ಇಟಲಿ ಪ್ರಧಾನಿಗೆ ಮೋದಿ ಚಾಕ್ಲೆಟ್ ನೀಡಿದ ವಿಚಾರವಾಗಿ, ಸಚಿವ ಪ್ರಿಯಾಂಕ್ ಖರ್ಗೆ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ 13 ವರ್ಷಗಳಿಂದ ಮೋದಿ ಅವರು 'ಅಚ್ಚೇ ದಿನ್', 'ವಿಕಸಿತ್ ಭಾರತ್' ನಂತಹ ಘೋಷಣೆಗಳೆಂಬ ಚಾಕ್ಲೆಟ್ ನೀಡಿ ಜನರನ್ನು ಸಮಾಧಾನಿಸುತ್ತಿದ್ದಾರೆ ಎಂದು ವಾಗ್ದಾಳಿ.
ಬೆಂಗಳೂರು (ಮೇ.21): ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಚಾಕ್ಲೆಟ್ ನೀಡಿದ ವಿಚಾರ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡು ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಚಾರವನ್ನು ಉಲ್ಲೇಖಿಸಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯರಿಗೂ ಮೋದಿ ಬಗೆಬಗೆಯ ಚಾಕ್ಲೆಟ್
ಪ್ರಧಾನಿ ಮೋದಿಯವರು ಚಾಕ್ಲೆಟ್ ನೀಡುತ್ತಿರುವುದು ವಿದೇಶಿ ನಾಯಕರಿಗೆ ಮಾತ್ರವಲ್ಲ. ಕಳೆದ 13 ವರ್ಷಗಳಿಂದ ಭಾರತೀಯರಿಗೂ ಬಗೆಬಗೆಯ, ಬಣ್ಣಬಣ್ಣದ ಚಾಕ್ಲೇಟ್ ನೀಡಿದ್ದಾರೆ, ನೀಡುತ್ತಲೇ ಇದ್ದಾರೆ' ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. 'ಮಕ್ಕಳು ಅಳುವಾಗ ಹೇಗೆ ಚಾಕ್ಲೇಟ್ ನೀಡಿ ಸಮಾಧಾನಿಸುತ್ತಾರೋ, ಹಾಗೆಯೇ ದೇಶದ ಜನ ಸಮಸ್ಯೆಗಳಲ್ಲಿ ಸಿಲುಕಿದ್ದಾಗ ಘೋಷಣೆಗಳೆಂಬ ಚಾಕ್ಲೇಟ್ ನೀಡಿ ಸಮಾಧಾನಿಸುವ ಕೆಲಸ ಮಾಡಿದ್ದಾರೆ' ಎಂದು ಟೀಕಿಸಿದ್ದಾರೆ.
ಮೋದಿ ಘೋಷಣೆಗಳ ಪಟ್ಟಿಯೇ ದೊಡ್ಡದು
ಗುಜರಾತ್ ಮಾಡೆಲ್, ಅಚ್ಚೇ ದಿನ್, ವಿಶ್ವಗುರು, ಮೇಕ್ ಇನ್ ಇಂಡಿಯಾ, ಖೇಲೋ ಇಂಡಿಯಾ, ಅಮೃತ್ ಕಾಲ್, ವಿಕಸಿತ್ ಭಾರತ್, ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮನಿರ್ಭರ ಭಾರತ್, ಬೇಟಿ ಬಚಾವೋ-ಬೇಟಿ ಪಡಾವೋ, 20 ಲಕ್ಷ ಕೋಟಿ ಪ್ಯಾಕೇಜ್… ಹೀಗೆ ಮೋದಿಯವರು ಭಾರತೀಯರಿಗೆ ಕೊಟ್ಟಿರುವ ಘೋಷಣೆಗಳೆಂಬ ಚಾಕ್ಲೇಟ್ ಪಟ್ಟಿ ದೊಡ್ಡದಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಮೋದಿ ಕೊಡ್ತಿದ್ದ ಸಿಹಿ ಚಾಕ್ಲೇಟ್ ಈಗ ಕಹಿಯಾಗಿದೆ
ಪ್ರತಿ ಚುನಾವಣೆಗೊಂದು ಘೋಷಣೆ ಮಾಡ್ತಾರೆ, ಪ್ರತಿ ವರ್ಷಕ್ಕೊಂದು ಘೋಷಣೆ ಮಾಡ್ತಾರೆ,ಪ್ರತಿ ವೈಫಲ್ಯಕ್ಕೊಂದು ಘೋಷಣೆ ಮಾಡ್ತಾರೆ. ಆದರೆ ಇವುಗಳಲ್ಲಿ ವಾಸ್ತವ ಜಾರಿ ಬಂದಿದ್ದು ಮಾತ್ರ ಸೊನ್ನೆ. ಭಾರತೀಯರಿಗೆ ಹುಸಿ ಸಂತೋಷವನ್ನು ನೀಡುವ ಈ ಚಾಕ್ಲೆಟ್ ಗಳು ಈಗ ಸಲಹೆಗಳೆಂಬ ಹೊಸ ರೂಪಕ್ಕೆ ತಿರುಗಿವೆ.
ಅಡುಗೆಗೆ ಎಣ್ಣೆ ಬಳಸಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ, ಗಟರ್ ಗ್ಯಾಸ್ ಬಳಸಿ, ವರ್ಕ್ ಫ್ರಮ್ ಹೋಮ್ ಮಾಡಿ, ಬ್ಯುಟಿ ಪಾರ್ಲರ್ಗೆ ಹೋಗಬೇಡಿ, ರಾಸಾಯನಿಕ ಗೊಬ್ಬರ ಬೇಡ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದ್ದಾರೆ.
ಪರಿಸ್ಥಿತಿ ಕೈ ಮೀರಿ ಹೋಗಿದೆ
ಸಿಹಿ ಚಾಕ್ಲೇಟ್ ನೀಡುತ್ತಿದ್ದ ಮೋದಿಯವರು ಈಗ ಭಾರತೀಯರಿಗೆ ಕಹಿ ಚಾಕ್ಲೇಟ್ ನೀಡಲು ಆರಂಭಿಸಿದ್ದಾರೆಂದರೆ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದೇ ಅರ್ಥ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.


