Asianet Suvarna News Asianet Suvarna News

PSI Recruitment Scam: ಮಾಜಿ ಸೈನಿಕನ ಬಂಧಿಸಿದ ಸಿಐಡಿ ಅಧಿಕಾರಿಗಳು!

ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೋರ್ವನನ್ನು ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿ ಬಂಧಿಸಿದ್ದಾರೆ. 

psi recruitment illegal case former soldier arrested in kalaburagi gvd
Author
Bangalore, First Published Jun 21, 2022, 4:30 AM IST

ಕಲಬುರಗಿ (ಜೂ.21): ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೋರ್ವನನ್ನು ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿ ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ನಿವಾಸಿ ವಿಶ್ವನಾಥ್‌ ಮಾನೆ (38) ಬಂಧಿತ ಆರೋಪಿ. ಕಲಬುರಗಿ ನಗರದಲ್ಲಿರುವ ನೋಬಲ್‌ ಖಾಸಗಿ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಈತ ಎಲೆಕ್ಟ್ರಾನಿಕ್‌ ಬ್ಲೂಟೂತ್‌ ಡಿವೈಸ್‌ ಬಳಸಿ ಪರೀಕ್ಷೆ ಬರೆದು, ಎಕ್ಸ್‌ ಸರ್ವಿಸ್‌ ಮ್ಯಾನ್‌ ಕೋಟಾದಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್‌ ಪಡೆದಿದ್ದ ಎಂದು ತಿಳಿದು ಬಂದಿದೆ.

ಈತ ಸದ್ಯಕ್ಕೆ ಕಲಬುರಗಿಯಲ್ಲಿರುವ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಪಡೆಯಲ್ಲಿ ಸಿಬ್ಬಂದಿಯಾಗಿ ಕೆಲಸದಲ್ಲಿದ್ದ. ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ಪ್ರಕಾಶ ರಾಠೋಡ ಮತ್ತವರ ತಂಡದವರು ಸೋಮವಾರ ಈತನನ್ನು ಎಸ್‌ಡಿಆರ್‌ಎಫ್‌ ಕಚೇರಿಯ ಮುಂದೆಯೇ ಬಂಧಿಸಿ ವಶಕ್ಕೆ ಪಡಂದಿದ್ದಾರೆ. ಅಕ್ರಮದ ಕಿಂಗ್‌ಪಿನ್‌ ಅಫಜಲ್ಪುರದ ಸೊನ್ನ ಊರಿನ ಆರ್‌ಡಿ ಪಾಟೀಲ್‌ ಈತನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಮಾನೆ ಈತ ಬ್ಲೂಟೂತ್‌ ಡಿವೈಸ್‌ ಬಳಸಿಯೇ ಪರೀಕ್ಷೆ ಬರೆದಿದ್ದ ಎಂಬಂಶ ತನಿಖೆಯಲ್ಲಿ ಗೊತ್ತಾಗಿದೆ. ಅಫಜಲ್ಪುರ ತಾಲೂಕಿನ ಗೌರ್‌ (ಬಿ) ನಿವೃತ್ತ ಸೈನಿಕ ಮಾನೆ ಈತನ ಪತ್ನಿಯ ತವರೂರು. ಹೀಗಾಗಿ ಈತ ಮುದ್ದೆಬಿಹಾಳದವನಾದರೂ ಕಿಂಗ್‌ಪಿನ್‌ ಆರ್‌ಡಿ ಪಾಟೀಲನ ಸಾಮಿಪ್ಯ ಬಂದು ಅಕ್ರಮದಿಂದ ಪರೀಕ್ಷೆ ಬರೆದ ಬಗ್ಗೆ ತನಿಖೆಯಲ್ಲಿ ಮಾನೆ ಬಾಯಿ ಬಿಟ್ಟಿದ್ದಾನೆಂದು ಗೊತ್ತಾಗಿದೆ.

ಪಿಎಸ್‌ಐ ಅಕ್ರಮ ನೇಮಕಾತಿ: ಸಿಸಿ ಕ್ಯಾಮೆರಾ ಆಫ್‌ ಮಾಡಿ ಒಎಂಆರ್‌ ಶೀಟ್‌ ತಿದ್ದುಪಡಿ!

ರಾಜ್ಯದ 11 ಕೇಂದ್ರಗಳಲ್ಲಿ ಎಸ್‌ಐ ಪರೀಕ್ಷೆ ಅಕ್ರಮ: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಬೆಂಗಳೂರು ಹಾಗೂ ಕಲಬುರಗಿ ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಸಂಗತಿ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಕ್ರಮದಲ್ಲಿ 172 ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಕೇಂಬ್ರಿಡ್ಜ್‌, ನ್ಯೂ ಹಾರಿಜನ್‌, ಸೇಂಟ್‌ ಆನ್ಸ್‌ ಬಾಲಕಿಯರ ಕಾಲೇಜು ಸೇರಿ 7 ಹಾಗೂ ಕಲಬುರಗಿ ನಗರದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ, ಎಂ.ಎಲ್‌. ಇರಾನಿ ಸೇರಿ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿದ್ದ ಅಭ್ಯರ್ಥಿಗಳು ಅಕ್ರಮದಲ್ಲಿ ತೊಡಗಿದ್ದಕ್ಕೆ ಪುರಾವೆಗಳು ಸಿಕ್ಕಿವೆ. 

ಈ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ರಾರ‍ಯಂಕ್‌ ಮೂಲಕ ಪಿಎಸ್‌ಐ ಹುದ್ದೆ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ 28 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಇನ್ನೂ ತನಿಖೆ ಮುಂದುವರೆದಿದ್ದು, ಪರೀಕ್ಷಾ ಕೇಂದ್ರ ಹಾಗೂ ಬಂಧಿತರ ಸಂಖ್ಯೆ ಸಹ ಹೆಚ್ಚಾಗಲಿದೆ ಎಂದು ಸಿಐಡಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಪಿಎಸ್‌ಐ ಹಗರಣದಲ್ಲಿ ಬೆಂಗಳೂರು ಹಾಗೂ ಕಲಬುರಗಿ ನಗರದಲ್ಲಿ ಪ್ರತ್ಯೇಕವಾಗಿ ಆರೋಪಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಲಬುರಗಿ ನಗರದ ಪರೀಕ್ಷಾ ಕೇಂದ್ರದಲ್ಲಿ ದಿವ್ಯಾ ಹಾಗರಗಿ ತಂಡವು ಪರೀಕ್ಷಾ ಕೇಂದ್ರದಲ್ಲೇ ಒಎಂಆರ್‌ ತಿದ್ದುಪಡಿ ಮಾಡಿ ಅಭ್ಯರ್ಥಿಗಳಿಗೆ ನೆರವಾಗಿದ್ದರೆ, ಕಾಂಗ್ರೆಸ್‌ ಮುಖಂಡ ರುದ್ರಗೌಡ ಪಾಟೀಲ್‌ ಹಾಗೂ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ತಂಡವು ಪರೀಕ್ಷಾ ಕೇಂದ್ರಗಳಿಗೆ ಬ್ಲೂಟೂತ್‌ ಪೂರೈಸಿ ಅಭ್ಯರ್ಥಿಗಳಿಗೆ ಸಾಥ್‌ ಕೊಟ್ಟಿದೆ. 

PSI Recruitment Scam: ರಾಜ್ಯದ 11 ಕೇಂದ್ರಗಳಲ್ಲಿ ಎಸ್‌ಐ ಪರೀಕ್ಷೆ ಅಕ್ರಮ, ಅಭ್ಯರ್ಥಿಗಳಿಗೆ ಸಂಕಷ್ಟ

ಆದರೆ ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ತಂಡವು ನೇರವಾಗಿ ಸಹಾಯ ಮಾಡಿದೆ. ಪರೀಕ್ಷೆ ಮುಗಿದ ಬಳಿಕ ಒಎಂಆರ್‌ ಶೀಟ್‌ಗಳನ್ನು ನೇಮಕಾತಿ ವಿಭಾಗದ ಸ್ಟ್ರಾಂಗ್‌ ರೂಮ್‌ನಲ್ಲೇ ಅಧಿಕಾರಿ ಹಾಗೂ ಸಿಬ್ಬಂದಿ ತಿದ್ದುಪಡಿ ಮಾಡಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪದ ಮೇರೆಗೆ 172 ಅಭ್ಯರ್ಥಿಗಳ ಒಎಂಆರ್‌ ಶೀಟ್‌ ಹಾಗೂ ಕಾರ್ಬನ್‌ ಒಎಂಆರ್‌ ಶೀಟ್‌ಗಳನ್ನು ಜಪ್ತಿ ಮಾಡಿ ಬಳಿಕ ಅವುಗಳನ್ನು ಪರಿಶೀಲನೆ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ಕ್ಕೆ ಕಳುಹಿಸಲಾಗಿದೆ. ಒಂದೊಂದಾಗಿ ಒಎಂಆರ್‌ ಶೀಟ್‌ ಅಸಲಿತನ ಬಗ್ಗೆ ಎಫ್‌ಎಸ್‌ಎಲ್‌ ವರದಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios