ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ತಾಯಿ ಮತ್ತು ಮಗನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹಾವು ಕಚ್ಚಿದ ವಿಷಯ ತಡವಾಗಿ ಗೊತ್ತಾದ್ದರಿಂದ ಚಿಕಿತ್ಸೆ ತಕ್ಷಣವೇ ದೊರೆಯದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಯಚೂರು (ಜೂ. 30): ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಾತ್ರಿ ಮಲಗಿದ್ದ ತಾಯಿ ಮತ್ತು ಮಗನಿಗೆ ಹಾವು ಕಚ್ಚಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೃತರು – ಸುಬ್ಬಮ್ಮ (35) ಮತ್ತು ಅವರ ಪುತ್ರ ಬಸವರಾಜ್ (10 ವರ್ಷ) ಎಂದು ಗುರುತಿಸಲಾಗಿದೆ. ಇವರು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ವಿಷಪೂರಿತ ಹಾವು ಕಚ್ಚಿದೆ. ಅವರು ಒದ್ದಾಡುವುದನ್ನು ನೋಡಿದ ಮನೆಯವರು ತಾಯಿ ಮತ್ತು ಮಗನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ, ಮಧ್ಯರಾತ್ರಿ ವಾಹನವನ್ನು ತಯಾರಿ ಮಾಡಿಕೊಂಡಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಹಾವು ಕಚ್ಚಿದ ಸಂದರ್ಭ ಅವರು ಮಲಗಿದ್ದರಿಂದ ತಕ್ಷಣ ಗೊತ್ತಾಗಿಲ್ಲ. ಇನ್ನು ವಿಷ ದೇಹಕ್ಕೆ ಆವರಿಸಿಕೊಂಡು ಹಾವು ಕಚ್ಚಿದ ಘಟನೆ ಗೊತ್ತಾಗುವಷ್ಟರಲ್ಲಿ ತಡವಾಗಿತ್ತು. ಆದ್ದರಿಂದ ಹಾವು ಕಚ್ಚಿದ ತಕ್ಷಣವೇ ವಿಷಯ ಗೊತ್ತಾಗದ ಕಾರಣ ಚಿಕಿತ್ಸೆ ನೀಡಲು ಕೂಡ ವಿಳಂಬವಾಗಿದೆ. ಇನ್ನು ಸ್ಥಳೀಯರ ಪ್ರಕಾರ, ಗ್ರಾಮದಲ್ಲಿ ಇತ್ತೀಚೆಗೆ ಹಾವು ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದ್ದು, ಈ ಘಟನೆಯು ಜನರಲ್ಲಿ ಆತಂಕ ಹೆಚ್ಚಿಸಿದೆ. ಗ್ರಾಮಸ್ಥರು ಈಗ ಸುರಕ್ಷತಾ ಕ್ರಮಗಳ ಕುರಿತು ಹೆಚ್ಚು ಎಚ್ಚರಿಕೆಯಾಗಬೇಕೆಂದು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಸಲಹೆ ನೀಡಲಾಗಿದೆ.