ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ, ಹೊಸ ಮುಖ್ಯ ಅಧೀಕ್ಷಕರು ಬೀಡಿ ಮತ್ತು ಸಿಗರೇಟ್‌ನಂತಹ ಅಕ್ರಮಗಳನ್ನು ನಿಲ್ಲಿಸಿದ್ದಕ್ಕೆ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಊಟ-ತಿಂಡಿ ತ್ಯಜಿಸಿ ಕೈದಿಗಳಿಂದ ಧರಣಿ , ನಿಷೇಧ ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು (ಡಿ.2): ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳನ್ನು ನಿಯಂತ್ರಿಸಲು ಜೈಲು ಆಡಳಿತ ಮಂಡಳಿ ಕೈಗೊಂಡಿರುವ ಕಠಿಣ ಕ್ರಮಗಳ ವಿರುದ್ಧ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ ಮತ್ತು ಸಿಗರೇಟ್ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಕ್ಕೆ ಅಸಮಾಧಾನಗೊಂಡಿರುವ ಕೈದಿಗಳು, ಕಳೆದ ಮೂರು ದಿನಗಳಿಂದ ಊಟ-ತಿಂಡಿ ತ್ಯಜಿಸಿ ಧರಣಿ ಕುಳಿತಿದ್ದಾರೆ.

ಹೊಸ ಮುಖ್ಯ ಅಧೀಕ್ಷಕರಿಂದ ಬ್ರೇಕ್

ಜೈಲಿನೊಳಗೆ ನಡೆಯುತ್ತಿದ್ದ ಅಕ್ರಮಗಳ ವಿಡಿಯೋ ಬಹಿರಂಗವಾದ ನಂತರ, ಮುಖ್ಯ ಅಧೀಕ್ಷಕರಾಗಿ ಅಂಶು ಕುಮಾರ್ ಅವರನ್ನು ನೇಮಕಗೊಂಡ ಬಳಿಕ ಜೈಲು ನಿಯಮ ಉಲ್ಲಂಘಿಸಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಂಶು ಕುಮಾರ್ ದಿಟ್ಟ ಕ್ರಮ ಕೈಗೊಂಡಿದ್ದಾರೆ. ನಿಯಮಾನುಸಾರ, ಜೈಲಿನ ಕೈಪಿಡಿ (Jail Manual) ಪ್ರಕಾರ ಬೀಡಿ ಮತ್ತು ಸಿಗರೇಟ್ ಮಾರಾಟವು ಕಾನೂನುಬಾಹಿರವಾಗಿದೆ. ಈ ಮೊದಲು ಸಿಬ್ಬಂದಿಯ ಅಕ್ರಮ ಸಹಕಾರದಿಂದಾಗಿ ನಿಷೇಧಿತ ವಸ್ತುಗಳು ಸುಲಭವಾಗಿ ಸಿಗುತ್ತಿದ್ದವು.

50ಕ್ಕೂ ಹೆಚ್ಚು ಮೊಬೈಲ್ ವಶ

ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ಶೋಧ ತಂಡವನ್ನು ರಚಿಸಲಾಗಿದೆ. ಈ ತಂಡ ತಪಾಸಣೆ ನಡೆಸಿದಾಗ 50ಕ್ಕಿಂತ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿತು. ಅಲ್ಲದೆ, ಜೈಲಿನೊಳಗೆ ನಡೆಯುತ್ತಿದ್ದ ಅಕ್ರಮ ಬೀಡಿ ಮತ್ತು ಸಿಗರೇಟ್ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿ ನಿಯಂತ್ರಣ ಹೇರಲಾಯಿತು. ಇದರಿಂದ ಕೈದಿಗಳಿಗೆ ಬೀಡಿ ಸಿಗರೇಟ್ ಎಲ್ಲ ಬಂದ್ ಆಗಿರೋದ್ರಿಂದ ಪ್ರತಿಭಟನೆಗಿಳಿದಿದ್ದಾರೆ.

ಕೈದಿಗಳಿಂದ ಧರಣಿ: ಆಡಳಿತ ಕಚೇರಿ ಮುಂದೆ ಪಟ್ಟು

ಇದರಿಂದ ತೀವ್ರ ಅಸಮಾಧಾನಗೊಂಡಿರುವ ಕೈದಿಗಳು ಜೈಲಿನ ಆಡಳಿತ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಬೀಡಿ ಮತ್ತು ಸಿಗರೇಟ್ ಮಾರಾಟಕ್ಕೆ ಮತ್ತೆ ಅವಕಾಶ ಕಲ್ಪಿಸಬೇಕು ಎಂದು ಕೈದಿಗಳು ಒತ್ತಾಯಿಸುತ್ತಿದ್ದಾರೆ.

ಹಿರಿಯ ಅಧಿಕಾರಿಗಳು ಜೈಲಿನ ನಿಯಮಾವಳಿಗಳ ಕುರಿತು ಕೈದಿಗಳಿಗೆ ತಿಳಿ ಹೇಳಲು ಪ್ರಯತ್ನಿಸಿದರೂ, ಅವರು ತಮ್ಮ ಪಟ್ಟು ಬಿಡುತ್ತಿಲ್ಲ. 'ಇದುವರೆಗೂ ಬೀಡಿ, ಸಿಗರೇಟ್‌ಗೆ ಅವಕಾಶ ಇಲ್ಲ. ಜೈಲಿನ ಕೈಪಿಡಿ ಅನುಸಾರವೇ ಕ್ರಮ ಕೈಗೊಳ್ಳಲಾಗುವುದು,' ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.