ಭಯೋತ್ಪಾದಕ ನೆಲೆಗಳನ್ನು ನಮ್ಮ ದೇಶದ ಸೈನ್ಯ ದ್ವಂಸ‌‌ ಮಾಡಿದೆ. ಆದರೆ ಕೇಂದ್ರದ ಕದನವಿರಾಮ ನಿರ್ಧಾರ ನಿರಾಸೆ ಮೂಡಿಸಿದೆ ಎಂದು ಗಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ (ಮೇ.13): ಭಯೋತ್ಪಾದಕ ನೆಲೆಗಳನ್ನು ನಮ್ಮ ದೇಶದ ಸೈನ್ಯ ದ್ವಂಸ‌‌ ಮಾಡಿದೆ. ಆದರೆ ಕೇಂದ್ರದ ಕದನವಿರಾಮ ನಿರ್ಧಾರ ನಿರಾಸೆ ಮೂಡಿಸಿದೆ ಎಂದು ಗಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕಲಬುರಗಿ ಪ್ರವಾಸದಲ್ಲಿರುವ ಸಚಿವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತ, ಭಯೋತ್ಪಾದಕ ತಾಣಗಳನ್ನು ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕದನ ವಿರಾಮದ ನಿರ್ಧಾರದಿಂದ ಸೇನೆಗೆ ಹಾಗೂ ಭಾರತೀಯ ಸಾಮಾನ್ಯ‌ ನಾಗರಿಕರಿಗೆ ನಿರಾಸೆ ತಂದಿದೆ ಎಂದರು.
ಕಾಶ್ಮೀರ ವಿಚಾರ ದ್ವಿಪಕ್ಷೀಯ ವಿಷಯವಾಗಿದ್ದು, ಪಾಕಿಸ್ತಾನ ಹಾಗೂ ಭಾರತ ನಡುವಿನ ವಿಚಾರವನ್ನು ಈಗ ಅಮೇರಿಕಾ ಮದ್ಯ ಪ್ರವೇಶಿಸುವ ಮೂಲಕ ಅಂತರಾಷ್ಟ್ರೀಯ ವಿಚಾರವನ್ನಾಗಿ ಮಾಡಲಾಗಿದೆ. ಕದನ ವಿರಾಮ ಘೋಷಣೆ ಮಾಡಲು ಟ್ರಂಪ್ ಯಾರು ? ಅವರ ಟ್ವಿಟ್ ನಲ್ಲಿರುವ ಅಂಶಗಳನ್ನು ಗಮನಿಸಿದ್ದೀರಾ? ಕಾಮನ್ ಸೆನ್ಸ್ ಎನ್ನುವ ಪದ ಬಳಸಿ, ಭಾರತಕ್ಕೆ ಬುದ್ದಿ ಹೇಳಿರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ, ವಿದೇಶಾಂಗ ಸಚಿವರು ಹಾಗೂ ರಾಷ್ಟ್ರೀಯ ಭದ್ರತೆ ಸಲಹೆಗಾರರು ಕದನ ವಿರಾಮದ ಬಗ್ಗೆ ಯಾಕೆ ಜನರಿಗೆ ವಾಸ್ತವ ತಿಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ನಮಗೆ ಯುದ್ಧನೂ ಬೇಕು, ಬುದ್ದನೂ ಬೇಕು': ಮಲ್ಲಿಕಾರ್ಜುನ ಖರ್ಗೆ

ವಿದೇಶಾಂಗ ನೀತಿಗಳು ಬಲಿಷ್ಠಗೊಳ್ಳಬೇಕಾದರೆ ಪ್ರಧಾನಿಗಳು ಹೊರದೇಶದ ಪ್ರಧಾನ ಮಂತ್ರಿಗಳನ್ನು ಅಪ್ಪಿಕೊಂಡರೆ‌ ಸಾಲದು, ಅವರೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಚೀನಾ ಹಾಗೂ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಈ ನಡುವೆ ಅಂತರಾಷ್ಟ್ರೀಯ ವಿತ್ತೀಯ ನಿಧಿ ( IMF) ಪಾಕಿಸ್ತಾನಕ್ಕೆ ಸಾಲ ಘೋಷಿಸಿದೆ ಎಂದರೆ ಭಾರತ ಸರ್ಕಾರ ಭಯೋತ್ಪಾದನೆಗೆ ಬೆಂಬಲವಾಗಿರುವ ಪಾಕಿಸ್ತಾನಕ್ಕೆ ಸಾಲ‌ ನೀಡದಂತೆ ಮನವರಿಕೆ ಮಾಡಲು‌ ವಿಫಲವಾಗಿದೆ. ಇದು ವಿದೇಶಾಂಗ ನೀತಿಗಳು ಎಡವುತ್ತಿವೆ ಎನ್ನುವ ಅಭಿಪ್ರಾಯ ಮೂಡುತ್ತಿದೆ ಎಂದರು.
ಕಾಂಗ್ರೆಸ್‌ ಪಕ್ಷದ ದೇಶದ ಹಿತಾಸಕ್ತಿ‌ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ. ಪಹಲ್ಗಾಂ ದಾಳಿಯ ಭಯೋತ್ಪದಾಕರು ಏನಾದರು?; ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಸಚಿವರು, ಭಯೋತ್ಪಾದಕ ದಾಳಿ, ಹಾಗೂ ಕದನ ವಿರಾಮದ ಬಗ್ಗೆ ಪ್ರಧಾನಿ ಸಂಸತ್ತಿನ ಅಧಿವೇಶನ ಕರೆದು‌ ದೇಶದ ನಾಗರಿಕರಿಗೆ ತಿಳಿಸಲಿ ಎಂದು ಒತ್ತಾಯಿಸಿದರು.

ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸುವವರು ಹಾಗೂ ಬಿಜೆಪಿಯ ಬಾಡಿಗೆ ಭಾಷಣಕಾರರು ತಪ್ಪು ಮಾಹಿತಿಯನ್ನೇ ಹೇಳುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯ ಫಲಿತಾಂಶ ಕುಸಿಯುತ್ತಿರುವುದಕ್ಕೆ ತಾವು ಹೊಣೆಗಾರರಾಗುವುದಾಗಿ ಹೇಳಿದ ಸಚಿವರು, ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನೀಲ ನಕ್ಷೆ ತಯಾರಿಸಲಾಗುತ್ತಿದ್ದು, ಬೆಂಗಳೂರು ಮೂಲದ ಎರಡು ಎನ್ ಜಿ ಓ ಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಇದರ ಫಲಿತಾಂಶ ಮುಂದಿನ ಮಾರ್ಚ್ ತಿಂಗಳಲ್ಲಿ ಗೊತ್ತಾಗಲಿದೆ ಎಂದರು.

ಇದನ್ನೂ ಓದಿ: ಸಂವಿಧಾನಕ್ಕೆ ಅತಿಹೆಚ್ಚು ಅವಮಾನ ಮಾಡಿದ್ದೇ ಕಾಂಗ್ರೆಸ್: ಖರ್ಗೆ, ಜ್ಯೂನಿಯರ್ ಖರ್ಗೆ ವಿರೆದ್ಧ ಜೋಶಿ ವಾಗ್ದಾಳಿ!

ಪಾಕಿಸ್ತಾನ ನಂಬಿಕೆಗೆ ಅರ್ಹ ರಾಷ್ಟ್ರವಲ್ಲ, ಕದನ ವಿರಾಮ ಘೋಷಿಸಲಾಗಿದೆ. ಅದನ್ನು ಯಾರು ಘೋಷಿಸಬೇಕು? ಯಾವ ಮಾನದಂಡಗಳ ಅಡಿಯಲ್ಲಿ ಮಾಡಲಾಗಿದೆ? ಕದನ ವಿರಾಮ ಉಲ್ಲಂಘನೆ ಮಾಡಿದರೆ ಯಾವ ಕ್ರಮ ಕೈಗೊಳ್ಳಬೇಕು ? ಎನ್ನುವ ಬಗ್ಗೆ ಸರ್ಕಾರ ಅಧಿವೇಶನ ಕರೆದು ರಾಷ್ಟ್ರದ ಜನರಿಗೆ ವಾಸ್ತವ ತಿಳಿಸಲಿ.

ಪ್ರಿಯಾಂಕ್ ಖರ್ಗೆ, ಸಚಿವ