ರಾಜ್ಯ ಅಬಕಾರಿ ಇಲಾಖೆಯಿಂದ ಕೇವಲ 47 ಗಂಟೆಗಳಲ್ಲಿ 14,275 ಲೈಸೆನ್ಸ್‌ಗಳನ್ನು ನವೀಕರಿಸಿ ದಾಖಲೆ ನಿರ್ಮಿಸಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಆರ್. ಬಿ. ತಿಮ್ಮಾಪುರ ತಿಳಿಸಿದ್ದಾರೆ. ಇತರೆ ಇಲಾಖಾ ಕೆಲಸಗಳನ್ನು ಮಾಡದೇ ನಿದ್ದೆ ಮಾಡುವುದೇಕೆ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು (ಫೆ.10): ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಕೇವಲ 47 ಗಂಟೆಗಳಲ್ಲಿ 14,275 ಲೈಸೆನ್ಸ್‌ಗಳನ್ನು ನವೀಕರಿಸುವ ಮೂಲಕ ಇಲಾಖೆ ಹೊಸ ದಾಖಲೆ ಬರೆದಿದೆ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ನಡೆದ ಇಲಾಖೆಯ ಪ್ರಮುಖ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಸನ್ನದು (License) ಪಡೆಯುವಲ್ಲಿ ಆಗುತ್ತಿದ್ದ ವಿಳಂಬ ಮತ್ತು ಕಿರುಕುಳ ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 'ಈ ಹಿಂದೆ ಸಿಎಲ್-7 ಲೈಸೆನ್ಸ್ ಪಡೆಯಲು ಅರ್ಜಿದಾರರು ಸುಮಾರು 16 ಟೇಬಲ್‌ಗಳಿಗೆ ಅಲೆಯಬೇಕಿತ್ತು. ಈ ಅಲೆದಾಟವನ್ನು ತಪ್ಪಿಸಲು ನಾವು ಆ ಸಂಖ್ಯೆಯನ್ನು ಕೇವಲ 7 ಟೇಬಲ್‌ಗಳಿಗೆ ಸೀಮಿತಗೊಳಿಸಿದ್ದೇವೆ. ಇಡೀ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಮಾಡಲಾಗುತ್ತಿದೆ' ಎಂದು ಸಚಿವರು ವಿವರಿಸಿದರು. ಜೊತೆಗೆ, ಬಾರ್ ಲೈಸೆನ್ಸ್‌ಗಳನ್ನು ರಿನಿವಲ್ ಮಾಡಿಕೊಳ್ಳುವುದಕ್ಕೂ ಪರದಾಡಬೇಕಿತ್ತು. ಆದರೆ, ಅದನ್ನೂ ಸರಳೀಕೃತಗೊಳಿಸಿ ಈ ಬಾರಿ ಕೇವಲ 47 ಗಂಟೆಗಳಲ್ಲಿ 14,275 ಲೈಸೆನ್ಸ್‌ಗಳನ್ನು ನವೀಕರಿಸುವ ಮೂಲಕ ಇಲಾಖೆ ಹೊಸ ದಾಖಲೆ ಬರೆದಿದೆ ಎಂದು ತಿಳಿಸಿದರು.

ಅಧಿಕಾರಿಗಳ ಮೇಲೆ ಕಠಿಣ ಕ್ರಮ:

ಇಲಾಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ಲೋಕಾಯುಕ್ತದಲ್ಲಿ 54 ಪ್ರಕರಣಗಳು ದಾಖಲಾಗಿದ್ದು, ಇಲಾಖೆ ಹಂತದಲ್ಲಿ 85 ಪ್ರಕರಣಗಳು ದಾಖಲಾಗಿವೆ. ಒಟ್ಟು 158 ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ. 'ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಮೇಲೆ ಇಲಾಖಾ ವಿಚಾರಣೆ ಬಾಕಿ ಇದ್ದರೆ, ಅಂತಹವರಿಗೆ ಯಾವುದೇ ಕಾರಣಕ್ಕೂ ಎಕ್ಸಿಕ್ಯೂಟಿವ್ ಪೋಸ್ಟ್ (ಕಾರ್ಯಕಾರಿ ಹುದ್ದೆ) ನೀಡುವುದಿಲ್ಲ' ಎಂದು ಸಚಿವರು ಎಚ್ಚರಿಸಿದರು.

ವರ್ಗಾವಣೆಯಲ್ಲಿ ಪಾರದರ್ಶಕತೆ

ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯಲು ಇನ್ನು ಮುಂದೆ 'ಕೌನ್ಸೆಲಿಂಗ್' ಮೂಲಕ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ವರ್ಗಾವಣೆ ನಂತರ ಲೈಸೆನ್ಸ್ ರಿನೀವಲ್ ವಿಚಾರದಲ್ಲಿ ಅಂಗಡಿಯವರಿಗೆ ಆಗುತ್ತಿದ್ದ ತೊಂದರೆಗಳನ್ನು ಸಚಿವರು ಒಪ್ಪಿಕೊಂಡಿದ್ದು, ಅದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಜಸ್ವ ಸಂಗ್ರಹ ಮತ್ತು ಅಕ್ರಮ ತಡೆ

ಚಾಲ್ತಿ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 43,000 ಕೋಟಿ ರೂಪಾಯಿ ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದ್ದು, ಈವರೆಗೆ 34,235 ಕೋಟಿ ರೂಪಾಯಿ ಸಂಗ್ರಹವಾಗಿದೆ. ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಸೇಂದಿ ಮಾರಾಟ ಮತ್ತು ಹೊರ ರಾಜ್ಯಗಳಿಗೆ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುವುದನ್ನು ತಡೆಗಟ್ಟಲು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗಡಿ ಭಾಗಗಳಲ್ಲಿ ಕಣ್ಗಾವಲು ಹೆಚ್ಚಿಸಲು ಮತ್ತು ಇಲಾಖೆಯ ತೊಡಕುಗಳನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಮ್ಮಾಪುರ ತಿಳಿಸಿದರು.

ಬೇರೆ ಕೆಲಸಕ್ಕೆ ಕರಿಬೇಡಿ, ಬಾರ್ ಕೆಲಸಕ್ಕೆ ಮಾತ್ರ ಮರಿಬೇಡಿ

ಆದರೆ, ಸಾರ್ವಜನಿಕರ ಕೆಲವೊಂದು ಕೆಲಸ ಕಾರ್ಯಗಳನ್ನು ಮಾಡಬೇಕಾದಲ್ಲಿ ಸರ್ಕಾರದ ಮುಂದೆ ಹೋಗಿ ಪ್ರತಿಭಟನೆ ಮಾಡಿದರೂ ತಗ್ಗುವುದಿಲ್ಲ. ಇನ್ನು ಒಂದು ರೇಷನ್ ಕಾರ್ಡ್ ಪಡೆಯಲು ಅರ್ಜಿ ಹಾಕಿ 4 ವರ್ಷ ಕಳೆದರೂ ಜನರಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಬೇರೆ ಬೇರೆ ಇಲಾಖೆಯ ಸುದ್ದಿಗಳನ್ನು ಬಿಡಿ ಇದೇ ಅಬಕಾರಿ ಇಲಾಖೆಯ ಒಂದು ಮದ್ಯದಂಗಡಿಯನ್ನು ಮುಚ್ಚುವಂತೆ ಜನರು ಹತ್ತಾರು ಬಾರಿ ಸರ್ಕಾರಕ್ಕೆ ಅರ್ಜಿ ಕೊಟ್ಟರೂ, ಪ್ರತಿಭಟನೆ ಮಾಡಿದರೂ ಕ್ಯಾರೇ ಎನ್ನದೇ ವರ್ಷಾನುಗಟ್ಟಲೆ ಅಲೆದಾಡಿಸುತ್ತಾರೆ. ಆದರೆ, ಬಾರ್ ಲೈಸೆನ್ಸ್ ರಿನಿವಲ್ ಮಾತ್ರ ಕೇವಲ 47 ಗಂಟೆಗಳಲ್ಲಿ ಮಾಡಿ ಆದಾಯಕ್ಕೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜನರ ಹಣ ಲೂಟಿಗೆ ಸರ್ಕಾರ ಎಷ್ಟು ವೇಗವಾಗಿ ಬೇಕಾದರೂ ಕೆಲಸ ಮಾಡುತ್ತದೆ ಎಂಬುದು ಮದ್ಯಪ್ರಿಯರ ಅಭಿಪ್ರಾಯ ಆಗಿದೆ.