ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗುವ ಮೊಬೈಲ್ ಆ್ಯಪ್ ಅನ್ನು ಸಾರಿಗೆ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. 

ಬೆಂಗಳೂರು (ಅ.30): ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗುವ ಮೊಬೈಲ್ ಆ್ಯಪ್ ಅನ್ನು ಸಾರಿಗೆ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಭಾನುವಾರ ನಗರದ ಗುಂಡೂರಾವ್ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಚಾಲಕರ ಅನುಕೂಲಕ್ಕಾಗಿ ಸರ್ಕಾರದಿಂದಲೇ ಆ್ಯಪ್ ಒದಗಿಸಬೇಕು ಎಂಬ ಬೇಡಿಕೆ ತುಂಬಾ ವರ್ಷಗಳಿಂದ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಇಲಾಖೆಯಲ್ಲಿ ಕೆಲಸ ನಡೆಯುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಡವಾದರೂ ಚಾಲಕರಿಗೆ ಅನುಕೂಲವಾಗುವಂತೆ ಆ್ಯಪ್ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಟ್ಯಾಕ್ಸಿ, ಆಟೋ, ಲಾರಿ, ಟೆಂಪೋ ಸೇರಿದಂತೆ ಎಲ್ಲ ಮಾದರಿಯ ಸರಕು ಮತ್ತು ಸಾರಿಗೆ ವಾಹನಗಳ ಚಾಲಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಮಂಡಳಿ ಸ್ಥಾಪನೆ ಮಾಡಬೇಕೆಂಬ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಮಂಡಳಿ ಸ್ಥಾಪಿಸುವುದರಿಂದ ಕಟ್ಟಡ ಕಾರ್ಮಿಕರಿಗೆ ಇರುವಂತೆ ಎಲ್ಲ ಸೌಲಭ್ಯಗಳು ಚಾಲಕರಿಗೂ ಸಿಗುತ್ತವೆ. ಈ ಬಗ್ಗೆ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುತ್ತದೆ. 

ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ: ನಿಕ್ಲೆಗ್ ನಮಸ್ಕಾರ, ಎಂಚ ಉಲ್ಲರ್ ಎಂದ ಸಿದ್ಧರಾಮಯ್ಯ

ಸಾರಿಗೆ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಬೇಕಾಗುವ ಹಣವನ್ನು ತೆರಿಗೆ ರೂಪದಲ್ಲಿ ಚಾಲಕರಿಗೆ ವಿಧಿಸದೆ ಪರ್ಯಾಯ ಮಾರ್ಗಗಳ ಮೂಲಕ ಸಂಪನ್ಮೂಲ ಕ್ರೋಢಿಕರಣ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಹಣವನ್ನು ಬಸ್ ತಯಾರಿಸುವ ಖಾಸಗಿ ಕಂಪನಿಗಳಿಗೆ ನೀಡುವ ಬದಲು ಸಾರಿಗೆ ನಿಗಮಗಳಿಗೇ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಇದೇ ವೇಳೆ ಒಕ್ಕೂಟವು ರಾಜ್ಯದ ಅಸಂಘಟಿತ ಸಾರಿಗೆ ಕಾರ್ಮಿಕ ವರ್ಗಕ್ಕೆ ಪಿಎಫ್‌, ಇಎಸ್‌ಐ, ಸಾಲ ಸೌಲಭ್ಯ, ವಿಮೆ, ಪಿಂಚಣಿ, ಮಕ್ಕಳ ಶಿಕ್ಷಣಕ್ಕೆ ಯೋಜನೆಗಳು ಇಲ್ಲ. 

ರಾಜ್ಯಭಾಷೆ ಶಿಕ್ಷಣ ಮಾಧ್ಯಮವಾಗುವ ಮಸೂದೆ ಅಂಗೀಕರಿಸಲಿ: ಸಂಸದ ಶ್ರೀನಿವಾಸ್‌ ಪ್ರಸಾದ್‌

ಆದರೂ ಚಾಲಕರು ದುಡಿಯುತ್ತಿದ್ದಾರೆ. ಚಾಲಕರು ಮತ್ತು ಅವರ ಕುಟುಂಬ ಸೇರಿ ರಾಜ್ಯದ 1 ಕೋಟಿ ಜನರಿಗೆ ಆರೋಗ್ಯ ರಕ್ಷಣೆಯ ಖಾತರಿ ಇಲ್ಲ. ರಾಷ್ಟ್ರಮಟ್ಟದಲ್ಲೂ ಇದೇ ಪರಿಸ್ಥಿತಿ ಇದೆ. ಅದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಸಾರಿಗೆ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತಾ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು. ಒಕ್ಕೂಟದ ಕಾರ್ಯದರ್ಶಿ ಕುಪ್ಪುಸ್ವಾಮಿ, ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ ಮತ್ತು ವಿವಿಧ ಸಾರಿಗೆ ಸಂಘಟನೆಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು.