Asianet Suvarna News Asianet Suvarna News

ರಮೇಶ್ ಜಾರಕಿಹೊಳಿ ವಿಡಿಯೋ ಅಸಲಿ ಅಂತ ಸಾಬೀತಾದರೆ ರೇಪ್‌ ಕೇಸ್‌!

ವಿಡಿಯೋ ಅಸಲಿ ಅಂತ ಸಾಬೀತಾದರೆ ರೇಪ್‌ ಕೇಸ್‌| ರಕ್ಷಣೆ ನೀಡಲೆಂದೇ ಯುವತಿಯನ್ನು ಹುಡುಕುತ್ತಿದ್ದೇವೆ| ಯುವತಿ ಪತ್ತೆಗೆ 22 ಅಧಿಕಾರಿಗಳ ತಂಡ: ಬೊಮ್ಮಾಯಿ

Ramesh Jarkiholi CD Scam Will Book Rape Case if it Proves Real Basavaraj Bommai pod
Author
Bangalore, First Published Mar 23, 2021, 8:00 AM IST

ವಿಧಾನಸಭೆ(ಮಾ.23): ಮಾಜಿ ಸಚಿವರ ವಿರುದ್ಧದ ಸಿ.ಡಿ. ಪ್ರಕರಣದಲ್ಲಿ ಸತ್ಯ ಹೊರಗೆ ಬರಬೇಕು ಎಂಬ ಉದ್ದೇಶದಿಂದಲೇ ಎಸ್‌ಐಟಿ ರಚಿಸಿದ್ದೇವೆ. ರಮೇಶ್‌ ಜಾರಕಿಹೊಳಿ ಅವರ ಪಾತ್ರವನ್ನೂ ತನಿಖೆ ಮಾಡುತ್ತಿದ್ದು, ತನ್ನನ್ನು ಬಳಸಿಕೊಂಡಿದ್ದಾರೆ ಎಂದಿರುವ ಯುವತಿಯ ವಿಡಿಯೋ ಅಸಲಿ ಎಂಬುದು ಸಾಬೀತಾದರೆ ಕೂಡಲೇ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸಿ.ಡಿ. ಪ್ರಸ್ತಾಪಕ್ಕೆ ಸರ್ಕಾರದ ಪರ ಉತ್ತರ ನೀಡಿದ ಅವರು, ಈಗಾಗಲೇ ಪ್ರಕರಣದ ಬಗ್ಗೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಎಸ್‌ಐಟಿ ರಚಿಸಿ ಎಲ್ಲಾ ಎಫ್‌ಐಆರ್‌ಗಳನ್ನು ಎಸ್‌ಐಟಿಗೆ ರವಾನಿಸಿದ್ದೇವೆ. ಪ್ರಕರಣದಲ್ಲಿ ಯಾರಾರ‍ಯರು ಭಾಗಿಯಾಗಿದ್ದಾರೋ ಎಲ್ಲರ ವಿರುದ್ಧವೂ ಕ್ರಮವಾಗಲಿದೆ. ಯುವತಿಯ ಹೇಳಿಕೆ ವಿಡಿಯೋವನ್ನು ಸೈಬರ್‌ ತನಿಖೆಗೆ ಕಳುಹಿಸಿದ್ದೇವೆ. ವಿಡಿಯೋ ಅಸಲಿ ಎಂದಾದರೆ ಐಪಿಸಿ ಸೆಕ್ಷನ್‌ 376 ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ವಿಡಿಯೋದಲ್ಲಿ ಯುವತಿ ರಕ್ಷಣೆ ಬೇಕು ಎಂದಿದ್ದಾಳೆ. ಯುವತಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಯುವತಿಗಾಗಿ ಹುಡುಕುತ್ತಿದ್ದೇವೆ. 20 ದಿನಗಳಾದರೂ ಯುವತಿ ಪತ್ತೆಯಾಗಿಲ್ಲ. ಯುವತಿ ಪತ್ತೆಗೆ 22 ಅಧಿಕಾರಿಗಳ 5 ತಂಡ ರಚಿಸಿದ್ದೇವೆ. ಯುವತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡುತ್ತಿದ್ದಾಳೆ. ದೆಹಲಿ, ಬೆಳಗಾವಿ, ಗೋವಾ, ಭೋಪಾಲ್‌ ಎಲ್ಲಾ ಕಡೆ ಹುಡುಕಿದ್ದೇವೆ. ಒಂದು ಕಡೆ ನಿಲ್ಲದೆ ತಪ್ಪಿಸಿಕೊಂಡು ಹೋಗುತ್ತಿದ್ದಾಳೆ. ಪತ್ತೆಗೆ ಪ್ರಯತ್ನ ನಡೆದಿದೆ ಎಂದರು.

ಇದೇ ವೇಳೆ ವಿಡಿಯೋದಲ್ಲಿ ತಾನು 3 ಬಾರಿ ಆತ್ಮಹತ್ಯೆ ಯತ್ನ ಹಾಗೂ ತನ್ನ ತಂದೆ, ತಾಯಿ ಎರಡು ಬಾರಿ ಆತ್ಮಹತ್ಯೆ ಯತ್ನ ಮಾಡಿದ್ದಾಗಿ ಹೇಳಿದ್ದಾಳೆ. ಅವರ ತಂದೆ ನೀಡಿರುವ ದೂರಿನಲ್ಲಿ ಈ ವಿಷಯ ಹೇಳಿಲ್ಲ. ಇನ್ನು ರಮೇಶ್‌ ಜಾರಕಿಹೊಳಿ ಅವರೇ ವಿಡಿಯೋ ಬಿಡುಗಡೆ ಮಾಡಿದ್ದಾರೆ ಹೇಳಿದ್ದಾಳೆ. ಅವರ ವಿಡಿಯೋವನ್ನು ಅವರೇ ಬಿಡುಗಡೆ ಮಾಡಿ ಸಚಿವ ಸ್ಥಾನ ಕಳೆದುಕೊಳ್ಳಲು ಸಾಧ್ಯವೇ ಎಂದೂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ತನ್ನನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದಾಳೆ. ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಲೂ ಅಪರಾಧ ಸಾಬೀತಾಗಬೇಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಬಸವರಾಜ ಬೊಮ್ಮಾಯಿ, ಹಾಗಾದರೆ ನೀವು ಎಚ್‌.ವೈ. ಮೇಟಿ ವಿರುದ್ಧ ಆರೋಪ ಬಂದಾಗ 376 ಅಡಿ ಅತ್ಯಾಚಾರ ಪ್ರಕರಣ ಏಕೆ ದಾಖಲಿಸಿಲ್ಲ? ಸಂತ್ರಸ್ತೆ ದೂರು ಸಹ ನೀಡಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಮರು ಪ್ರಶ್ನಿಸಿ, ಸತ್ಯ ಹೊರಗೆ ಬರಬೇಕು ಎಂಬ ಕಾರಣಕ್ಕಾಗಿಯೇ ಎಸ್‌ಐಟಿ ರಚಿಸಿದ್ದೇವೆ. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಆರೂ ಸಚಿವರಿಗೆ ಕಾನೂನಿನಲ್ಲಿ ಅವಕಾಶವಿರುವುದನ್ನು ಬಳಸಿಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.

Follow Us:
Download App:
  • android
  • ios