ರಾಮಲಿಂಗಾರೆಡ್ಡಿಯನ್ನು ಡಿಸಿಎಂ ಮಾಡುವಂತೆ ಪಟ್ಟು, ಅದಾಗಲ್ಲ ರೆಡ್ಡಿ ನಿಗಮ ಮಾಡ್ತೀನೆಂದ ಸಿಎಂ ಸಿದ್ದರಾಮಯ್ಯ!
ರಾಮಲಿಂಗಾರೆಡ್ಡಿ ಅವರನ್ನು ಡಿಸಿಎಂ ಮಾಡಿ ಎಂದಿದ್ದಕ್ಕೆ, ನನ್ನಿಂದ ಅದಾಗಲ್ಲ. ಆದ್ರೆ ನಾನು ರೆಡ್ಡಿ ಅಭಿವೃದ್ಧಿ ನಿಗಮ ಮಾಡ್ತೀನೆಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಬೆಂಗಳೂರು (ಜ.19): ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದಿಂದ ಆಯೋಜನೆ ಮಾಡಲಾಗಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಸಭಿಕರು ಕೂಗಿದರು. ನಿಮ್ಮ ಅಭಿಪ್ರಾಯವನ್ನು ನಾನು ಹೈಕಮಾಂಡ್ ಮುಂದಿಡುತ್ತೇನೆ. ಆದರೆ, ರೆಡ್ಡಿ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಾಡುತ್ತೇನೆ ಎಂದು ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭಿಕರು ರಾಮಲಿಂಗರೆಡ್ಡಿಯವರನ್ನ ಡಿಸಿಎಂ ಮಾಡಿ ಅಂತ ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು ನಾನು ಏನು ಹೇಳೋಕೆ ಆಗಲ್ಲ. ಹೈಕಮಾಂಡ್ ಗೆ ನಿಮ್ಮ ಮಾತನ್ನು ಹೇಳ್ತೀನಿ. ಆದರೆ, ಈಗ ನಾನು ರೆಡ್ಡಿ ಜನಾಂಗ ಅಭಿವೃದ್ಧಿ ನಿಗಮ ಮಾಡ್ತೀನಿ ಎಂದು ಹೇಳಿದರು.
ಮುಂದುವರೆದು ನಾನು ಸಿಎಂ ಆಗಿರುವಾಗ ವೇಮನ ಜಯಂತಿಯನ್ನ ಸರ್ಕಾರದಿಂದ ಆಚರಣೆ ಮಾಡಲು ಆದೇಶ ಹೊರಡಿಸಿದ್ದೆನು. ಆಗಿನಿಂದ ಪ್ರತಿ ವರ್ಷ ಜನವರಿ 19ರಂದು ಇಡಿ ರಾಜ್ಯದಲ್ಲಿ ಆಚರಣೆ ನಡೆಯುತ್ತದೆ. ನಾನು ಅನೇಕ ಸಮಾಜ ಸುಧಾರಕರು, ದಾಸರ, ಸಂತರ, ಶರಣರ ಜಯಂತಿಗಳನ್ನ ಆಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಕಾರಣ ಇವರು ಯಾರು ಕೂಡಾ ಯಾವುದೇ ಜಾತಿ ಧರ್ಮಗಳಿಗೆ ಸೇರಿದವರಲ್ಲ ಎಂದರು.
ಕೆಎಸ್ಆರ್ಟಿಸಿ ಉದ್ಯೋಗ: ಎಂಟು ವರ್ಷಗಳಲ್ಲಿ 13,888 ನೌಕರರ ನಿವೃತ್ತಿ, ಕೇವಲ 262 ನೇಮಕಾತಿ
ಗಾಂಧಿ, ಅಂಬೇಡ್ಕರ್ ಇವರೆಲ್ಲರೂ ವಿಶ್ವ ಮಾನವರು. ಇಡಿ ಸಮಾಜವನ್ನು ಕುಟುಂಬವಾಗಿ ನೋಡಿದವರು. ನಾವೆಲ್ಲರೂ ಮನುಷ್ಯ, ಮನುಷ್ಯ ಮನುಷ್ಯರನ್ನ ಪ್ರೀತಿಸಬೇಕು. ಅಸ್ಪೃಶ್ಯತೆ, ಅಸಮಾನತೆ ಹೋಗಿಸಲು ಹೋರಾಟ ಮಾಡಿದವರು. ಸಮಾಜದ ಅಂಕುಡೊಂಕು ಸರಿ ಮಾಡಿದವರು. ಮಾನವ ಧರ್ಮ ಬಹಳ ಮುಖ್ಯ. ವೇಮನರು ಏನು ಹೇಳ್ತಾರೆ ಮಾನವರು ಎಲ್ಲ ಒಂದೇ ನಾವು ಹುಟ್ಟುವಾಗಿ ಮನುಷ್ಯರಾಗಿ ಹುಟ್ಟಿರುತ್ತೇವೆ. ಬೆಳೆಯುತ್ತಾ ಅಲ್ಪ ಮಾನವರಾಗ್ತಾರೆ ಎಂಬುದನ್ನೇ ವೇಮನರು ಹೇಳಿದ್ದಾರೆ. ನಾವೆಲ್ಲರೂ ವಿಶ್ವಮಾನವರು ಆಗಬೇಕು ಎಂದರು.
ಮಹಾಯೋಗಿ ವೇಮನ ಅವರು ರೆಡ್ಡಿ ಜನಾಂಗಕ್ಕೆ ಸೀಮಿತವಾಗಿರಲಿಲ್ಲ. ರೆಡ್ಡಿ ಜನಾಂಗದವರು ಆಚರಣೆ ಮಾಡಿದರೆ ಅವರಿಗೆ ಮಾತ್ರ ಸೀಮಿತವಾಗುತ್ತಾರೆ. ನಾವು ಕುರುಬ ಜನಾಂಗದಲ್ಲಿ ಹುಟ್ಟು ಬೇಕು ಅಂತ ಅರ್ಜಿ ಹಾಕಿದ್ದೆನಾ? ಆಕಸ್ಮಿಕವಾಗಿ ನಾನು ಹುಟ್ಟಿದ್ದು ಅಲ್ಲಿ ಜಾತಿ ಇತ್ತು. ವಿದ್ಯಾವಂತರು ಸಹ ಜಾತಿವಾದಿಗಳಾಗಿದ್ದಾರೆ. ಜ್ಞಾನ ಗಳಿಸದ ಮೇಲೆ ವೈಚಾರಿಕ ಇರಬೇಕು ಅಲ್ವ. ಇದಕ್ಕಾಗಿ ವೇಮನ ಸಂದೇಶ ಸಮಾಜಕ್ಕೆ ಹೋಗಬೇಕು. ಜನರು ಚಿಂತನೆ ಮಾಡಿ ಬದಲಾವಣೆ ಆಗ್ಲಿ ಅಂತ ಜಯಂತಿ ಮಾಡ್ತಾ ಇದ್ದೇವೆ. ರೆಡ್ಡಿ ಜನಾಂಗ ಖುಷಿ ಪಡಲಿ ಅಂತ ಈ ಕಾರ್ಯಕ್ರಮ ಮಾಡಿಲ್ಲ ಎಂದರು.
Bengaluru: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿಗಳು
ನಾನು ಅಧಿಕಾರಕ್ಕೆ ಬರುವವರೆಗೆ ಕೆಸಿ ರೆಡ್ಡಿ ಪ್ರತಿಮೆ ಮಾಡಿರಲಿಲ್ಲ. ನಾನು ತೀರ್ಮಾನ ಮಾಡಿ ವಿಧಾನಸೌಧದ ಮುಂದೆ ಪ್ರತಿಮೆ ಮಾಡಿದ್ದೇನೆ. ಈ ರಾಜ್ಯದ ಮೊದಲ ಸಿಎಂ ವಿಧಾನಸೌಧದ ಮುಂದೆ ಇರಬೇಕಾದದ್ದು ಅವಶ್ಯಕ ಎಂದ ಮಾಡಿದ್ದೆವು. ವೇಮ ರೆಡ್ಡಿ ಮಲ್ಲಮ್ಮ ಜಯಂತಿ ಮಾಡಿದ್ದು ನಾನೇ. ನಾನು ಅನೇಕ ದಾಸಶರಣರ ಜಯಂತಿ ಮಾಡಿದ್ದೇನೆ. ಬಹುಸಂಖ್ಯಾತ ಜನರಿಗೆ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ಕಡ್ಡಾಯವಾಗಿ ಶಿಕ್ಷಣ ಸಿಕ್ತು. ಮಹಿಳೆಯರಿಗೆ ಅವಕಾಶ ಇತ್ತಾ? ರೆಡ್ಡಿ ಸಮುದಾಯವನ್ನು 2ಸಿ ವರ್ಗಕ್ಕೆ ಮೀಸಲಾತಿ ಸೇರಿಸಿ ಎಂದ ಜಯರಾಂ ರೆಡ್ಡಿ ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ಹೋಗಿ ಸ್ಟೇ ತಂದಿದ್ದಾರೆ. ಅದಕ್ಕೆ ನಾನು ಜಾರಿಗೆ ಕೊಡಲ್ಲ ಅಂತ ಬಿಜೆಪಿ ಸರ್ಕಾರ ಕೋರ್ಟ್ ಗೆ ಹೇಳಿದ್ದಾರೆ. ಕೋರ್ಟ್ ನಲ್ಲಿ ಇತ್ಯರ್ಥ ಆಗದೆ ನಾವು ಏನು ಮಾಡೋಕೆ ಆಗಲ್ಲ. ಶಿಕ್ಷಣ ಸಂಸ್ಥೆಗಳಿಗೆ ಜಾಗ ಕೊಡಿ ಅಂತ ಮನವಿ ಮಾಡಿದ್ದಾರೆ. ಅರಣ್ಯ ಜಾಗ ಕೇಳಬೇಡಿ ಕಂದಾಯ ಜಮೀನು ಇದ್ದರೆ ಮಾಹಿತಿ ಕೊಡಿ ಮಂಜೂರು ಮಾಡ್ತೀನಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷರಾದ ಎಸ್.ಜಯರಾಮ ರೆಡ್ಡಿ, ಗಂಗಾವತಿ ಶಾಸಕರಾದ ಜನಾರ್ಧನರೆಡ್ಡಿ, ಮಾಜಿ ಸಚಿವ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.