್ದೇವೆ. ಅವರು ಅದರ ಮುಖ್ಯಸ್ಥರಾಗಿದ್ದಾರೆ. ಬೊಮ್ಮಾಯಿ ಅವರೇನು ಜಾತಿ ಮೇಲೆ ಮುಖ್ಯಮಂತ್ರಿ ಆಗಿದ್ದಾರಾ?’ ಹೀಗಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ವ್ಯಾಪಕ ಭ್ರಷ್ಟಾಚಾರ ಹಾಗೂ ಸರ್ಕಾರದ ವೈಫಲ್ಯಗಳನ್ನು ಮಾತ್ರ ನಾವು ಪ್ರಸ್ತಾಪಿಸುತ್ತಿದ್ದೇವೆ. ಹೀಗಾಗಿ ಇದರಲ್ಲಿ ಜಾತಿಯ ಪ್ರಶ್ನೆಯೇ ಇಲ್ಲ. 

ಬೊಮ್ಮಾಯಿ ಅವರು ಜಾತಿ ಮೇಲೆ ಮುಖ್ಯಮಂತ್ರಿಯಾಗಿಲ್ಲ. ಸಂವಿಧಾನದ ಆಧಾರದ ಮೇಲೆ ಮುಖ್ಯಮಂತ್ರಿಯಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಇದ್ದರೆ ಮೊದಲು ಅಕ್ರಮಗಳನ್ನು ತನಿಖೆಗೆ ವಹಿಸಲಿ ಎಂದು ಕಿಡಿಕಾರಿದರು. ನಾವು ಎಂದೂ ಜಾತಿ ವಿಚಾರ ಪ್ರಸ್ತಾಪಿಸಿಲ್ಲ. ಹೀಗಿದ್ದರೂ ಜಾತಿ ಹೆಸರು ಹೇಳಿ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಯತ್ನಿಸುವುದು ಸರಿಯಲ್ಲ. ಅವರು ಏನೇ ಮಾಡಿದರೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಭಾರತ ಐಕ್ಯತಾ ಯಾತ್ರೆಗೆ ಸೋನಿಯಾ, ಪ್ರಿಯಾಂಕಾ ಭಾಗಿ: ಡಿ.ಕೆ.ಶಿವಕುಮಾರ್‌

ಸರ್ಕಾರಕ್ಕೆ ಜನರ ಜೀವ ರಕ್ಷಣೆ ಸಾಧ್ಯವಿಲ್ಲ: ಆ್ಯಂಬುಲೆನ್ಸ್‌ ಸೇವೆ ಸ್ಥಗಿತದ ಬಗ್ಗೆ ಪತ್ರಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದಲ್ಲಿ ರೋಗಿಗಳು, ರೈತರು, ಕಾರ್ಮಿಕರು ಸೇರಿ ಯಾರಿಗೂ ರಕ್ಷಣೆಯಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸರ್ಕಾರ ವಿಫಲವಾಗಿದೆ. ನಾವು ಆಡಳಿತ ನಡೆಸುತ್ತಿಲ್ಲ, ಕೇವಲ ತಳ್ಳುತ್ತಿದ್ದೇವಷ್ಟೇ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೇ ಹೇಳಿದ್ದಾರೆ. ಹೀಗಾಗಿ ಈ ಸರ್ಕಾರದಿಂದ ಜನರ ಜೀವ ರಕ್ಷಣೆ ಸಾಧ್ಯವಿಲ್ಲ ಎಂದರು.

ರಾಹುಲ್‌ ಯಾತ್ರೆ ಸಿದ್ಧತೆಗೆ ಡಿಕೆಶಿ ಸಭೆ: ರಾಜ್ಯದಲ್ಲಿ ಸೆ.30ರಿಂದ ಆರಂಭವಾಗಲಿರುವ ಭಾರತ ಐಕ್ಯತಾ ಯಾತ್ರೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಶನಿವಾರ ಅಂತಿಮ ಹಂತದ ಪೂರ್ವ ಸಿದ್ಧತೆ ಸಭೆ ನಡೆಸಲಾಗಿದ್ದು, ಈ ಬಾರಿ ಸಭೆಗೆ ಖುದ್ದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಪ್ತ ತಂಡದ ಪ್ರತಿನಿಧಿಗಳೇ ಭಾಗವಹಿಸಿ ಪೂರ್ವ ತಯಾರಿ ಪರಿಶೀಲಿಸಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಸಂಸದ ಡಿ.ಕೆ.ಸುರೇಶ್‌ ನಿವಾಸದಲ್ಲಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಐಕ್ಯತಾ ಯಾತ್ರೆಯ ರಾಷ್ಟ್ರೀಯ ಸಂಯೋಜಕ ಕೆ.ಬಿ.ಬೈಜು ಸೇರಿದಂತೆ ರಾಹುಲ್‌ ಗಾಂಧಿ ಆಪ್ತ ಸಹಾಯಕರು ಭಾಗವಹಿಸಿದ್ದರು. 

PayCM Posters: ಪೇಸಿಎಂ ಪೋಸ್ಟರ್‌ ಅಂಟಿಸ್ತೀವಿ: ಡಿಕೆಶಿ, ಸಿದ್ದು ಸವಾಲ್‌

ಜತೆಗೆ ವಿದಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಿ ಅಂತಿಮ ಹಂತದ ಸಿದ್ಧತೆಗಳ ಕುರಿತು ಮಾಹಿತಿ ಒದಗಿಸಿದರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ವಿವಿಧ ಜವಾಬ್ದಾರಿಗಳ ನಿಭಾಯಿಸಲು ಹಿರಿಯ ನಾಯಕರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಜತೆಗೆ, ಅಗತ್ಯವಿರುವ ಎಲ್ಲಾ ಸಹಕಾರವನ್ನೂ ಒದಗಿಸಲಾಗಿದೆ. ಉಳಿದಂತೆ ಸಮಿತಿಗಳಿಗೆ ಪೂರಕವಾಗಿ ಕೆಲಸ ಮಾಡುವಂತೆ ಹಾಗೂ ಜನರನ್ನು ಸೇರಿಸುವ ಸಲುವಾಗಿ ಕಾಂಗ್ರೆಸ್‌ ನಾಯಕರು, ಪದಾಧಿಕಾರಿಗಳಿಗೆ ಜವಾಬ್ದಾರಿಗಳನ್ನು ನಿಭಾಯಿಸಲಾಗಿದೆ. ಎಲ್ಲರೂ ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಆದೇಶವನ್ನೂ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios