ರಾಜಕೀಯ ವಿಕೇಂದ್ರೀಕರಣದ ಜೊತೆಗೆ ಆರ್ಥಿಕ ವಿಕೇಂದ್ರೀಕರಣ ಆಗಬೇಕೆಂಬ ದೃಷ್ಟಿಯಿಂದ ಗ್ರಾಮ ಪಂಚಾಯತ್‌ಗಳ ಅನುದಾನ ಹೆಚ್ಚಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. 

ಬೆಂಗಳೂರು (ಮಾ.25): ರಾಜಕೀಯ ವಿಕೇಂದ್ರೀಕರಣದ ಜೊತೆಗೆ ಆರ್ಥಿಕ ವಿಕೇಂದ್ರೀಕರಣ ಆಗಬೇಕೆಂಬ ದೃಷ್ಟಿಯಿಂದ ಗ್ರಾಮ ಪಂಚಾಯತ್‌ಗಳ ಅನುದಾನ ಹೆಚ್ಚಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಶುಕ್ರವಾರ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ ಹಾಗೂ 585 ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಸಮಾರಂಭ-2023 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ಗ್ರಾಮ ಪಂಚಾಯತ್‌ ಸೇರಿದಂತೆ ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಕೇವಲ ರಾಜಕೀಯ ಅಧಿಕಾರ ಕೊಟ್ಟರೆ ಸಾಲದು. ಆರ್ಥಿಕ ಅಧಿಕಾರವನ್ನು ಕೊಡಬೇಕೆಂಬುದು ಬಹಳ ವರ್ಷಗಳ ಬೇಡಿಕೆ. ಮಹಾತ್ಮಗಾಂಧಿ ನರೇಗಾದಲ್ಲಿ ರಾಜ್ಯ ಸರ್ಕಾರದ ಪಂಚಾಯತ್‌ ರಾಜ್‌ ಇಲಾಖೆ ಅತ್ಯುತ್ತಮ ಕೆಲಸ ಮಾಡಿದೆ. ನಾವು ಇಡೀ ದೇಶದಲ್ಲಿ ನಂ.1 ಸ್ಥಾನದಲ್ಲಿದ್ದೇವೆ. ಕೊಟ್ಟಿರುವಂತ ಗುರಿಯನ್ನು ಮುಟ್ಟಿಹೆಚ್ಚುವರಿ ಅನುದಾನ ಪಡೆದುಕೊಳ್ಳುವ ಕಾರ್ಯವನ್ನು ಕರ್ನಾಟಕ ಸರ್ಕಾರ ಮಾಡುತ್ತಿದೆ. ಹೀಗಾಗಿ ಪ್ರತಿಯೊಂದು ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರು, ಸಿಬ್ಬಂದಿಗಳು, ಅಧಿಕಾರಿಗಳಿಗೆ ವಿಶೇಷ ಅಭಿನಂದನೆ ತಿಳಿಸುತ್ತೇನೆ ಎಂದರು.

5, 8ನೇ ಕ್ಲಾಸ್‌ ಪರೀಕ್ಷೆ ಮುಂದೂಡಿಕೆ: ಮತ್ತೊಮ್ಮೆ ಹೈಕೋರ್ಟ್‌ ನಕಾರ

ನರೇಗಾದಿಂದ ಕೆಲಸ, ಆಸ್ತಿ: ನರೇಗಾದಿಂದ ಸಾಕಷ್ಟುಆಸ್ತಿಗಳು ನಿರ್ಮಾಣವಾಗಿವೆ. ಬಹಳಷ್ಟುಜನರಿಗೆ ಕೆಲಸವೂ ಸಿಕ್ಕಿದೆ. ಕಾನೂನಿನಲ್ಲಿ ಬದಲಾವಣೆ ತಂದು ಇನ್ನೂ ಹೆಚ್ಚಿನ ರೀತಿಯಲ್ಲಿ ಅರ್ಥಪೂರ್ಣವಾಗಿ ಕೆಲಸ ಮಾಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ ಇತ್ಯಾದಿಗಳಿಗೆ ನರೇಗಾ ಬಳಕೆಯಾಗುವುದು ಬಹಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಚಿವರೊಂದಿಗೆ ಈಗಾಗಲೇ ಈ ವಿಷಯದ ಕುರಿತು ಮಾತನಾಡಿದ್ದು ಮುಂದಿನ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಎ,ಬಿ,ಸಿ,ಡಿ ಹಂತದ ಗ್ರಾಮ ಪಂಚಾಯತ್‌ಗಳಿಗೆ ಅನುದಾನವನ್ನು ಎರಡುಪಟ್ಟು ಮಾಡಿದ್ದೇವೆ. ಈ ಹಿಂದೆ 10 ಲಕ್ಷ ಪಡೆಯುತ್ತಿದ್ದ ಪಂಚಾಯತ್‌ಗೆ 20 ಲಕ್ಷ ರು. ಸಿಗುತ್ತದೆ. 30 ಲಕ್ಷ ಪಡೆಯುತ್ತಿದ್ದ ಗ್ರಾಪಂಗೆ 60 ಲಕ್ಷ ಸಿಗಲಿದೆ. ಯಾಕೆಂದರೆ ಈ ಹಿಂದೆ ಬರುತ್ತಿದ್ದ ಅನುದಾನ ವಿದ್ಯುತ್‌ ಬಿಲ್‌ ಪಾವತಿ ಸೇರಿದಂತೆ ಮತ್ತಿತರ ವಿಷಯಕ್ಕೆ ಖರ್ಚಾಗುತ್ತಿತ್ತು. ಹೀಗಾಗಿ ನಿಮ್ಮ ವಿವೇಚನೆಯಲ್ಲಿ ಆಸ್ತಿ ನಿರ್ಮಾಣ ಮಾಡಲು ಅನುದಾನ ಹೆಚ್ಚಿಸಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ಬೊಕ್ಕಸದಿಂದ 2 ಸಾವಿರ ಕೋಟಿ ರು. ಹೆಚ್ಚುವರಿಯಾಗಿ ಗ್ರಾಮ ಪಂಚಾಯತ್‌ಗಳಿಗೆ ಕೊಟ್ಟಿದ್ದೇನೆ ಎಂದರು.

585 ಪಂಚಾಯ್ತಿಗೆ ನರೇಗಾ ಪ್ರಶಸ್ತಿ: ಇದೇ ವೇಳೆ 2019-20, 2020-21 ಮತ್ತು 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಮಹಾತ್ಮ ಗಾಂಧಿ ನರೇಗಾ ಪ್ರಶಸ್ತಿಯನ್ನು ಒಟ್ಟು 585 ಪಂಚಾಯತ್‌ಗಳಿಗೆ ವಿತರಿಸಲಾಯಿತು. ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರ್‌, ಕಂದಾಯ ಸಚಿವ ಆರ್‌.ಅಶೋಕ್‌, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ್‌ ಹೆಗಡೆ, ವಿಧಾನ ಪರಿಷತ್ತು ಸದಸ್ಯ ಅರುಣ್‌, ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್‌.ಕೆ.ಅತೀಕ್‌, ಉಮಾ ಮಹದೇವನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರಾಹುಲ್‌ ಗಾಂಧಿಗೆ ಜೈಲು ಶಿಕ್ಷೆ, ಅನರ್ಹ: ಇವೆಲ್ಲದಕ್ಕೂ ಕಾರಣ ಮುಳಬಾಗಿಲು ಸಾಕ್ಷಿ ರಘುನಾಥ್‌

ಆಸ್ತಿ ತೆರಿಗೆ ಗೂಗಲ್‌, ಫೋನ್‌ ಪೇನಲ್ಲೇ ಕಟ್ಟಿ: ಕಾರ್ಯಕ್ರಮದಲ್ಲಿ ಆಸ್ತಿ ತೆರಿಗೆಯನ್ನು ಫೋನ್‌ಪೇ, ಗೂಗಲ್‌ ಪೇ ಮೂಲಕ ಕಟ್ಟಲು ಮತ್ತು ತೆರಿಗೆ ಸಂಗ್ರಹದ ಪಿಒಎಸ್‌ ಪಿಒಎಸ್‌ ಉಪಕರಣಗಳ ಲೋಕಾರ್ಪಣೆ ಹಾಗೂ ಜಲಶಕ್ತಿ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.